“ಅವರು ನಿಮ್ಮ ತಾಯಿಗೆ ಗುಂಡು ಹಾರಿಸಿದಾಗ ಮಾತ್ರ ಭಯೋತ್ಪಾದನೆ…ನಮ್ಮವರ ಮೇಲೆ ಗುಂಡು ಹಾರಿಸಿದಾಗ ಅಲ್ಲವೇ ?”: ಪಾಕಿಸ್ತಾನದ ಬಿಲಾವಲ್ ಭುಟ್ಟೋಗೆ ತಿವಿದ ಓವೈಸಿ

ನವದೆಹಲಿ: ಪಾಕಿಸ್ತಾನದ ಪೀಪಲ್‌ ಪಾರ್ಟಿ ನಾಯಕ ಬಿಲಾವಲ್ ಭುಟ್ಟೋ ಜರ್ದಾರಿ ಅವರ “ರಕ್ತ ಹರಿಯುತ್ತದೆ” ಎಂಬ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನಾಯಕ ತನ್ನ ತಾಯಿ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಮತ್ತು ಅವರ ಅಜ್ಜ ಮತ್ತು ದೇಶದ ಮಾಜಿ ಅಧ್ಯಕ್ಷ ಜುಲ್ಫಿಕರ್ ಅಲಿ ಭುಟ್ಟೋ ಅವರನ್ನು ಕೊಂದವರು ಯಾರು ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
2023ರ ವರೆಗೆ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ ಮತ್ತು ಆಡಳಿತ ಒಕ್ಕೂಟದ ಭಾಗವಾಗಿ ಮುಂದುವರೆದಿರುವ ಬಿಲಾವಲ್ ಭುಟ್ಟೋ, ಏಪ್ರಿಲ್ 22 ರಂದು 25 ಪ್ರವಾಸಿಗರು ಮತ್ತು ಕಾಶ್ಮೀರಿಯೊಬ್ಬರು ಸಾವಿಗೀಡಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ನಿರ್ಧಾರಕ್ಕೆ “ರಕ್ತ ಹರಿಯುತ್ತದೆ ಪ್ರತಿಕ್ರಿಯಿಸಿದ್ದರು. “ಸಿಂಧೂ ನಮ್ಮದು ಮತ್ತು ನಮ್ಮದೇ ಆಗಿರುತ್ತದೆ – ನಮ್ಮ ನೀರು ಅದರ ಮೂಲಕ ಹರಿಯುತ್ತದೆ, ಅಥವಾ ಅವರ ರಕ್ತ” ಎಂದು ಅವರು ಶುಕ್ರವಾರ ನಡೆದ ರ್ಯಾಲಿಯಲ್ಲಿ ಹೇಳಿದ್ದರು. ಪಿಪಿಪಿ ನಾಯಕನ ಈ ಹೇಳಿಕೆಗಳು ಭಾರತದಲ್ಲಿ ಬಲವಾದ ಪ್ರತಿಕ್ರಿಯೆಗೆ ಕಾರಣವಾಯಿತು.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

“ಇಂತಹ ಬಾಲಿಶ ಮಾತುಗಳನ್ನು ಮರೆತುಬಿಡಿ. ಬಿಲಾವಲ್‌ ಭುಟ್ಟೋ ಅವರಿಗೆ ಅವರ ಅಜ್ಜನಿಗೆ ಏನಾಯಿತು ಎಂದು ಅವರಿಗೆ ತಿಳಿದಿಲ್ಲವೇ? ಅವರ ತಾಯಿ ಏನಾದರು? ಅವರ ತಾಯಿಯನ್ನು ಭಯೋತ್ಪಾದಕರು ಕೊಂದರು. ಆದ್ದರಿಂದ ಕನಿಷ್ಠ ಪಕ್ಷ, ಅವರು ಈ ರೀತಿ ಮಾತನಾಡಬಾರದು. ನೀವು ಏನು ಮಾತನಾಡುತ್ತಿದ್ದೀರಿ ಎಂದು ನಿಮಗೆ ತಿಳಿದಿದೆಯೇ? ಅಮೆರಿಕ ನಿಮಗೆ ಏನನ್ನಾದರೂ ನೀಡದ ಹೊರತು, ನೀವು ದೇಶವನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು.
“ತಮ್ಮ ತಾಯಿಯನ್ನು ಕೊಂದವರು ಯಾರು ಎಂದು ಅವನು ಯೋಚಿಸಬೇಕು. ಭಯೋತ್ಪಾದನೆ ನಿಮ್ಮ ತಾಯಿಯವರನ್ನು ಕೊಂದಿತು. ಅವರು ನಿಮ್ಮ ತಾಯಿಯ ಮೇಲೆ ಗುಂಡು ಹಾರಿಸಿದಾಗ, ಅದು ಭಯೋತ್ಪಾದನೆ. ಮತ್ತು ಅವರು ನಮ್ಮ ತಾಯಂದಿರು ಮತ್ತು ಹೆಣ್ಣುಮಕ್ಕಳನ್ನು ಕೊಂದಾಗ, ಅದು ಭಯೋತ್ಪಾದನೆ ಅಲ್ಲವೇ?” ಎಂದು ಅವರು ಪ್ರಶ್ನಿಸಿದರು.

ಪಾಕಿಸ್ತಾನದ ನಾಯಕರು ಭಾರತಕ್ಕೆ ಪರಮಾಣು ಬಾಂಬ್‌ಗಳಿಂದ ಬೆದರಿಕೆ ಹಾಕುತ್ತಿದ್ದಾರೆ ಎಂದು ಓವೈಸಿ ಟೀಕಿಸಿದ್ದಾರೆ. “ನೀವು ಒಂದು ದೇಶಕ್ಕೆ ನುಗ್ಗಿ ಅಮಾಯಕರನ್ನು ಕೊಂದರೆ, ಯಾವುದೇ ದೇಶದಲ್ಲಿ ಯಾರೇ ಅಧಿಕಾರದಲ್ಲಿದ್ದರೂ ಮೌನವಾಗಿರುವುದಿಲ್ಲ ಎಂಬುದನ್ನು ನೆನಪಿಡಿ. ನೀವು ನಮ್ಮ ದೇಶದ ಮೇಲೆ ದಾಳಿ ಮಾಡಿದ ರೀತಿ, ಜನರನ್ನು ಅವರ ಧರ್ಮವನ್ನು ಕೇಳಿ ನಂತರ ಗುಂಡು ಹಾರಿಸಿದ ರೀತಿ, ನೀವು ಯಾವ ಧರ್ಮದ ಬಗ್ಗೆ ಮಾತನಾಡುತ್ತಿದ್ದೀರಿ? ನೀವು ಖವಾರಿಜ್ (ಈ ಇಸ್ಲಾಮಿಕ್ ಪಂಥವನ್ನು ಧರ್ಮವಿರೋಧಿ ಎಂದು ಪರಿಗಣಿಸಲಾಗುತ್ತದೆ) ಗಿಂತ ಕೆಟ್ಟವರು. ನೀವು ಐಸಿಸ್ ಸಹಾನುಭೂತಿ ಹೊಂದಿರುವವರು ಎಂದು ಬಿಲಾವಲ್‌ ಭುಟ್ಟೋ ಅವರಿಗೆ ತಿವಿದಿದ್ದಾರೆ.
ಡಿಸೆಂಬರ್ 30, 2007 ರಂದು ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಬೆನಜೀರ್ ಭುಟ್ಟೋ ಅವರನ್ನು ಹತ್ಯೆ ಮಾಡಲಾಯಿತು. ಆತ್ಮಹತ್ಯಾ ಬಾಂಬ್ ದಾಳಿಯು ಅಲ್-ಖೈದಾ ಮತ್ತು ತಾಲಿಬಾನ್ ಶಾಖೆ ಸೇರಿದಂತೆ ಬಹು ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದೆ, ಆದರೆ ಪ್ರಕರಣವು ಬಗೆಹರಿಯದೆ ಉಳಿದಿದೆ.

ಪ್ರಮುಖ ಸುದ್ದಿ :-   ಕಸದ ರಾಶಿಯ ಮಧ್ಯೆ ಕ್ಯಾನ್ಸರ್ ಪೀಡಿತ ವೃದ್ಧ ಮಹಿಳೆ ಪತ್ತೆ : ಮೊಮ್ಮಗ ನನ್ನನ್ನು ಇಲ್ಲಿ ಬಿಟ್ಟು ಹೋದ ಎಂದ ವೃದ್ಧೆ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement