ಬೆಂಗಳೂರು: ದುಬೈನಿಂದ ಬೆಂಗಳೂರಿಗೆ ಅಕ್ರಮ ಚಿನ್ನತಂದ ಆರೋಪದಲ್ಲಿ ಸಿನಿಮಾ ನಟಿ ರನ್ಯಾ ರಾವ್ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ರನ್ಯಾ ಅವರು ದುಬೈನಿಂದ ಬೆಂಗಳೂರಿಗೆ ಮಾರ್ಚ್ 3ರ ಮಧ್ಯರಾತ್ರಿ ಆಗಮಿಸಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಡಿಆರ್ಐ ಅಧಿಕಾರಿಗಳು ಮಾರ್ಚ್4ರಂದು ರಾತ್ರಿ ನಟಿ ರನ್ಯಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿದೇಶದಿಂದ ಹೆಚ್ಚುವರಿ ಬಂಗಾರ ತಂದ ಆರೋಪ ರನ್ಯಾ ಮೇಲೆ ಇದೆ.
ಕಳೆದ 15 ದಿನಗಳಲ್ಲಿ ನಾಲ್ಕು ಬಾರಿ ದುಬೈಗೆ ಭೇಟಿ ನೀಡಿ ಬೆಂಗಳೂರಿಗೆ ಹಿಂತಿರುಗಿದ್ದ ನಟಿಯ ಬಗ್ಗೆ ಡಿಆರ್ಐ ಎಚ್ಚೆತ್ತುಕೊಂಡು ಮಾಹಿತಿ ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ. ಆರೋಪಿ ನಟಿ ದುಬೈನಿಂದ ವಿಮಾನ ಹತ್ತಿದ್ದಾರೆ ಎಂಬ ಮಾಹಿತಿ ಪಡೆದ ಡಿಆರ್ಐನ ನಾಲ್ವರು ಅಧಿಕಾರಿಗಳ ತಂಡ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಆಕೆಯ ಆಗಮನಕ್ಕಾಗಿ ಕಾಯುತ್ತಿತ್ತು.
ಸುಮಾರು 14.8 ಕೆಜಿ ಚಿನ್ನ ಅಕ್ರಮ ಸಾಗಾಟ ಆರೋಪದಲ್ಲಿ ನಟಿ ರನ್ಯಾ ರಾವ್ ರನ್ನು ಡಿಆರ್ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದುಬೈನಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರು ನಿಗದಿತ ಪ್ರಮಾಣ ಚಿನ್ನವನ್ನು ಮಾತ್ರ ತೆಗೆದುಕೊಂಡು ಬರಲು ಅನುಮತಿ ಇದೆ. ಸದ್ಯ ನಿಯಮಗಳ ಪ್ರಕಾರ, ಪುರುಷರಿಗೆ 20 ಗ್ರಾಂ, ಮಹಿಳೆಯರಿಗೆ 40 ಗ್ರಾಂ ಚಿನ್ನವನ್ನು (ಗರಿಷ್ಠ 1 ಲಕ್ಷ ರೂ. ಮೌಲ್ಯದ) ತರಬಹುದು ಎಂದು ಹೇಳಲಾಗಿದೆ.
ನಟಿ ರನ್ಯಾ ರಾವ್ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಸಂಬಂಧಿಯಾಗಿದ್ದಾರೆ. ಇವರು ಅವರು ಮೂಲತಃ ಚಿಕ್ಕಮಗಳೂರಿನವರು. 2014 ಕಿಚ್ಚ ಸುದೀಪ್ ನಾಯಕನಾಗಿ ನಟಿಸಿ ನಿರ್ದೇಶಿಸಿದ್ದ ಮಾಣಿಕ್ಯ ಚಿತ್ರ ರನ್ಯಾ ರಾವ್ ಅವರ ಮೊದಲ ಚಿತ್ರವಾಗಿತ್ತು. 2017 ರಲ್ಲಿ ಬಿಡುಗಡೆಯಾದ ಗಣೇಶ ಅಭಿನಯದ ಕನ್ನಡದ ಹಾಸ್ಯ ಪಟಾಕಿ ಎಂಬ ಚಿತ್ರದಲ್ಲಿಯೂ ಅವರು ನಟಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ