ಕೂಜಳ್ಳಿ : ಖ್ಯಾತ ಗಾಯಕ ಪಂ.ವಿನಾಯಕ ತೊರವಿಗೆ ‘ಷಡಕ್ಷರಿ’ ರಾಷ್ಟ್ರೀಯ ಪುರಸ್ಕಾರ ಪ್ರದಾನ

ಕುಮಟಾ: ಕೂಜಳ್ಳಿಯಲ್ಲಿ ನಡೆದ ಪಂಡಿತ ಷಡಕ್ಷರಿ ಗವಾಯಿ ಪುಣ್ಯ ಸ್ಮರಣೆ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಪಂ.ವಿನಾಯಕ ತೊರವಿ ಅವರಿಗೆ ಷಡಕ್ಷರಿ ರಾಷ್ಟ್ರೀಯ ಸಂಗೀತ ಪುರಸ್ಕಾರ ಪ್ರದಾನ ಮಾಡಲಾಯಿತು.
ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿಯಲ್ಲಿ ಭಾನುವಾರ ಇಡೀದಿನ ಪುಣ್ಯಸ್ಮರಣೆ ಸಂಗೀತೋತ್ಸವ ಕಾರ್ಯಕ್ರಮ ನಡೆಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂಡಿತ ವಿನಾಯಕ ತೊರವಿ ಮಾತನಾಡಿ, ವಿದ್ಯೆ ಮಾತ್ರ ದಾನ ಮಾಡಿದಷ್ಟೂ ವೃದ್ಧಿ ಹೊಂದುತ್ತದೆ. ಅದರಲ್ಲಿಯೂ ಸಂಗೀತ ವಿದ್ಯೆ ಎನ್ನುವುದು ಒಂದು ಅಧ್ಯಾತ್ಮ, ಇದು ಮೋಕ್ಷಕ್ಕೆ ದಾರಿ. ಇಂತಹ ವಿದ್ಯೆ ಧಾರೆ ಎರೆಯುವ ಗುರುಗಳು ಶ್ರೇಷ್ಠ ಸ್ಥಾನ ಪಡೆಯುತ್ತಾರೆ. ಸಾವಿರಾರು ಜನರಿಗೆ ಸಂಗೀತ ಕಲಿಸಿದ ಗುರುಗಳಾದ ಷಡಕ್ಷರಿ ಗವಾಯಿಗಳ ಹೆಸರಿನಲ್ಲಿ ನೀಡುವ ಈ ಪ್ರಶಸ್ತಿಯನ್ನು ನನ್ನ ನನಗೆ ಸಂಗೀತ ಕಲಿಸಿದ ಗುರುಗಳ ಪಾದಕಮಲಗಳಿಗೆ ಸಮರ್ಪಿಸುತ್ತೇನೆ ಎಂದರು. ಎಂದು ಹೇಳಿದರು.
ಗುರು ಎನ್ನುವುದು ಒಬ್ಬ ವ್ಯಕ್ತಿಯಲ್ಲ, ಇದು ಒಂದು ಮಹಾನ್ ಶಕ್ತಿ. ಕೂಜಳ್ಳಿಯಲ್ಲಿ ಷಡಕ್ಷರಿ ಗವಾಯಿ ಅವರಂತಹ ಶ್ರೇಷ್ಠ ಗುರುಗಳ ಸೇವೆಯನ್ನು ನಿರಂತರವಾಗಿ ಮಾಡುತ್ತಿರುವ ಈ ಕಾರ್ಯ ಶ್ಲಾಘನೀಯ. ಈ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಉಡುಪಿ ಆಭರಣ ಗ್ರೂಪ್ನ ಸಂಧ್ಯಾ ಸುಭಾಷ ಕಾಮತ್ ಮಾತನಾಡಿ, ಸಂಗೀತಕ್ಕೆ ಅಗಾಧ ಶಕ್ತಿಯಿದೆ. ಪಂ. ಷಡಕ್ಷರಿ ಗವಾಯಿ ಇಂತಹ ಸಂಗೀತವನ್ನು ಈ ಭಾಗದ ಜನರಿಗೆ ಧಾರೆ ಎರೆದಿದ್ದಾರೆ. ಇಂತಹ ಶ್ರೇಷ್ಠ ಗುರುಗಳನ್ನು ಸ್ಮರಿಸಿ, ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.
ಹಿರಿಯ ಪತ್ರಕರ್ತ, ಹುಬ್ಬಳ್ಳಿಯ ರಂಗನಾಥ ಕಮತರ ಮಾತನಾಡಿ ಸಂಗೀತ ಎನ್ನುವುದು ವ್ಯವಹಾರಿದ ವಿದ್ಯೆಯಲ್ಲ. ಅದನ್ನು ಸಿದ್ಧಿಸಿಕೊಳ್ಳಲು ಸಮರ್ಥ ಗುರವೂ ಬೇಕು, ಸತತ ಅಭ್ಯಾಸವೂ ಬೇಕು. ಇವೆರಡು ಇದ್ದಾಗಲೇ ಆತ ಪಕ್ವ ಸಂಗೀತಗಾರನಾಗಲು ಸಾಧ್ಯ ಎಂದು ಹೇಳಿದರು.
, ಸ್ವರ ಸಂಗಮದ ಅಧ್ಯಕ್ಷ ಎಸ್.ಜಿ. ಭಟ್ಟ, ಹಿರಿಯ ತಂತ್ರಜ್ಞ ಗಿರೀಶ ಹೆಗಡೆ, ಲೆಕ್ಕ ಪರಿಶೋಧಕ ಸಚಿನ್ ಬಿ.ಆರ್. ಉಪಸ್ಥಿತರಿದ್ದರು. ಷಡಕ್ಷರಿ ಗವಾಯಿ ಅಕಾಡೆಮಿ ಅಧ್ಯಕ್ಷ ವಸಂತರಾವ್ ಅಧ್ಯಕ್ಷತೆ ವಹಿಸಿದ್ದರು.
ಈಶ್ವರ ಶಾಸ್ತ್ರಿ ಸ್ವಾಗತಿಸಿದರು. ರಘುಪತಿ ಯಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಎನ್. ಭಟ್ಟ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಸಂಗೀತ ಕಾರ್ಯಕ್ರಮಕ್ಕೆ ಖ್ಯಾತ ಶಹನಾಯಿ ವಾದಕ ಬಸವರಾಜ ಭಜಂತ್ರಿ ಹೆಡಿಗ್ಗೊಂಡ, ಸ್ವರ ಸಂಗಮದ ಅಧ್ಯಕ್ಷ ಎಸ್.ಜಿ. ಭಟ್ಟ, ಷಡಕ್ಷರಿ ಗವಾಯಿ ಅಕಾಡೆಮಿ ಖಜಾಂಚಿ ಎಸ್.ಎನ್. ಭಟ್ಟ ಚಾಲನೆ ನೀಡಿದರು. ಕಾರ್ಯಕ್ರಮ ಆರಂಭವಾಗುವುದಕ್ಕೂ ಮೊದಲು ಇತ್ತೀಚಿಗೆ ನಮ್ಮನ್ನಗಲಿದ ಭಾರತದ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಹಾಗೂ ಖ್ಯಾತ ತಬಲಾ ವಾದಕ ಉಸ್ತಾದ್‌ ಜಾಕೀರ್‌ ಹುಸೇನ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಗೀತ ಕಾರ್ಯಕ್ರಮ:
ಪಂ. ವಿನಾಯಕ ತೊರ್ವಿ, ಮುಂಬೈನ ಕೃಷ್ಣ ಭಟ್ಟ, ಅವರ ಗಾಯನ, ಮುಂಬೈನ ರಾಜನ್ ಮಾಶೇಲ್ಕರ್ ಅವರ ವಯೋಲಿನ್, ಬಸವರಾಜ ಭಜಂತ್ರಿ ಹೆಡಿಗ್ಗೊಂಡ ಅವರ ಶಹನಾಯಿ ವಾದನ ಮೆಚ್ಚುಗೆಗೆ ಪಾತ್ರವಾಯಿತು. ಪಂ. ವಿನಾಯಕ ತೊರ್ವಿ ಅವರಿಗೆ ಖ್ಯಾತ ಹಾರ್ಮೋನಿಯಂ ವಾದಕ ವಿಶ್ವನಾಥ ಕಾನರೆ ಅವರು ಸಾಥ್ ನೀಡಿದರು. . ಬಾರ್ಕೂರಿನ ಇಂದಿರಾ ಎಂ. ಭಟ್ಟ, ವಿನಾಯಕ ಹೆಗಡೆ ಹಿರೇಹದ್ದ ಅವರ ಗಾಯನ, ಭಾರ್ಗವ ಭಟ್ಟ ಮತ್ತು ಅಜಯ ಹೆಗಡೆ ಅವರ ಬಾನ್ಸುರಿ-ಹಾರ್ಮೋನಿಯಂ ಜುಗಲ್ಬಂಧಿ ಸಂಗೀತಾಸಕ್ತರ ಮನ ಗೆದ್ದಿತು.
ತಬಲಾದಲ್ಲಿ ಮುಂಬೈನ ಶಂತನು ಶುಕ್ಲಾ, ಹೊಸಗದ್ದೆ ಮಹೇಶ ಹೆಗಡೆ, ಬೆಂಗಳೂರಿನ ಯೋಗೀಶ ಭಟ್ಟ, ಕಡತೋಕಾದ ವಿನೋದ ಭಂಡಾರಿ, ಅಂಸಳ್ಳಿ ಅಕ್ಷಯ ಭಟ್ಟ, ಹರಿಕೇರಿ ಗಣಪತಿ ಹೆಗಡೆ ಸಹಕರಿಸಿದರು. ಕೂಜಳ್ಳಿ ಗೌರೀಶ ಯಾಜಿ, ವರ್ಗಾಸರದ ಅಜೇಯ ಹೆಗಡೆ ಸಂವಾದಿನಿಯಲ್ಲಿ ಸಾಥ್ ನೀಡಿದರು.
ಗೌರೀಶ ಯಾಜಿ ಹಾಗೂ ಶಿಷ್ಯವೃಂದದವರು ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿದರು.

ಪ್ರಮುಖ ಸುದ್ದಿ :-   ಬೆಳಗಾವಿ | ಕಾರಿನ ಮೇಲೆ ಮಗುಚಿ ಬಿದ್ದ ಲಾರಿ ; ಇಬ್ಬರಿಗೆ ಗಾಯ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement