ಉತ್ತರ ಪ್ರದೇಶದ 20 ವರ್ಷದ ವ್ಯಕ್ತಿಯೊಬ್ಬ ತನ್ನ ಆನ್ಲೈನ್ ಪ್ರೇಮಿಯನ್ನು ಹುಡುಕಲು ಗಡಿದಾಟಿ ಪಾಕಿಸ್ತಾನಕ್ಕೆ ಹೋಗಿದ್ದಾನೆ…! ಆದರೆ ಅದು ಆತ ಪಾಕಿಸ್ತಾನದಲ್ಲಿ ಜೈಲು ಶಿಕ್ಷೆಗೆ ಒಳಗಾಗುವ ಸಾಧ್ಯತೆಯನ್ನು ತಂದೊಡ್ಡಿದೆ…!
ಗಡಿದಾಟಿ ಪಾಕಿಸ್ತಾನಕ್ಕೆ ಹೋದ ನಂತರ ಆತನ ಆನ್ಲೈನ್ ಪ್ರೇಮಿ ಮದುವೆಯ ಪ್ರಸ್ತಾಪವನ್ನು ತಿರಸ್ಕರಿದ್ದಾಳೆ, ಆಕೆಯ ತಿರಸ್ಕಾರದ ನಂತರ ಮಾನಸಿಕವಾಗಿ ಘಾಸಿಕೊಂಡ ಆತನಿಗೆ ಈಗ ಸಂಭವನೀಯ ಜೈಲು ಶಿಕ್ಷೆಯನ್ನೂ ಎದುರಿಸಬೇಕಾದ ಪ್ರಸಂಗ ಬಂದಿದೆ.
ಇದು ಆರಂಭವಾಗಿದ್ದು ಎರಡು ವರ್ಷಗಳ ಹಿಂದೆ. ಉತ್ತರ ಪ್ರದೇಶದ ಅಲಿಗಢದಿಂದ ಬಂದ ಬಾದಲ್ ಬಾಬು ಎಂಬ 20 ವರ್ಷದ ಯುವಕ ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನಿ ಯುವತಿ ಸನಾ ರಾಣಿ ಎಂಬವಳ ಸಂಪರ್ಕಕ್ಕೆ ಬಂದಿದ್ದ. ಅವರ ಆನ್ಲೈನ್ ಪರಿಚಯವು ಮುಂದೆ ಗಾಢ ಲವ್ ಸ್ಟೋರಿಯಾಗಿ ಬದಲಾಯಿತು. ಆತ ಪಾಕಿಸ್ತಾನಿ ಯುವತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧನಾಗುವ ಮಟ್ಟಿಗೆ ಪ್ರೀತಿಯಲ್ಲಿ ಬಿದ್ದಿದ್ದ.
ನಂತರ ಆತ ಅವಳ ಭೇಟಿ ಮಾಡಲು ಪಾಕಿಸ್ತಾನಕ್ಕೆ ಹೋಗಲು ನಿರ್ಧರಿಸಿದ. ಆತ ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಅಕ್ರಮವಾಗಿ ತೆರಳುವ ಅಪಾಯಕಾರಿ ನಿರ್ಧಾರ ಕೈಗೊಂಡ. ಅಲ್ಲದೆ, ಪಾಕಿಸ್ತಾನಿ ಯುವತಿಯ ಮನಗೆಲ್ಲಲು ಹಾಗೂ ಆಕೆಯನ್ನು ವಿವಾಹವಾಗಲು ಇಸ್ಲಾಂಗೆ ಮತಾಂತರಗೊಂಡು ರೆಹಾನ್ ಎಂಬ ಹೆಸರನ್ನು ಅಳವಡಿಸಿಕೊಂಡ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆದರೆ, ಆಗಿದ್ದೇ ಬೇರೆ. ಪಾಕಿಸ್ತಾನದ ಯುವತಿ ಸನಾ ಈತನ ಮದುವೆಯ ಪ್ರಸ್ತಾಪ ತಿರಸ್ಕರಿಸಿದಳು. ಆತ ಜರ್ಜರಿತನಾದ ಹಾಗೂ ಗಡಿಯಾಚೆಗಿನ ಆತನ ಪ್ರೇಮಕಥೆಯ ಕನಸುಗಳ ರೆಕ್ಕೆ ಕತ್ತರಿಸಿ ನೆಲಕ್ಕೆ ಬಿದ್ದವು. ಆತನಿಗೆ ಪಾಕಿಸ್ತಾನದಲ್ಲಿ ಕಾನೂನು ತೊಡಕುಗಳು ಹಾಗೂ ಅನಿಶ್ಚಿತ ಭವಿಷ್ಯ ಎದುರಾಯಿತು. ಕೊನೆಗೆ ಆತ ಪಾಕಿಸ್ತಾನದ ಮಂಡಿ ಬಹೌದ್ದೀನ್ ಪ್ರದೇಶದಲ್ಲಿರುವ ಯುವತಿ ಸನಾ ಮನೆಯ ಬಳಿ ಕುರಿ ಕಾಯುವ ಕೆಲಸ ಮಾಡಲು ಆರಂಭಿಸಿದ.
ಆದರೆ, ಆತ ತಾನು ಕರಾಚಿಯಿಂದ ಬಂದವನು ಹಾಗೂ ತನಗೆ ಕುಟುಂಬವಿಲ್ಲ ಎಂದು ಸುಳ್ಳು ಹೇಳಿದ್ದಕ್ಕೆ ಡಿಸೆಂಬರ್ 27, 2024 ರಂದು ಆತನನ್ನು ಬಂಧಿಸಲಾಯಿತು.
ನಂತರ ಲಾಹೋರ್ನ ವಕೀಲರೊಬ್ಬರು ಮಾನವೀಯ ಆಧಾರದ ಮೇಲೆ ಬಾದಲ್ ಬಾಬುವಿನ ಪ್ರಕರಣವನ್ನು ಕೈಗೆತ್ತಿಕೊಂಡರು. ತಮ್ಮ ಕಕ್ಷಿದಾರರು ತಮ್ಮ ಧಾರ್ಮಿಕ ಮತಾಂತರದ ಕಾರಣದಿಂದಾಗಿ ಅಪಾಯ ಆಗಬಹುದು ಎಂಬುದನ್ನು ಉಲ್ಲೇಖಿಸಿ ಭಾರತಕ್ಕೆ ಮರಳಲು ಭಯಪಡುತ್ತಾರೆ ಎಂದು ವಾದಿಸಿದರು. ಬಾದಲ್ನ ಉದ್ಯೋಗದಾತ ಹಾಜಿ ಖಾನ್ ಅಸ್ಗರ್ ಎಂಬವರು ಯುವಕ ಕೆಲಸದ ಸಂಬಂಧ ತನ್ನನ್ನು ಸಂಪರ್ಕಿಸಿದ್ದ. ನಂತರ ಆತ ತನ್ನ ಪ್ರಣಯದ ಬಗ್ಗೆ ತಿಳಿಸಿದ್ದ ಎಂದು ಹೇಳಿದರು.
ಸನಾ ಮತ್ತು ಆಕೆಯ ತಾಯಿ ಆರಂಭದಲ್ಲಿ ಬಾದಲ್ ಅವರನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು, ಆದರೆ ಆತನ ಪರಿಸ್ಥಿತಿ ಬಗ್ಗೆ ಗೊತ್ತಾದ ನಂತರ, ಸನಾ ಆತನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿ ಆತನನ್ನು ಪಾಕಿಸ್ತಾನದಲ್ಲಿ ಸಿಲುಕಿಸಿದ್ದರಿಂದ ಸಂಭವನೀಯ ಜೈಲು ಶಿಕ್ಷೆಯನ್ನು ಎದುರಿಸಬೇಕಾಗಿದೆ ಎಂದು ಅಸ್ಗರ್ ಹೇಳಿದರು.
ಇತ್ತೀಚೆಗೆ ಅಲಿಗಢದಲ್ಲಿರುವ ತನ್ನ ಪೋಷಕರನ್ನು ಸಂಪರ್ಕಿಸಲು ಅವಕಾಶ ನೀಡಿದ ನಂತರ ಬಾದಲ್ ನ್ಯಾಯಾಲಯದ ಹೊರಗೆ ಕೈಕೋಳ ಹಾಕಿಕೊಂಡ ಸ್ಥಿತಿಯಲ್ಲಿ ಮನೆಯವರೊಂದಿಗೆ ಭಾವನಾತ್ಮಕವಾಗಿ ಮಾತನಾಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಅಕ್ರಮವಾಗಿ ಗಡಿ ದಾಟಿರುವ ಬಾದಲ್ ಪ್ರಕರಣವನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರ ವಕೀಲ ಫಯಾಜ್ ರಾಮಯ್ ಹೇಳಿದ್ದಾರೆ. ಮುಂದಿನ ವಿಚಾರಣೆ ಈ ತಿಂಗಳ ಅಂತ್ಯದಲ್ಲಿ ನಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ