ಕದಂಬ ಕನ್ನಡ ಜಿಲ್ಲೆ ರಚನೆಗೆ ಒತ್ತಾಯಿಸಿ ಬೆಳಗಾವಿ ಸುವರ್ಣಸೌಧದ ಮುಂದೆ ಹೋರಾಟ; ಸಿಎಂ ಗಮನಕ್ಕೆ ತರುವೆ ಎಂದ ಸಚಿವ ತಂಗಡಗಿ

ಬೆಳಗಾವಿ : ಕಳೆದ ಹತ್ತು ವರ್ಷಗಳಿಂದ ಉತ್ತರ ಕನ್ನಡದಲ್ಲಿ ಪ್ರತ್ಯೇಕ ಜಿಲ್ಲೆಗಾಗಿ ನಡೆಯುತ್ತಿರುವ ಹೋರಾಟ ಗಮನಕ್ಕಿದೆ. ನೂತನವಾಗಿ ಕದಂಬ ಕನ್ನಡ ಜಿಲ್ಲೆ ರಚನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವರ ಗಮನಕ್ಕೆ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ಸಂದರ್ಭದಲ್ಲಿ ಕದಂಬ ಕನ್ನಡ ಜಿಲ್ಲೆಗೆ ಆಗ್ರಹಿಸಿ ನಡೆದ ಹೋರಾಟದ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸೂಚನೆಯ ಮೇರೆಗೆ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿ ಹೋರಾಟಗಾರರಿಂದ ಮನವಿ ಸ್ವೀಕರಿಸಿ ಮಾತನಾಡಿದರು. ಪ್ರತ್ಯೇಕ ಜಿಲ್ಲೆಗಾಗಿ ಇಷ್ಟೊಂದು ಜನ ದೂರದ ಬೆಳಗಾವಿಗೆ ಬಂದಿರುವುದು ನಮ್ಮ ಗಮನಕ್ಕಿದೆ. ಇದನ್ನು ಕೂಡಲೇ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು ಎಂದರು.

ಪ್ರತ್ಯೇಕ ಕದಂಬ ಕನ್ನಡ ಜಿಲ್ಲೆ ಮತ್ತು ಬನವಾಸಿ ತಾಲೂಕು ರಚನೆಗೆ ಆಗ್ರಹಿಸಿ ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ 500 ಕ್ಕೂ ಅಧಿಕ ಜನರು ಆಗಮಿಸಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದ ವೇಳೆ ಮತಪ್ರದರ್ಶನ ನಡೆಸಿದರು. ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಾದ ಶಿರಸಿ, ಸಿದ್ದಾಪುರ, ಮುಂಡಗೋಡು, ಬನವಾಸಿ, ಯಲ್ಲಾಪುರ, ದಾಂಡೇಲಿ, ಹಳಿಯಾಳ ತಾಲೂಕೂಗಳಿಂದ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಅನಂತಮೂರ್ತಿ ಹೆಗಡೆ ಮಾತನಾಡಿ, 200 ಕಿ.ಮೀ. ದೂರದ ಬೆಳಗಾವಿಗೆ ಸ್ವಯಂಪ್ರೇರಿತವಾಗಿ ಹೋರಾಟದಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ. ಇದು ಕೇವಲ ಆರಂಭವಷ್ಟೇ. ಇನ್ಮುಂದೆ ಪ್ರತಿ ಪಂಚಾಯತ ಮಟ್ಟದಲ್ಲಿ ಹೋರಾಟ ಸಂಘಟಿಸುವುದರ ಜೊತೆಗೆ ಸಹಿ ಸಂಗ್ರಹಣೆ ಅಭಿಯಾನ, ರಥಯಾತ್ರೆಗಳು ಎಲ್ಲ ತಾಲೂಕಿನಾದ್ಯಂತ ನಡೆಯಲಿದೆ ಎಂದರು. ಘಟ್ಟದ ಮೇಲಿನ ಎಲ್ಲ ತಾಲೂಕಿನ ಜನರನ್ನು ಸಂಘಟಿಸಿ, ಹೋರಾಟವನ್ನು ತೀವ್ರಗೊಳಿಸಲಾಗುವುದು. ಸದ್ಯದಲ್ಲಿಯೇ ಸಮಿತಿ ವತಿಯಿಂದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪತ್ಯೇಕ ಜಿಲ್ಲೆ ರಚನೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು ಎಂದರು.

ಪ್ರಮುಖ ಸುದ್ದಿ :-   ಭಾರತ ಸರ್ಕಾರ ವಿರುದ್ಧ ಹೈಕೋರ್ಟ್​​ನಲ್ಲಿ ಮೊಕದ್ದಮೆ ಹೂಡಿದ ಇಲಾನ್ ಮಸ್ಕ್ ಒಡೆತನದ ಎಕ್ಸ್‌

ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕಾಗಮಿಸಿದ ಯಲ್ಲಾಪುರ-ಮುಂಡಗೋಡು ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಪ್ರತ್ಯೇಕ ಜಿಲ್ಲೆ ಬೇಡಿಕೆಗೆ ನನ್ನ ಬೆಂಬಲವೂ ಇದೆ. ಆದರೆ ಇದು ಒಂದೆರಡು ದಿನಗಳಲ್ಲಿ ಆಗಲಾರದು. ಇದಕ್ಕೆ ನಿರಂತರ ಹೋರಾಟ ಅಗತ್ಯ. ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟ ದೀರ್ಘ ಸಮಯದಿಂದ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆ ಸಾಕಷ್ಟು ವಿಶಾಲವಾಗಿದ್ದು, ವಿಸ್ತೀರ್ಣದಲ್ಲಿ ಬೆಳಗಾವಿಗಿಂತಲೂ ದೊಡ್ಡದಾಗಿದೆ. ಎಲ್ಲ ತಾಲೂಕಿನಿಂದ ಪ್ರಬಲ ಜನಾಗ್ರಹ ರೂಪುಗೊಳ್ಳಬೇಕು. ಜಿಲ್ಲೆಯ ಸಾಹಿತಿಗಳು, ಚಿಂತಕರು ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಚರ್ಚೆ ನಡೆಸಬೇಕು. ಈ ಬಗ್ಗೆ ನಾನೂ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುತ್ತೇನೆ ಎಂದರು.
ಹೋರಾಟದ ಸ್ಥಳಕ್ಕೆ ಆಗಮಿಸಿದ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಪ್ರತಿಭಟನಾ ನಿರತ ಹೋರಾಟಗಾರರ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವರು, ಸಂಬಂಧಪಟ್ಟವರ ಗಮನಕ್ಕೆ ತರುತ್ತೇನೆ. ಅಧಿವೇಶನದಲ್ಲಿ ಕದಂಬ ಕನ್ನಡ ಜಿಲ್ಲೆ ರಚನೆ, ಬನವಾಸಿ ಮತ್ತು ಗೋಕರ್ಣವನ್ನು ನೂತನ ತಾಲೂಕುಗಳನ್ನಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ಹೇಳಿದರು.

ಪ್ರಮುಖ ಸುದ್ದಿ :-   ಸಚಿವರು, ಶಾಸಕರ ವೇತನ ದ್ವಿಗುಣ ಸಾಧ್ಯತೆ : ವೇತನ. ಭತ್ಯೆ ಹೆಚ್ಚಳಕ್ಕೆ ತಿದ್ದುಪಡಿ ಮಸೂದೆ ಸಿದ್ಧ

ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ಆಗಮಿಸಿ ಮಾತನಾಡಿ, ರಾಮಕೃಷ್ಣ ಹೆಗಡೆಯಂತಹ ಮೇರು ಮುಖ್ಯಮಂತ್ರಿಯನ್ನು ನೀಡಿದ ಜಿಲ್ಲೆ ಉತ್ತರ ಕನ್ನಡವಾಗಿದೆ. ನಾನೂ ಸಹ ರಾಮಕೃಷ್ಣ ಹೆಗಡೆಯವರ ಶಿಷ್ಯ. ನಿಮ್ಮ ಹೋರಾಟಕ್ಕೆ ನಾನೂ ಕೈಜೋಡಿಸುತ್ತೇನೆ ಎಂದರು.
ಪ್ರಮುಖರಾದ ಎಸ್.ಫಕೀರಪ್ಪ ಮುಂಡಗೋಡು, ಜಯಶೀಲ ಗೌಡ, ಚಿದಾನಂದ ಹರಿಜನ, ಮಂಜುನಾಥ ಪಾಟೀಲ, ಹಾಲಪ್ಪ ಜಕ್ಕಣ್ಣನವರ, ಅನಿಲ ನಾಯಕ ಶಿರಸಿ, ಅನಿಲ ಕರಿ, ಕಿರಣ ಮುಂಡಗೋಡು, ಸಲ್ಮಾ ಮುಂಡಗೋಡು, ಸಂತೋಷ ನಾಯ್ಕ ಬ್ಯಾಗದ್ದೆ, ರಂಗಣ್ಣ ದಾಸನಕೊಪ್ಪ, ಅಚ್ನಳ್ಳಿಯ ವೀರೇಂದ್ರ ಗೌಡರ, ಶಿವಾನಂದ ದೇಶಳ್ಳಿ, ಮಂಜುನಾಥ ಪಾಟೀಲ ಮೊದಲಾದವರು ಮಾತನಾಡಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement