ಮುಂಬೈ: ನಟ ಸೈಫ್ ಅಲಿ ಖಾನ್ ಅವರು ತಮ್ಮ ಬಾಂದ್ರಾ ಮನೆಯಲ್ಲಿ ಕಳ್ಳತನ ಯತ್ನದ ಸಂದರ್ಭದಲ್ಲಿ ಚಾಕು ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಆರು ದಿನಗಳ ನಂತರ ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅವರು ತಮ್ಮ ಬಾಂದ್ರಾ ಮನೆಗೆ ತೆರಳಿದ್ದು, ಅಲ್ಲಿ ಭಾರೀ ಭದ್ರತೆ ನಿಯೋಜಿಸಲಾಗಿದೆ.
ಸೈಫ್ ಅಲಿ ಖಾನ್ ಅವರಿಗೆ ಒಂದು ವಾರದವರೆಗೆ ಸಂಪೂರ್ಣ ಬೆಡ್ ರೆಸ್ಟ್ ಅನ್ನು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ತನ್ನ ಮನೆಗೆ ನುಗ್ಗಿದ ವ್ಯಕ್ತಿಯೊಬ್ಬನಿಂದ ಚಾಕು ಇರಿತಕ್ಕೆ ಒಳಗಾದ ಸೈಫ್ ಅಲಿ ಖಾನ್ ಅವರಿಗೆ ಆರು ಕಡೆ ಇರಿತದ ಗಾಯಗಳಾಗಿತ್ತು. ಗಾಯಗಳಿಂದ ತೀವ್ರ ರಕ್ತಸ್ರಾವವಾಗುತ್ತಿದ್ದ ಅವರನ್ನು ಬುಧವಾರ ತಡರಾತ್ರಿ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು.
ಅವರ ಬೆನ್ನುಮೂಳೆಯ ಬಳಿ ಒಂದು ಗಾಯವಾಗಿದೆ. ಬೆನ್ನುಮೂಳೆಯ ದ್ರವವು ಸೋರಿಕೆಯಾಗಿತ್ತು ಮತ್ತು ಇದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ತೋಳು ಮತ್ತು ಕುತ್ತಿಗೆಗೆ ಗಾಯಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಯಿತು.
ಸೈಫ್ ಅಲಿ ಖಾನ್ ಅವರ ಮನೆಗೆ ಕಳ್ಳತನ ಮಾಡಲು ನುಗ್ಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತನಾದ ವ್ಯಕ್ತಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ಬಿಜೋಯ ದಾಸ್ ಎಂಬ ಸುಳ್ಳು ಹೆಸರಿನಲ್ಲಿ ವಾಸಿಸುತ್ತಿದ್ದ ಬಾಂಗ್ಲಾದೇಶದ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ಭಾಗವಾಗಿ ಅಪರಾಧವನ್ನು ಮರುಸೃಷ್ಟಿಸಲು ಆರೋಪಿಯನ್ನು ಮಂಗಳವಾರ ಬೆಳಿಗ್ಗೆ ಸೈಫ್ ಅಲಿ ಖಾನ್ ಅವರ ಬಾಂದ್ರಾ ನಿವಾಸಕ್ಕೆ ಕರೆತರಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ