ಲಕ್ನೋ : ಮುಖ್ಯ ಅತಿಥಿಗಳ ಕುರ್ಚಿಗಾಗಿ ಬಿಜೆಪಿ ನಾಯಕರು ಹೊಡೆದಾಡಿಕೊಂಡ ಘಟನೆ ಉತ್ತರಪ್ರದೇಶದ ಉತ್ತರ ಪ್ರದೇಶದ ಮೊರಾದಾಬಾದ್ನ ಛಜಲತ್ ಬ್ಲಾಕ್ನಲ್ಲಿ ಗುರುವಾರ (ಮಾರ್ಚ್ 27) ನಡೆದಿದೆ. ಬಿಜೆಪಿ ಸರ್ಕಾರ ಎಂಟು ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮತ್ತು ಬ್ಲಾಕ್ ಅಧ್ಯಕ್ಷರ ನಡುವೆ ಮುಖ್ಯ ಅತಿಥಿಗಳ ಕುರ್ಚಿಗಾಗಿ ಜಗಳ ನಡೆದಿದ್ದು, ಈ ಜಗಳ ತಾರಕಕ್ಕೇರಿ ಹೊಡೆದಾಡಿಕೊಂಡಿದ್ದಾರೆ. ಇಬ್ಬರು ನಾಯಕರ ಬೆಂಬಲಿಗರು ಸಹ ಈ ಜಗಳದಲ್ಲಿ ಭಾಗಿಯಾಗಿದ್ದಾರೆ. ಮಾಜಿ ಬಿಜೆಪಿ ಶಾಸಕ ರಾಜೇಶಕುಮಾರ ಸಿಂಗ್ ಮತ್ತು ಬ್ಲಾಕ್ ಅಧ್ಯಕ್ಷ ರಾಜಪಾಲ ಸಿಂಗ್ ಅವರು ಪರಸ್ಪರ ಹೊಡೆದಾಡುತ್ತಿರುವ ವಿಡಿಯೊ ಈಗ ವೈರಲ್ ಆಗಿದೆ.
ಯೋಗಿ ಸರ್ಕಾರ 8 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಛಜಲತ್ ಬ್ಲಾಕ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಿಜೆಪಿ ಜಿಲ್ಲಾಧ್ಯಕ್ಷ ಆಕಾಶ ಪಾಲ, ಮಾಜಿ ಶಾಸಕ ರಾಜೇಶಕುಮಾರ ಸಿಂಗ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆದರೆ ರಾಜೇಶ ಸಿಂಗ್ ಕಾರ್ಯಕ್ರಮಕ್ಕೆ ಬಂದ ವೇಳೆ ಬ್ಲಾಕ್ ಮುಖ್ಯಸ್ಥ ರಾಜಪಾಲ್ ಸಿಂಗ್ ಮುಖ್ಯ ಅತಿಥಿಯ ಕುರ್ಚಿಯಲ್ಲಿ ಕುಳಿತಿರುವುದನ್ನು ನೋಡಿದ್ದಾರೆ. ಈ ವಿಷಯದ ಬಗ್ಗೆ ಇಬ್ಬರ ನಡುವೆ ವಾಗ್ವಾದ ಆರಂಭವಾಗಿದ್ದು, ಅದು ಜಗಳಕ್ಕೆ ತಿರುಗಿತು.
ಇಬ್ಬರೂ ನಾಯಕರು ವೇದಿಕೆಯಲ್ಲಿದ್ದ ಜನರ ಮುಂದೆ ಪರಸ್ಪರ ಕೆನ್ನೆಗೆ ಹೊಡೆದುಕೊಂಡು ಒಬ್ಬರಿಗೊಬ್ಬರು ಕೂದಲನ್ನು ಹಿಡಿದು ಎಳೆದಾಡಿಕೊಂಡಿದ್ದಾರೆ. ಇಬ್ಬರೂ ಒಬ್ಬರ ಮೇಲೆ ಮತ್ತೊಬ್ಬರು ನೀರಿನ ಬಾಟಲಿಗಳು ಮತ್ತು ಕುರ್ಚಿಗಳನ್ನು ಎಸೆದಿದ್ದಾರೆ.
ಉಭಯ ನಾಯಕರು ತಮ್ಮ ತಮ್ಮ ಸ್ಪಷ್ಟೀಕರಣಗಳನ್ನು ನೀಡುತ್ತಾ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಯಾರೂ ಯಾವುದೇ ದೂರು ನೀಡಿಲ್ಲ ಮತ್ತು ಮಾಧ್ಯಮಗಳಿಗೆ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ