ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದ ದುರಂತದಲ್ಲಿ ಇನ್ನೂ ನಾಪತ್ತೆಯಾಗಿರುವ ಇಬ್ಬರ ಶೋಧಕ್ಕೆ ಸೇನೆ ಮತ್ತು ಎನ್.ಡಿ.ಆರ್ ಎಫ್ ತಂಡ ಬುಧವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭ ಮಾಡಿದ್ದು, ಇದರ ಮಧ್ಯೆಯೇ ಟ್ರಕ್ ಒಂದು ಗಂಗಾವಳಿ ನದಿ ನೀರಿನಲ್ಲಿ ಮುಳುಗಿರುವ ಸಾಧ್ಯತೆಯ ಸುಳಿವು ಸಿಕ್ಕಿದೆ.
ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಭೈರೆಗೌಡ ಟ್ವೀಟ್ ಮಾಡಿದ್ದಾರೆ. ಒಂದು ಟ್ರಕ್ ನೀರಿನಲ್ಲಿ ಖಚಿತವಾಗಿ ನೆಲೆಗೊಂಡಿದೆ ಮತ್ತು ನೌಕಾ ಡೀಪ್ ಡೈವರ್ಗಳು ಶೀಘ್ರದಲ್ಲೇ ಲಂಗರು ಹಾಕಲು ಪ್ರಯತ್ನಿಸುತ್ತಾರೆ. ನದಿಯಲ್ಲಿ ಹೂಳೆತ್ತಲು ಲಾಂಗ್ ಆರ್ಮ್ ಬೂಮರ್ ಅಗೆಯುವ ಯಂತ್ರವನ್ನು ಬಳಸಲಾಗುವುದು.ಸುಧಾರಿತ ಡ್ರೋನ್ ಆಧಾರಿತ ಇಂಟೆಲಿಜೆಂಟ್ ಅಂಡರ್ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಷನ್ ಸಿಸ್ಟಮ್ ಅನ್ನು ಸಹ ಹುಡುಕಾಟಕ್ಕಾಗಿ ನಿಯೋಜಿಸಲಾಗಿದೆ.
ಕೋಸ್ಟ್ ಗಾರ್ಡ್ ನೀರಿನಲ್ಲಿ ನಾಪತ್ತೆಯಾದ ದೇಹಗಳಿಗಾಗಿ ಹೆಲಿಕಾಪ್ಟರ್ ಹುಡುಕಾಟ ನಡೆಸುತ್ತದೆ ಎಂದು ಟ್ವೀಟ್ನಲ್ಲಿ ಬರೆದಿದ್ದಾರೆ.
ಗಂಗಾವಳಿ ನದಿಯಲ್ಲಿ ಬೂಮ್ ಫೋಕ್ಲೇನ್ ಮೂಲಕ ಕಾರ್ಯಾಚರಣೆ ನಡೆಸಲಾಗಿದ್ದು, ಕಾರ್ಯಾಚರಣೆ ವೇಳೆ ಫೋಕ್ಲೇನ್ ಬಕೆಟ್ಗೆ ಕಬ್ಬಿಣ ಬಡಿದಿದೆ ಎನ್ನಲಾಗಿದ್ದು, ಬಡಿದ್ದು ಲಾರಿಯೇ ಎಂಬ ಪ್ರಶ್ನೆ ಎದುರಾಗಿದೆ. ಹೀಗಾಗಿ ಕಾರ್ಯಾಚರಣೆ ತೀವ್ರಗೊಂಡಿದೆ. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಶೋಧ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಧಾವಿಸಿದ್ದಾರೆ.
ಶಿರೂರು ಗುಡ್ಡ ಕುಸಿತದ ದುರಂತದಲ್ಲಿ ಈವರೆಗೆ ಎಂಟು ಮೃತದೇಹಗಳು ದೊರೆತಿವೆ. ಆದರೆ ನಾಪತ್ತೆಯಾಗಿರುವ ಲಾರಿ ಚಾಲಕ ಕೇರಳದ ಅರ್ಜುನನ್ ಹಾಗೂ ಕುಮಟಾದ ಜಗನ್ನಾಥ ಅವರು ಪತ್ತೆಯಾಗಿಲ್ಲ. ಗಂಗಾವಳಿ ನದಿಯಲ್ಲಿ ಬೋಟ್ ಮೂಲಕ, ಮುಗುಳುತಜ್ಞರ ಸಹಾಯದಿಂದ ಸೇನೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಗುಡ್ಡ ಕುಸಿತದಿಂದ ನದಿಯಲ್ಲಿ ಭಾರಿ ಪ್ರಮಾಣದ ಮಣ್ಣು ಬಿದ್ದಿರುವುದು ಕಾರ್ಯಾಚರಣೆಗೆ ಅಡಚಣೆ ಎದುರಾಗಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಅವ್ಯಾಹತವಾಗಿ ಮಳೆ ಮುಂದುವರಿದಿರುವುದು ಸಹ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎನ್ನಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ