ಬೆಂಗಳೂರು : ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 14.8 ಕೆಜಿ ಚಿನ್ನಾಭರಣವನ್ನು ಪತ್ತೆ ಮಾಡಿದ ನಂತರ ನಟಿ ಮತ್ತು ಹಿರಿಯ ಐಪಿಎಸ್ ಅಧಿಕಾರಿಯ ಮಲ ಪುತ್ರಿ ರನ್ಯಾ ರಾವ್ ಅವಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯವು ಬಂಧಿಸಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅತಿದೊಡ್ಡ ಪ್ರಮಾಣದ ಚಿನ್ನಾಭರಣದ ಪ್ರಮುಖ ಕಳ್ಳಸಾಗಣೆ ದಂಧೆಯನ್ನು ಡಿಆರ್ಐ ಭೇದಿಸಿದ್ದಾರೆ.
ರನ್ಯಾ ರಾವ್ ಅವಳನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಾರ್ಚ್ 3 ರಂದು ದುಬೈನಿಂದ ಎಮಿರೇಟ್ಸ್ ವಿಮಾನದ ಮೂಲಕ ಬೆಂಗಳೂರಿಗೆ ಬಂದಿದ್ದ ನಟಿಯನ್ನು ಡಿಆರ್ಐ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದಾಗ, ಆಕೆ 14.8 ಕೆಜಿ ತೂಕದ ಚಿನ್ನದ ತುಂಡುಗಳು ಜಾಣ್ಮೆಯಿಂದ ಬಚ್ಚಿಟ್ಟಿದ್ದು ಕಂಡುಬಂದಿದೆ. ಅದರಲ್ಲಿ ಮುಕ್ಕಾಲು ಭಾಗವನ್ನು ಆಕೆ ತನ್ನ ಧರಿಸಿದ್ದ ಬಟ್ಟೆಯಲ್ಲೇ ಬಚ್ಚಿಟ್ಟಿದ್ದಳು ಎನ್ನಲಾಗಿದೆ. ಸುಮಾರು 12.56 ಕೋಟಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಆಕ್ಟ್, 1962 ರ ನಿಬಂಧನೆಗಳ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ದಾಟಿ ಇನ್ನೇನು ಕೊನೆಯ ನಿರ್ಗಮನ ದಾಟಲು ಮುಂದಾದಾಗ, ಡಿಆರ್ಐ ತಂಡವು ಅವಳನ್ನು ತಡೆದು ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದಿದ್ದಾಳೆ.
ರನ್ಯಾ ರಾವ್ ಅವಳನ್ನು ಬಂಧಿಸಿದ ನಂತರ ಡಿಆರ್ಐ ಅಧಿಕಾರಿಗಳು ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ಅವಳ ಮನೆಯಲ್ಲಿ ಶೋಧ ನಡೆಸಿದರು.
ಈ ವೇಳೆ ತಪಾಸಣೆ ನಡೆಸಿದಾಗ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಭಾರತೀಯ ಕರೆನ್ಸಿ 2.67 ಕೋಟಿ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ. ಈ ಪ್ರಕರಣದಲ್ಲಿ ಚಿನ್ನಾಭರಣ ಹಾಗೂ ನಗದು ಸೇರಿ 17.29 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ದುಬೈಗೆ ಹಲವು ಬಾರಿ ಪ್ರಯಾಣ
ವರದಿ ಮೂಲಗಳ ಪ್ರಕಾರ, ರನ್ಯಾ ರಾವ್ ಕೇವಲ 15 ದಿನಗಳಲ್ಲಿ ನಾಲ್ಕು ಬಾರಿ ದುಬೈಗೆ ಪ್ರಯಾಣಿಸಿದ್ದಾಳೆ, ಅಲ್ಲದೆ, ಪ್ರತಿ ಬಾರಿ ದುಬೈಗೆ ಪ್ರಯಾಣಿಸುವಾಗಲೂ ಅದೇ ಬಟ್ಟೆ ಧರಿಸಿರುವುದು ಕಂಡುಬಂದಿದೆ. ಹೀಗಾಗಿ ಆಕೆ ಹಿಂದಿರುಗಿದ ನಂತರ ಉದ್ದೇಶಿತ ಕಾರ್ಯಾಚರಣೆಯನ್ನು ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು.
ಎಮಿರೇಟ್ಸ್ ವಿಮಾನದಲ್ಲಿ ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ, ನಟಿ ತನ್ನೊಂದಿಗೆ ಬಂದ ಪೊಲೀಸ್ ಕಾನ್ಸ್ಟೆಬಲ್ ಒಬ್ಬರ ಸಹಾಯದಿಂದ ಭದ್ರತಾ ತಪಾಸಣೆಯನ್ನು ಬೈಪಾಸ್ ಮಾಡಲು ಪ್ರಯತ್ನಿಸಿದ್ದಾಳೆ, ಆದರೆ, ಆಕೆಯ ಚಟುವಟಿಕೆಗಳ ನಿಗಾ ಇಟ್ಟಿದ್ದ ಡಿಆರ್ಐ, ಚಿನ್ನಾಭರಣದೊಂದಿಗೆ ಆಕೆಯನ್ನು ರೆಡ್ಹ್ಯಾಂಡ್ ಆಗಿ ಹಿಡಿದಿತ್ತು. ಆಕೆಯನ್ನು ತಪಾಸಣೆ ನಡೆಸಿದಾಗ ಆಕೆಯ ಜಾಕೆಟ್ನಲ್ಲಿ 12.56 ಕೋಟಿ ಮೌಲ್ಯದ 14.2 ಕೆಜಿ ವಿದೇಶಿ ಮೂಲದ ಚಿನ್ನ ಪತ್ತೆಯಾಗಿದೆ. ಬಂಧನದ ನಂತರ ರನ್ಯಾ ರಾವ್ ಅವಳನ್ನು ಹೆಚ್ಚಿನ ತನಿಖೆಗಾಗಿ ನಾಗವಾರದಲ್ಲಿರುವ ಡಿಆರ್ಐ ಕಚೇರಿಗೆ ಕರೆದೊಯ್ಯಲಾಯಿತು.
ರನ್ಯಾ ರಾವ್ ಹಲವಾರು ಕನ್ನಡ ಮತ್ತು ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಕರ್ನಾಟಕದ ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ಮಲಮಗಳು ಎಂದು ಹೇಳಲಾಗಿದೆ. ಯಾವುದೇ ವ್ಯಾಪಾರ ಅಥವಾ ಕುಟುಂಬ ಸಂಬಂಧಗಳಿಲ್ಲದಿದ್ದರೂ ಸಹ ನಟಿ ತನ್ನ ಪತಿ ಜೊತೆ ದುಬೈಗೆ ಆಗಾಗ್ಗೆ ಪ್ರವಾಸಕ್ಕೆ ಹೋಗುತ್ತಿದ್ದಳು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಈ ಹಿಂದೆ ಭದ್ರತಾ ತಪಾಸಣೆಗಳನ್ನು ತಪ್ಪಿಸಿಕೊಳ್ಳಲು ನಟಿ ಆಗಾಗ್ಗೆ ಪೊಲೀಸ್ ಬೆಂಗಾವಲು ಪಡೆಯುತ್ತಿದ್ದರು ಎನ್ನಲಾಗಿದೆ.ಕಸ್ಟಮ್ಸ್ ಚೆಕ್ಗಳನ್ನು ಬೈಪಾಸ್ ಮಾಡಲು ನಟಿ ತನ್ನ ಸಂಪರ್ಕಗಳನ್ನು ಬಳಸಲು ಪ್ರಯತ್ನಿಸಿರಬಹುದು ಎಂದು ಪ್ರಾಥಮಿಕ ತನಿಖೆಗಳು ಸೂಚಿಸಿವೆ.
ಆಕೆ ಏಕಾಂಗಿಯಾಗಿ ಈ ಕಾರ್ಯ ಮಾಡುತ್ತಿದ್ದಳೋ ಅಥವಾ ದುಬೈ ಮತ್ತು ಭಾರತದ ನಡುವೆ ಕಾರ್ಯನಿರ್ವಹಿಸುತ್ತಿರುವ ದೊಡ್ಡ ಕಳ್ಳಸಾಗಣೆ ಜಾಲದ ಭಾಗವಾಗಿದ್ದಾಳೆಯೋ ಎಂಬ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ