ಅಯೋಧ್ಯೆ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಮದುವೆಯ ಮೊದಲ ರಾತ್ರಿಯಂದು ನವದಂಪತಿ ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಈ ಆಘಾತಕಾರಿ ಘಟನೆಯಿಂದಾಗಿ ಮದುವೆಯ ಸಂಭ್ರಮವು ಶೋಕಾಚರಣೆಯಾಗಿ ಮಾರ್ಪಟ್ಟಿತು. ಅಯೋಧ್ಯೆ ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾದತ್ ಗಂಜ್ ಪ್ರದೇಶದ ಪ್ರದೀಪ ಎಂಬವರು ಶನಿವಾರ ಶಿವಾನಿ ಅವರನ್ನು ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಮಧ್ಯಾಹ್ನ ವರನ ಮನೆಗೆ ಮದುವೆ ದಿಬ್ಬಣ ಮರಳಿದ ನಂತರ, ಮದುವೆಯ ನಂತರದ ವಿಧಿವಿಧಾನಗಳನ್ನು ದಿನವಿಡೀ ನಡೆಸಲಾಯಿತು. ನಂತರದ ರಾತ್ರಿ ಈ ಆಘಾತಕಾರಿ ಘಟನೆ ನಡೆದಿದೆ.
ನೂತನ ವಧು-ವರರು ಮದುವೆಯ ನಂತರದ ವಿಧಿವಿಧಾನಗಳು ಮುಗಿದ ನಂತರ ರಾತ್ರಿ ತಮ್ಮ ಕೋಣೆಗೆ ಹೋಗಿದ್ದರು. ಆದರೆ, ಮರುದಿನ ಬೆಳಿಗ್ಗೆ 7 ಗಂಟೆಯಾದರೂ ನವದಂಪತಿ ಎಲ್ಲಿಯೂ ಕಾಣಿಸಿಕೊಳ್ಳದಿದ್ದಾಗ ಕುಟುಂಬ ಸದಸ್ಯರು ಗಾಬರಿಯಾದರು. ದಂಪತಿಯನ್ನು ಎಬ್ಬಿಸುವ ಪ್ರಯತ್ನಗಳು ಪ್ರಯೋಜನವಾಗಲಿಲ್ಲ, ಆತಂಕಕ್ಕೊಳಗಾದ ಕುಟುಂಬ ಸದಸ್ಯರು ಬಾಗಿಲು ಮುರಿದು ಒಳಪ್ರವೇಶಿಸಿದರು. ಅಲ್ಲಿನ ದೃಶ್ಯ ನೋಡಿ ಆಘಾತಕ್ಕೆ ಒಳಗಾದರು. ವರ ಪ್ರದೀಪ ಛಾವಣಿಯ ಕೊಕ್ಕೆಗೆ ನೇಣು ಹಾಕಿಕೊಂಡಿದ್ದು ಕಂಡುಬಂದರೆ ವಧು ಹಾಸಿಗೆಯ ಮೇಲೆ ನಿರ್ಜೀವವಾಗಿ ಮಲಗಿದ್ದರು. ತಕ್ಷಣವೇ ವೈದ್ಯರನ್ನು ಸ್ಥಳಕ್ಕೆ ಕರೆಸಲಾಯಿತು. ಅವರು ವಧು ಮತ್ತು ವರ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪ್ರಕಟಿಸಿದರು.
ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸದ್ಯ ತನಿಖೆ ನಡೆಯುತ್ತಿದೆ. ದುರಂತ ಘಟನೆಯ ಸುತ್ತಲಿನ ಮಾಹಿತಿಯನ್ನು ಸಂಗ್ರಹಿಸಲು ಪೊಲೀಸರು ಮದುವೆಗೆ ಹಾಜರಾದ ವ್ಯಕ್ತಿಗಳನ್ನು ಪ್ರಶ್ನಿಸಿದ್ದಾರೆ.
ಮೇಲ್ನೋಟಕ್ಕೆ ವರ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ವಧುವನ್ನು ಕೊಂದಿರಬಹುದು ಎಂದು ತೋರುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಯಾಕೆಂದರೆ ಕೋಣೆಯ ಒಳಗಿನಿಂದ ಬೀಗ ಹಾಕಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ವಧುವಿನ ಕತ್ತು ಹಿಸುಕಿ ಸಾಯಿಸಿದ ಮದುಮಗ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಊಹಿಸಲಾಗಿದೆ. ಆದರೆ ಇದಕ್ಕೆ ಕಾರಣ ಮಾತ್ರ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 7 ರಂದು ಮಂತು ರಾಮ ಅವರ ಮಗಳು ಶಿವಾನಿ ಎಂಬವರ ಜೊತೆ ಪ್ರದೀಪ ಅವರ ವಿವಾಹ ನಡೆದಿತ್ತು, ಮಂತು ರಾಮ ದೆಹಲಿಯ ಲೋಹಾ ಮಂಡಿಯಲ್ಲಿ ತಳ್ಳುಗಾಡಿ ನಿರ್ವಹಿಸುತ್ತಿದ್ದಾರೆ. ಅವರು ಮಗಳು ಶಿವಾನಿ ಅವರೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದರು ಮತ್ತು ಮಗಳು 8 ನೇ ತರಗತಿಯವರೆಗೆ ಓದಿದ್ದರು. ಪ್ರದೀಪ್ ಅವರ ತಂದೆ ಭಗ್ಗನ್ ಹಲವಾರು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಪ್ರದೀಪಗೆ ಇಬ್ಬರು ಸಹೋದರರು ಮತ್ತು ಮೂವರು ಸಹೋದರಿಯರು ಇದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ