ಬೆಂಗಳೂರು: ತೀವ್ರ ಅಸ್ವಸ್ಥ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ಗೆ ಆಟೋ ರಿಕ್ಷಾ ಚಾಲಕನೊಬ್ಬ ದಾರಿಕೊಡದೆ ಸತಾಯಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹರ್ಲೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆಟೋ ಚಾಲಕನ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತುರ್ತು ಅಗತ್ಯವಿರುವ ರೋಗಿಯನ್ನು ಕರೆದೊಯ್ಯಲಾಗುತ್ತಿದೆ. ದಯವಿಟ್ಟು ದಾರಿಕೊಡಿ ಎಂದು ಆಂಬ್ಯುಲೆನ್ಸ್ ಸಿಬ್ಬಂದಿ ಆಟೋ ಚಾಲಕನಿಗೆ ವಿನಂತಿಸುವುದನ್ನು ದೃಶ್ಯಾವಳಿ ತೋರಿಸುತ್ತದೆ.
ಪದೇ ಪದೇ ಮನವಿ, ಎಚ್ಚರಿಕೆ ನೀಡಿದರೂ ಚಾಲಕ ಅಸಹಕಾರ ತೋರಿದ್ದಾನೆ. ಆಂಬುಲೆನ್ಸ್ನೊಳಗೆ ತೀವ್ರ ಅಸ್ವಸ್ಥ ರೋಗಿಯ ಜೊತೆ ಕುಟುಂಬ ಸದಸ್ಯರೂ ಇದ್ದರು. ಆಂಬುಲೆನ್ಸ್ ಸಿಬ್ಬಂದಿಯೊಬ್ಬರು ಚಾಲಕನಿಗೆ, “ನೀವು ಇದನ್ನು ಮುಂದುವರಿಸಿದರೆ, ನಾವು ಪೊಲೀಸ್ ದೂರು ದಾಖಲಿಸಬೇಕಾಗುತ್ತದೆ ಎಂದು ಹೇಳುವುದು ವೀಡಿಯೊದಲ್ಲಿ ಕೇಳಿಸುತ್ತದೆ. ಮೇಲಿಂದ ಮೇಲೆ ಮನವಿ ಮಾಡಿಕೊಂಡರೂ ದಾರಿ ಬಿಡದೇ ನಡು ರಸ್ತೆಯಲ್ಲಿ ಆಟೋ ಚಲಯಿಸಿರುವುದು ಕಂಡುಬಂದಿದೆ.
ವೀಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆ ಬೆಂಗಳೂರಿನ ಬೆಳಂದೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಹರಳೂರು ಮುಖ್ಯ ರಸ್ತೆಯಲ್ಲಿ ನಡೆದಿದೆ ಎನ್ನಲಾಗಿದೆ.
ಬೆಂಗಳೂರು ಪೊಲೀಸರು ಇದಕ್ಕೆ ಸ್ಪಂದಿಸ್ದು, ಆಟೋ ಚಾಲಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಂತರ ಬಂಧಿಸಿ ಬಿಡುಗಡೆ ಮಾಡಿದ್ದಾರೆ, ಆತನಿಂದ ದಂಡ ವಸೂಲಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದರ ಬಗ್ಗೆ ಪೊಲೀಸರು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ