ಶಿರಸಿ : ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿದಂತೆ ಸರ್ಕಾರ ವೈದ್ಯಕೀಯ ಸಲಕರಣೆಗಳಿಗೆ 30 ಕೋಟಿ ರೂಪಾಯಿ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಹೈಟೆಕ್ ಅಸ್ಪತ್ರೆಯನ್ನ ಕೆಳದರ್ಜೆಗೆ ತಳ್ಳುವ ಪ್ರಯತ್ನ ಮಾಡುತ್ತಿರುವ ಶಾಸಕರಾದ ಭೀಮಣ್ಣ ನಾಯ್ಕ ಜನತೆಯ ಕ್ಷಮೆ ಕೇಳಬೇಕು ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.
ಶಿರಸಿಯ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವೈದ್ಯಕೀಯ ಉಪಕರಣಗಳ ಖರೀದಿಗಾಗಿ ಮೀಸಲಿರಿಸಿದ್ದ 30 ಕೋಟಿ ರೂಪಾಯಿ ಕೊಡುವುದಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯನ್ನು ಕೆಳದರ್ಜೆಗೆ ಇಳಿಸುವ ಶಾಸಕರ ಪ್ರಯತ್ನ ಜನತೆಗೆ ಮಾಡುವ ಅನ್ಯಾಯವಾಗಿದೆ. ಆಸ್ಪತ್ರೆ ಕುರಿತಾಗಿ ಪ್ರಶ್ನೆ ಮಾಡಿದವರ ಮೇಲೆ ನಾನ್ ಬೇಲೇಬಲ್ ಕೇಸ್ ದಾಖಲಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಅಸಂಬದ್ಧ ಕಮೆಂಟ್ ಮಾಡಿಸುತ್ತಾರೆ. ಪೋಲೀಸ್ ಠಾಣೆಯಲ್ಲಿ ದೂರು ಕೊಡುವವರೇ ನನ್ನ ಮೇಲೆ ನಾನ್ ಬೇಲೇಬಲ್ ಪ್ರಕರಣ ದಾಖಲಿಸುವಂತೆ ಸೆಕ್ಷನ್ ಬರೆದುಕೊಡುತ್ತಾರೆ. ಅದರಂತೆ ನಡೆಯಲು ಪೋಲೀಸರಿಗೆ ಸೂಚನೆ ಕೊಡಲಾಗುತ್ತದೆಯೆಂದರೆ ನಾವು ಯಾವ ಪ್ರಜಾಪ್ರಭುತ್ವದಲ್ಲಿ ಇದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ. ಇದೇನು ರಿಪಬ್ಲಿಕ್ ಆಫ್ ಶಿರಸಿನಾ ? ಶಾಸಕರನ್ನು ಪ್ರಶ್ನಿಸುವುದು ಅಪರಾಧವಾಗುತ್ತದೆಯಾ ? ಶಾಸಕರನ್ನು ಪ್ರಶ್ನಿಸಿದ್ದಕ್ಕೆ ನನಗೆ ಲೀಗಲ್ ನೋಟಿಸ್ ನೀಡಲಾಗಿದೆ. ನಾವು ಸಾರ್ವಜನಿಕ ವಿಷಯ ಎತ್ತಿದರೆ ವೈಯಕ್ತಿಕ ದ್ವೇಷದ ರಾಜಕಾರಣ ಏಕೆ..? ದಯವಾಡಿ ಇದನ್ನು ಮಾಡಬೇಡಿ. ನಾವು ಆಸ್ಪತ್ರೆ ಹೋರಾಟ ಮಾಡುವ ಬದಲು ಕೋರ್ಟು, ಕಚೇರಿ, ಪೋಲೀಸ್ ಸ್ಟೇಷನ್ ಗಳಿಗೆ ಅಲೆಯಬೇಕೆಂಬು ಉದ್ದೇಶ ಇದರ ಹಿಂದೆ ಇರುವಂತೆ ಕಾಣುತ್ತಿದೆ ಎಂದು ಅನಂತಮೂರ್ತಿ ಹೆಗಡೆ ಹೇಳಿದರು.
ಶಾಸಕರು ಮೊದಲಿಗೆ ಕ್ಷೇತ್ರದ ಅಭಿವೃದ್ಧಿ ಕುರಿತಾಗಿ ಗಮನ ನೀಡಬೇಕು. ಶಿರಸಿ ಬಸ್ ಸ್ಟಾಂಡ್ ತಕ್ಷಣ ಉದ್ಘಾಟನೆ ಆಗಬೇಕಿದೆ. ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಿ ಬಡವರಿಗೆ ಕಡಿಮೆ ದರದಲ್ಲಿ ಊಟ ದೊರೆಯಬೇಕು. ಅಯುಷ್ಮಾನ್ ರೆಫರೆಲ್ ಲೆಟರ್ ಶಿರಸಿಯಲ್ಲೇ ಸಿಗುವಂತಾಗಬೇಕು. ಈಗಿರುವ ಆಸ್ಪತ್ರೆಗೆ ಜನರಲ್ ಫಿಜಿಶಿಯನ್ ನೇಮಕ ಆಗಬೇಕು. ಈಗಾಗಲೆ 80% ಕೆಲಸ ಆಗಿರುವ ಆಸ್ಪತ್ರೆಗೆ ಸಲಕರಣೆಗೆ ಟೆಂಡರ್ ಕರೆದು, ವೈದ್ಯರ ನೇಮಕಾತಿ ಆಗಬೇಕು, ಶಿರಸಿ ಆಸ್ಪತ್ರೆಗೆ ಎಲ್ಲ ಸಾಮಗ್ರಿಗಳು ಬಂದು ಎಲ್ಲಾ ಸೌಲಭ್ಯಗಳು ಬರಲೇಬೇಕು. ಇದರ ಬಗ್ಗೆ ನಾವು ಕ್ಷೇತ್ರದ ಶಾಸಕರ ಉತ್ತರ ಬಯಸುತ್ತೇವೆ, ಇನ್ನು 15 ದಿನಗಳ ಒಳಗೆ ಈ ಬಗ್ಗೆ ಶಾಸಕರಿಂದ ಏನೂ ಪ್ರತಿಕ್ರಿಯೆ ಬಂದಿಲ್ಲವಾದರೆ ಆಸ್ಪತ್ರೆ ಉಳಿಸಿ ಸಹಿ ಸಂಗ್ರಹಣೆ ಅಭಿಯಾನ ಪ್ರಾರಂಭಿಸಲಾಗುವುದು ಎಂದು ಅವರು ಪ್ರಕಟಿಸಿದರು.
ಶಾಸಕರ ಆಪ್ತರು ಇತ್ತೀಚಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಶಿರಸಿಯದು ಹೈಟೆಕ್ ಆಸ್ಪತ್ರೆಯಲ್ಲ, ತಾಲೂಕು ಆಸ್ಪತ್ರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಹೈಟೆಕ್ ಆಸ್ಪತ್ರೆಗೆ ಅವಶ್ಯವಿರುವ ಎಲ್ಲ ಸೌಲಭ್ಯವನ್ನು ಹಾಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಾವು ವಿಧಾನಸಭೆ ಸಭಾಧ್ಯಕ್ಷರಾಗಿದ್ದಾಗ ಮಂಜೂರಿ ಮಾಡಿಸಿಕೊಂಡು ಬಂದಿದ್ದರು. ಹೈಟೆಕ್ ಆಸ್ಪತ್ರೆ ಆಗಿರುವ ಕಾರಣಕ್ಕೇ ಇದರಲ್ಲಿ ಹೃದಯ ಚಿಕಿತ್ಸೆಗೆ ಸಂಬಂಧಿಸಿ ಕ್ಯಾಥ್ ಲ್ಯಾಬ್, ಕಾರ್ಡಿಯಾಲಜಿ, ನೆಫ್ರೊಲೊಜಿ, ಯುರೊಲೊಜಿ, ನ್ಯುರೋಲಜಿ, ಟ್ರಾಮಾ ಸೆಂಟರ್ ಮಾಡುವ ಅವಕಾಶ ಇದೆ, ಎಂಆರ್ಐ ಯಂತ್ರ ಮತ್ತು ಸಿಟಿ ಸ್ಕ್ಯಾನ್ ಯಂತ್ರ ಒಳಗೊಂಡು ಇನ್ನೂ ಹಲವಾರು ಸ್ಪೆಶಾಲಿಟಿ ಸೌಲಭ್ಯಗಳು ಇದೆ. ಸಾಮಾನ್ಯ ಆಸ್ಪತ್ರೆಯಲ್ಲಿ ಇವೆಲ್ಲ ಇರತ್ತವೆಯಾ? 250 ಹಾಸಿಗೆಗಳಿಗೆ 142 ಕೋಟಿ ರೂ.ಗಳ ಬಜೆಟ್ ಇರುತ್ತಿತ್ತಾ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನು ಕೆಳದರ್ಜೆಗೆ ತಳ್ಳುವುದು ಸರಿಯಲ್ಲ. ಬಡವರ ಭಾಗ್ಯವನ್ನು ಶಾಸಕರು ಕಸಿಯಬಾರದು ಎಂದರು.
ನಾನು ಮಾಧ್ಯಮಕ್ಕೆ ಬಿಡುಗಡೆಗೊಳಿಸಿದ ಎಲ್ಲ ದಾಖಲೆಗಳನ್ನೂ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿದ್ದೇನೆ. ಇದ್ಯಾವುದೂ ನನ್ನ ಮನೆಯ ದಾಖಲೆಗಳಲ್ಲ. ಶಿರಸಿಯ ಆಸ್ಪತ್ರೆ ಹೈಟೆಕ್ ಆಸ್ಪತ್ರೆಯೆಂದು ದಾಖಲೆಗಳೇ ಹೇಳುತ್ತಿವೆ. ಆಸ್ಪತ್ರೆ ಕುರಿತಾಗಿ ಶಾಸಕರು ಇದುವರೆಗೆ ತುಟಿ ಬಿಚ್ಚದೇ ಮೌನವಾಗಿರುವುದು ಯಾಕೆ..?. ಇದಕ್ಕೆ ತಕ್ಷಣ ಶಾಸಕರು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಜಿಪಂ ಮಾಜಿ ಸದಸ್ಯ ಹಾಲಪ್ಪ ಜಕ್ಕಣ್ಣನವರ್ ಮಾತನಾಡಿ, ಸಾರ್ವಜನಿಕ ವಿಚಾರ ಕೇಳುವುದು ಪ್ರತಿಯೊಬ್ಬನ ಹಕ್ಕು. ನಾವು ಯಾರೂ ಶಾಸಕರ ವಿರೋಧಿಗಳಲ್ಲ. ಅಭಿವೃದ್ಧಿ ಪರವಾಗಿ ಮಾತನಾಡುತ್ತಿದ್ದೇವೆ ಎಂದರು.
ಸಿದ್ದಾಪುರ ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಕೆ. ತಿಮ್ಮಪ್ಪ ಮಾತನಾಡಿ, ಹಿಂದಿನ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನದಿಂದ ಶಿರಸಿಗೆ ಹೈಟೆಕ್ ಆಸ್ಪತ್ರೆ ಬಂದಿದೆ. ಆದರೆ ಅನಂತಮೂರ್ತಿ ಹೆಗಡೆಯವರು ಈಗ ಹೈಟೆಕ್ ಆಸ್ಪತ್ರೆ ಬಗ್ಗೆ ಮಾತನಾಡಿದರೆ, ಹೋರಾಟ ಮಾಡಿದರೆ ಅವರ ಮೇಲೆ ಕೇಸ್ ಹಾಕುತ್ತಾರೆ. ಇದು ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಶಿರಸಿ ತಾಲೂಕು ಅಧ್ಯಕ್ಷೆ ಉಷಾ ಹೆಗಡೆ, ರಂಗಪ್ಪ ದಾಸನಕೊಪ್ಪ ಇದ್ದರು.
ನಿಮ್ಮ ಕಾಮೆಂಟ್ ಬರೆಯಿರಿ