ಶಿರಸಿ : ಉತ್ತರ ಕನ್ನಡ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ (ಜುಲೈ 31) ಲೋಕಸಭೆಯಲ್ಲಿ ಶಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದ ಘಟನೆ ಬಗ್ಗೆ ಮಾತನಾಡಿದ್ದಾರೆ.
ನಿಯಮ 197ರ ಅಡಿಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡು ಪಶ್ಚಿಮ ಘಟ್ಟದ ಸಂರಕ್ಷಣೆಯ ಜೊತೆಗೆ ಅಭಿವೃದ್ಧಿಯ ಕುರಿತು ಗಮನ ಸೆಳೆದ ಅವರು, ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಬರುವ ಕೇರಳದ ವೈನಾಡಿನಲ್ಲಿ ಆಗಿರುವ ದುರಂತದಂತೆ ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದಾಗಿರುವ ಅನಾಹುತದ ತೀವ್ರತೆಯ ಬಗ್ಗೆ ಮಾತನಾಡಿದರು.
ಶಿರೂರು ದುರಂತದಲ್ಲಿ ನಾಪತ್ತೆಯಾದ ಎಂಟು ಜನರ ಮೃತದೇಹ ಸಿಕಿದ್ದು, ಇನ್ನೂ ಮೂವರು ನಾಪತ್ತೆಯಾಗಿದ್ದಾರೆ. ಸೇನೆ, ಎನ್ಡಿಆರ್ಎಫ್ ಹಾಗೂ ಇತರ ರಕ್ಷಣಾ ಏಜೆನ್ಸಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದ ಅವರು ಹೆಚ್ಚುವರಿಯಾಗಿ ಇನ್ನೊಂದು ಎನ್ಡಿಆರ್ಎಫ್ ತಂಡವನ್ನು ನಿಯೋಜಿಸಬೇಕೆಂದು ಕೋರಿದರು.
ಆಗಬೇಕಾದ ಕಾರ್ಯಗಳ ಕುರಿತು ಗಮನಸೆಳೆದ ಅವರು, ಪಶ್ಚಿಮ ಘಟ್ಟದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಾಗ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ಅದರ ವರದಿಯಂತೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎನ್ಎಚ್ಎಐದವರು ನಡೆಸಿದ ಅವೈಜ್ಞಾನಿಕ ರಸ್ತೆ ಕಾಮಗಾರಿ ಹಾಗೂ ಭಾರೀ ಮಳೆ ಸುರಿದಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂಬ ಮಾತುಗಳಿವೆ. ಪಶ್ಚಿಮ ಘಟ್ಟ ಅತ್ಯಂತ ಸೂಕ್ಷ್ಮಪರಿಸರ ಪ್ರದೇಶವಾಗಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿ ಮಾಡುವಾಗ ಧಾರಣಾ ಸಾಮರ್ಥ್ಯದ ಅಧ್ಯಯನ ನಡೆಸಿ ವೈಜ್ಞಾನಿಕ ವರದಿ ಪಡೆದು ಅದರಂತೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಶಿರೂರು ದುರಂತದಲ್ಲಿ ಮಡಿದವರಿಗೆ ಮತ್ತು ತೊಂದರೆಗೊಳಗಾದವರಿಗೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ