ಮಂಗಳೂರು : ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ಖ್ಯಾತ ಬೀಡಿ ಉದ್ಯಮಿಯೊಬ್ಬರ ಮನೆಗೆ ದಾಳಿ ನಡೆಸಿದ ದುಷ್ಕರ್ಮಿಗಳು ಬರೋಬ್ಬರಿ 30 ಲಕ್ಷ ರೂ.ಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಬೀಡಿ ಉದ್ಯಮಿ ಸಿಂಗಾರಿ ಹಾಜಿ ಸುಲೈಮಾನ್ ಎಂಬವರ ಮನೆಗೆ ಶುಕ್ರವಾರ (ಡಿ.3) ರಾತ್ರಿ ಎಂಟೂವರೆ ಗಂಟೆಗೆ ದುಷ್ಕರ್ಮಿಗಳು ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿ 30 ಲಕ್ಷ ರೂ.ಗಳನ್ನು ಹೊತ್ತೊಯ್ದಿದ್ದು, ತಮಿಳುನಾಡು ನೋಂದಣಿಯ ಬಿಳಿ ಬಣ್ಣದ ಎರ್ಟಿಗಾ ಕಾರಿನಲ್ಲಿ ಆಗಮಿಸಿದ ಏಳು ಜನರ ತಂಡ ವ್ಯವಸ್ಥಿತವಾಗಿ ಕೃತ್ಯ ಎಸಗಿದೆ ಎಂದು ಹೇಳಲಾಗಿದೆ.
ಕನ್ನಡ, ಹಿಂದಿ, ಇಂಗ್ಲೀಷ್, ತಮಿಳು ಭಾಷೆ ಮಾತನಾಡುವ ಆರು ಜನರು ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದ್ದಾರೆ. ಆಗ ಮಾಲೀಕ ಸುಲೈಮಾನ್ ಹಾಜಿ ಬಾಗಿಲು ತೆರೆಯುತ್ತಿದ್ದಂತೆ, ಐಡಿ ಕಾರ್ಡ್ ತೋರಿಸಿ ಇ.ಡಿ. ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ. ಅಧಿಕಾರಿಗಳೆಂಬ ವಿಶ್ವಾಸದಲ್ಲಿ ಒಳ ಕರೆದು ಮಾತನಾಡಿದ್ದಾರೆ.
ಆಗ ತಂಡದಲ್ಲಿದ್ದ ಓರ್ವ ಕನ್ನಡದಲ್ಲಿ ಬೀಡಿ ಉದ್ಯಮ ಮತ್ತು ವ್ಯವಹಾರದ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾನೆ. ಆಗ ಇವರು ಅಧಿಕಾರಿಗಳೆಂದು ನಂಬಿದ ಸುಲೈಮಾನ್ ಹಾಜಿ ಅವರು ಹಾಗೂ ಅವರ ಮನೆಯವರ ಮೊಬೈಲ್ ವಶಕ್ಕೆ ಪಡೆದುಕೊಂಡು ತಪಾಸಣೆ ಆರಂಭಿಸಿದ್ದಾರೆ. ಮನೆಯ ಮುಂದಿನ ಹಾಗೂ ಹಿಂದಿನ ಬಾಗಿಲು ಮುಚ್ಚಿ, ಮನೆಯಲ್ಲಿದ್ದವರನ್ನೆಲ್ಲ ಒಂದು ಕಡೆ ಕುಳ್ಳಿರಿಸಿ ವಿಚಾರಣೆ ನಡೆಸುವಂತೆ ಡ್ರಾಮಾ ಮಾಡಿದ್ದಾರೆ.
ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ತಪಾಸಣೆ ಮಾಡುವ ನಾಟಕವಾಡಿದ ದುಷ್ಕರ್ಮಿಗಳು, ಯಾರೊಂದಿಗೂ ಮೊಬೈಲ್ನಲ್ಲಿ ಹಿಂದಿಯಲ್ಲಿ ಮಾತನಾಡುತ್ತ ತಾವು ನಕಲಿ ಅಧಿಕಾರಿಗಳು ಎಂಬ ಬಗ್ಗೆ ಯಾರಿಗೂ ಅನುಮಾನ ಬಾರದಂತೆ ನಟಿಸಿದ್ದಾರೆ.
ಮನೆ ಪರಿಶೀಲಿಸಿ ಹಣ ಮತ್ತು ಚಿನ್ನಾಭರಣೆ ಪತ್ತೆ ಮಾಡಿದ್ದಾರೆ. ಬಳಿಕ ಚಿನ್ನಾಭರಣಗಳನ್ನು ಅಲ್ಲೇ ಬಿಟ್ಟು ಹಣವನ್ನು ಗೋಣಿ ಚೀಲಕ್ಕೆ ತುಂಬಿಸಿ, ಮೂರು ಮೊಬೈಲುಗಳನ್ನು ಪಡೆದು ಎರ್ಟಿಗಾ ಕಾರಿನಲ್ಲಿ ದುಷ್ಕರ್ಮಿಗಳು ತಂಡ ಅಲ್ಲಿಂದ ಪರಾರಿಯಾಗಿದ್ದಾರೆ.
ವಂಚಕರು ಮನೆಯಿಂದ ಹೊರಡುವಾಗ, ತಮ್ಮನ್ನು ಹಿಂಬಾಲಿಸುವಂತೆ ಸೂಚಿಸಿದ್ದಾರೆ. ಉದ್ಯಮಿ ಹಾಗೂ ಅವರ ಪುತ್ರ ಹಿಂಬಾಲಿಸಿದ್ದಾರೆ. ಬೋಳಂತೂರು ಸಮೀಪಿಸುತ್ತಿದ್ದಂತೆ ವಂಚಕರು ವೇಗವಾಗಿ ಹೊರಟುಹೋಗಿ ಕನ್ಮರೆಯಾಗಿದ್ದಾರೆ ಎನ್ನಲಾಗಿದೆ. ಕಾರು ಕಾಣದೇ ಇದ್ದಾಗ ಮೋಸ ನಡೆದಿರುವ ಅನುಮಾನ ಬಂದಿದೆ. ಆಗ ಅವರು ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದ್ದಾರೆ. ಪೊಲೀಸರು ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ