ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ 21 ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯ ಸರ್ಕಾರ 21 ಐಎಎಸ್ (IAS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರನ್ನು ಪ್ರವಾಸೋದ್ಯಮ ನಿರ್ದೇಶಕರಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಅವರ ಬದಲಿಗೆ ಮೈಸೂರು ಜಿಲ್ಲಾಧಿಕಾರಿಯಾಗಿ ಲಕ್ಷ್ಮೀಕಾಂತ್​ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಲಕ್ಷ್ಮಿಕಾಂತ್ ಅವರು ಈ ಹಿಂದೆ ಮೈಸೂರು ಪಾಲಿಕೆ ಆಯುಕ್ತರಾಗಿದ್ದರು.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಡಾ. ರಾಜೇಂದ್ರ ಕೆ.ವಿ ಅವರನ್ನು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.
ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾಗಿದ್ದ ಡಾ. ರಾಮಪ್ರಸಾದ ಮನೋಹರ ಅವರನ್ನು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದ ನಿತೇಶ ಪಾಟೀಲ ಅವರನ್ನು ಎಂಎಸ್‌ಎಂಇ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಖಜಾನೆ ಆಯುಕ್ತರಾಗಿದ್ದ ಡಾ. ಅರುಂಧತಿ ಚಂದ್ರಶೇಖರ ಅವರನ್ನು ಪಂಚಾಯತ್‌ರಾಜ್‌ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿದೆ.

ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಚಂದ್ರಶೇಖರ ನಾಯಕ ಎಲ್.‌ ಅವರನ್ನು ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ ಹುದ್ದೆಗೆ, ಎಂಎಸ್‌ಎಂಇ ನಿರ್ದೇಶಕ ವಿಜಯಮಹಾಂತೇಶ ಬಿ.ದಾನಮ್ಮನವರ ಅವರನ್ನು ಹಾವೇರಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
ಬೀದರ ಜಿಲ್ಲಾಧಿಕಾರಿಯಾಗಿದ್ದ ಗೋವಿಂದ ರೆಡ್ಡಿ ಅವರನ್ನು ಗದಗ ಜಿಲ್ಲಾಧಿಕಾರಿಯಾಗಿ, ಹಾವೇರಿ ಜಿಲ್ಲಾಧಿಕಾರಿಯಾಗಿದ್ದ ರಘುನಂದನ ಮೂರ್ತಿ ಅವರನ್ನು ಬೆಂಗಳೂರು ಖಜಾನೆ ಆಯುಕ್ತರ ಹುದ್ದೆಗೆ, ಕೃಷಿ ಮಾರ್ಕೆಟಿಂಗ್‌ ನಿರ್ದೇಶಕರಾಗಿದ್ದ ಡಾ. ಗಂಗಾಧರಸ್ವಾಮಿ ಅವರನ್ನು ದಾವಣಗೆರೆ ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಕೆಯುಐಡಿಎಫ್‌ಸಿ ನಿರ್ವಹಣಾ ನಿರ್ದೇಶಕರಾಗಿದ್ದ ಲಕ್ಷ್ಮೀಕಾಂತ ರೆಡ್ಡಿ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ,
ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ನಿತೀಶ ಕೆ. ಅವರನ್ನು ರಾಯಚೂರು ಜಿಲ್ಲಾಧಿಕಾರಿಯಾಗಿ, ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕರಾಗಿದ್ದ ಮೊಹಮ್ಮದ್‌ ರೋಶನ್‌ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯಾಗಿ,ಕರ್ನಾಟಕ ವಿದ್ಯುತ್‌ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಶಿಲ್ಪಾ ಶರ್ಮಾ ಅವರನ್ನು ಬೀದರ ಜಿಲ್ಲಾಧಿಕಾರಿಯಾಗಿ, ಎಡಿಸಿಎಸ್‌ ನಿರ್ದೇಶಕರಾಗಿದ್ದ ದಿಲೇಶ ಸಸಿ ಅವರನ್ನು ಬೆಂಗಳೂರು ಇ- ಆಡಳಿತ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ)ಯಾಗಿ ವರ್ಗಾಯಿಸಲಾಗಿದೆ.

ಪ್ರಮುಖ ಸುದ್ದಿ :-   ಆರ್‌ಎಸ್‌ಎಸ್‌ ನೋಂದಣಿ- ಕಾನೂನುಬದ್ಧ ಸ್ಥಿತಿಗತಿಯ ಬಗ್ಗೆ ಸ್ಪಷ್ಟನೆ ಕೋರಿ ಮುಖ್ಯಸ್ಥ ಮೋಹನ ಭಾಗವತ್‌ಗೆ ಪತ್ರ ಬರೆದ ಪ್ರಿಯಾಂಕ್ ಖರ್ಗೆ

ಶಿವಮೊಗ್ಗ ಜಿಲ್ಲಾ ಪಂಚಾಯತ್‌ ಸಿಇಒ ಆಗಿದ್ದ ಸ್ನೇಹಲ್‌ ಸುಧಾಕರ ಲೋಖಂಡೆ ಅವರನ್ನು ಕರ್ನಾಟಕ ವಿದ್ಯುತ್‌ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾಗಿ, ಕೆಎಸ್‌ಎಸ್‌ಆರ್‌ಡಿ ನಿರ್ದೇಶಕಿಯಾಗಿದ್ದ ಶ್ರೀರೂಪಾ ಅವರನ್ನು ಪಶುಸಂಗೋಪನೆ ಮತ್ತು ಪಶುವೈದ್ಯ ಸೇವೆ ಇಲಾಖೆ ಆಯುಕ್ತರನ್ನಾಗಿ, ಕಲಬುರಗಿ ಸಿಟಿ ಕಾರ್ಪೊರೇಶನ್‌ ಡಿಸಿಯಾಗಿದ್ದ ಜಿಟ್ಟೆ ಮಾಧವ ವಿಠಲ ರಾವ್ ಅವರನ್ನು ಬಾಗಲಕೋಟೆ ಪುನರ್ವಸತಿ ಕೇಂದ್ರದ ಜನರಲ್‌ ಮ್ಯಾನೇಜರ್‌ ಹುದ್ದೆಗೆ, ಬಳ್ಳಾರಿ ಹಿರಿಯ ಸಹಾಯಕ ಆಯುಕ್ತರಾಗಿದ್ದ ಹೇಮಂತ್‌ ಎನ್.‌ ಅವರನ್ನು ಶಿವಮೊಗ್ಗ ಜಿ.ಪಂ ಸಿಇಒ ಆಗಿ, ಹೊಸಪೇಟೆ ಹಿರಿಯ ಸಹಾಯಕ ಆಯುಕ್ತರಾಗಿದ್ದ ನೊಂಗ್ಲಜ್‌ ಮೊಹಮದ್‌ ಅಲಿ ಅಕ್ರಂ ಶಾ ಅವರನ್ನು ವಿಜಯನಗರ ಜಿ.ಪಂ ಸಿಇಒ ಆಗಿ ವರ್ಗಾಯಿಸಲಾಗಿದೆ. ಅಲ್ಲದೆ, ಜ್ಯೋತಿ ಕೆ. ಅವರನ್ನು ಜವಳಿ ಅಭಿವೃದ್ಧಿ ಆಯುಕ್ತ ಕೈಮಗ್ಗ ನಿರ್ದೇಶಕರಾಗಿ ಹಾಗೂ ಶ್ರೀಧರ ಸಿ.ಎನ್‌ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸೋಶಿಯಲ್‌ ಆಡಿಟ್‌ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement