ರಾಮನಗರ : ಬಿಸಿ ನೀರು ಕಾಯಿಸುವ ಅನಿಲ ಗೀಸರ್ನ ವಿಷಕಾರಿ ಕಾರ್ಬನ್ ಮೊನಾಕ್ಸೈಡ್ ಸೋರಿಕೆಯಿಂದಾಗಿ ತಾಯಿ ಮತ್ತು ಮಗ ಮೃತಪಟ್ಟ ಘಟನೆ ಜಿಲ್ಲೆಯ ಮಾಗಡಿ ಪಟ್ಟಣದ ಜ್ಯೋತಿನಗರದಲ್ಲಿ ಭಾನುವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ಶೋಭಾ(40) ಹಾಗೂ ಅವರ ಪುತ್ರ ದಿಲೀಪ (17) ಎಂದು ಗುರುತಿಸಲಾಗಿದೆ. ರಾತ್ರಿ ಏಳು ಗಂಟೆ ಸುಮಾರಿಗೆ ದಿಲೀಪ ಸ್ನಾನದ ಕೊಠಡಿಯಲ್ಲಿರುವ ಗೀಸರ್ ಸ್ವಿಚ್ ಆನ್ ಮಾಡಿಕೊಂಡು ಸ್ನಾನಕ್ಕೆ ತೆರಳಿದ್ದರು ಎಂದು ಹೇಳಲಾಗಿದೆ. ಕಿಟಕಿ ಇಲ್ಲದ ಕೊಠಡಿಯನ್ನು ಆವರಿಸಿದ ಕಾರ್ಬನ್ ಮೊನಾಕ್ಸೈಡ್ನಿಂದಾಗಿ ದಿಲೀಪ್ ಪ್ರಜ್ಞೆ ತಪ್ಪಿದ್ದಾರೆ. ಮಗ ಎಷ್ಟೊತ್ತಾದರೂ ಬರಲಿಲ್ಲ ಎಂದು ತಾಯಿ ಶೋಭಾ ಅವರು, ಸ್ನಾನದ ಕೊಠಡಿ ಬಾಗಿಲು ತೆರೆದು ಒಳ ಹೋದಾಗ ಮಗ ಕೆಳಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಆತನ ಸ್ಥಿತಿ ಕಂಡು ಗಾಬರಿಗೊಂಡು ಅವರು, ಮಗನನ್ನು ಹೊರಕ್ಕೆ ಕರೆತರಲು ಯತ್ನಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಅವರು ಸಹ ಅನಿಲ ಸೇವಿಸಿ ಪ್ರಜ್ಞೆ ತಪ್ಪಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಅವರಿಬ್ಬರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ