
ಶ್ರೀನಗರ : ಮಂಗಳವಾರ (ಏಪ್ರಿಲ್ 22) ಜಮ್ಮು ಮತ್ತು ಕಾಶ್ಮೀರದ ಪ್ರವಾಸಿ ಕೇಂದ್ರವಾದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ಸುರಿಮಳೆಗೈಯುವ ವೇಳೆ ಸೈಯದ್ ಆದಿಲ್ ಹುಸೇನ್ ಶಾ ಎಂಬ ಪೋನಿ ರೈಡ್ ಆಪರೇಟರ್ ಅಸಾಧಾರಣ ಧೈರ್ಯ ಪ್ರದರ್ಶಿಸಿದ್ದು, ಆದರೆ ಪ್ರಾಣ ಕಳೆದುಕೊಂಡಿದ್ದಾರೆ.
ಲಷ್ಕರ್-ಎ-ತೈಬಾದ ಶಾಖೆಯಾದ ದಿ ರೆಸಿಸ್ಟೆನ್ಸ್ ಫೋರ್ಸ್ (ಟಿಆರ್ಎಫ್) ನಡೆಸಿದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಏಕೈಕ ಸ್ಥಳೀಯ ವ್ಯಕ್ತಿ ಅವರು.
ಭಯೋತ್ಪಾದಕರು ದಾಳಿ ಪ್ರವಾಸಿಗರ ಮೇಲೆ ದಾಳಿ ಮಾಡಿದಾಗ ಹೆಚ್ಚಿನವರು ಸುರಕ್ಷತೆಗಾಗಿ ಓಡುತ್ತಿದ್ದಾಗ, ಆದಿಲ್ ಹುಸೇನ್ ಶಾ ಬಂದೂಕುಧಾರಿಗಳಲ್ಲಿ ಒಬ್ಬನ ಕಡೆಗೆ ಧಾವಿಸಿ, ಆತನ ಕೈಯಿಂದ ರೈಫಲ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಆದಿಲ್ ಸ್ಥಳೀಯನಾಗಿದ್ದು, ದಾಳಿಯಿಂದ ಮಹಿಳೆಯನ್ನು ರಕ್ಷಣೆ ಮಾಡಲು ಭಯೋತ್ಪಾದಕನ ವಿರುದ್ಧ ಹೋರಾಡಿದ್ದರು.

ಕಾಲುದಾರಿಯ ಮೂಲಕ ನಡೆದುಕೊಂಡು ಮಾತ್ರ ಹೋಗಬಹುದಾದ ಹಚ್ಚ ಹಸಿರಿನ ಬಯಲು ಪ್ರದೇಶವಾದ ಬೈಸರನ್ ಹುಲ್ಲುಗಾವಲಿಗೆ ಕುದುರೆಯ ಮೇಲೆ ಸಂದರ್ಶಕರನ್ನು ಕರೆದೊಯ್ದ 34 ವರ್ಷ ಆದಿಲ್ ಹುಸೇನ್ ಶಾ ಅವರು ಜನರನ್ನು ಉಳಿಸಲು ಭಯೋತ್ಪಾದಕರ ರೈಫಲ್ ಕಸಿದುಕೊಳ್ಳಲು ಯತ್ನಿಸಿದಾಗ ಅವರ ಮೇಲೆ ಗುಂಡು ಹಾರಿಸಲಾಯಿತು. ಹೆಚ್ಚಿನವರು ಪ್ರವಾಸಿಗರು ಸೇರಿದಂತೆ 28 ಜನರು ಸಾವಿಗೀಡಾದ ಹತ್ಯಾಕಾಂಡದ ಸಂದರ್ಭದಲ್ಲಿ ಆದಿಲ್ ಹುಸೇನ್ ಶಾ ಅವರ ತೋರಿದ ಪ್ರತಿರೋಧವು ಧೈರ್ಯದ ಸಂಕೇತವಾಯಿತು.
ಬದುಕುಳಿದವರ ಪ್ರಕಾರ, ದಾಳಿಕೋರರು ಪ್ರವಾಸಿಗರ ಮೇಲೆ ಗುಂಡುಹಾರಿಸುವ ಮೊದಲು ಅವರ ಧರ್ಮ ಕೇಳಿಕೊಂಡು, ಕಲ್ಮಾ ಪಠಿಸುವಂತೆ ಒತ್ತಾಯಿಸಿ ಮತ್ತು ಕೆಲವರ ಬಟ್ಟೆ ಬಿಚ್ಚಿಸಿ ನಂತರ ಗುಂಡು ಹಾರಿಸಿದ್ದಾರೆ.
ಆದಿಲ್ ಹುಸೇನ್ ಶಾ ಅವರು ಇಬ್ಬರು ಮಕ್ಕಳ ತಂದೆ ಮತ್ತು ಅವರ ಕುಟುಂಬಕ್ಕೆ ಏಕೈಕ ದುಡಿಮೆಯವರಾಗಿದ್ದರು. ಅವರ ದುಃಖಿತ ಪೋಷಕರು, ವಿಧವೆ ಮತ್ತು ಈಗ ಮಕ್ಕಳನ್ನು ಅಗಲಿದ್ದಾರೆ. “ನನ್ನ ಮಗ ನಿನ್ನೆ ಪಹಲ್ಗಾಮ್ಗೆ ಕೆಲಸಕ್ಕೆ ಹೋಗಿದ್ದ, ಮತ್ತು ಮಧ್ಯಾಹ್ನ 3 ಗಂಟೆ ಸುಮಾರಿಗೆ ದಾಳಿಯ ಬಗ್ಗೆ ನಮಗೆ ತಿಳಿಯಿತು. ನಾವು ಅವನಿಗೆ ಕರೆ ಮಾಡಿದೆವು, ಆದರೆ ಅವನ ಫೋನ್ ಸ್ವಿಚ್ ಆಫ್ ಆಗಿತ್ತು,” ಎಂದು ಅವರ ತಂದೆ ಸೈಯದ್ ಹೈದರ್ ಶಾ ಹೇಳಿದ್ದಾರೆ. “ನಂತರ, ಸಂಜೆ 4:40 ಕ್ಕೆ, ಆತನ ಫೋನ್ ಆನ್ ಆಗಿತ್ತು, ಆದರೆ ಯಾರೂ ಉತ್ತರಿಸಲಿಲ್ಲ. ನಾವು ಪೊಲೀಸ್ ಠಾಣೆಗೆ ಧಾವಿಸಿದೆವು, ಮತ್ತು ಆಗಲೇ ಆತ ಭಯೋತ್ಪಾದಕ ದಾಳಿಯಲ್ಲಿ ಗಾಯಗೊಂಡಿದ್ದಾನೆ ಎಂದು ನಮಗೆ ತಿಳಿಯಿತು. ಈ ಭಯೋತ್ಪಾದನೆ ಕೃತ್ಯದ ಹೊಣೆಗಾರರು ಯಾರು ಬೇಕಾದರೂ ಇರಲಿ, ಅವರು ಪರಿಣಾಮಗಳನ್ನು ಎದುರಿಸಲೇಬೇಕು ಎಂದು ಅವರು ಹೇಳಿದರು.
ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ ಒಂದು ಶಾಖೆ ದಿ ರೆಸಿಸ್ಟೆನ್ಸ್ ಫ್ರಂಟ್ ಈ ಕ್ರೂರ ದಾಳಿಯ ಹಿಂದಿದೆ.


ನಿಮ್ಮ ಕಾಮೆಂಟ್ ಬರೆಯಿರಿ