ಹಾನಿಯಾದ ತೂಗು ಸೇತುವೆ ಮೇಲೆ ಭೋರ್ಗರೆವ ನದಿ ದಾಟಲು ಹುಚ್ಚು ಸಾಹಸ ಮಾಡಿದ ವ್ಯಕ್ತಿ : ಮೈ ಜುಂ ಎನ್ನುವ ದೃಶ್ಯದ ವೀಡಿಯೊ ವೈರಲ್‌

ಪ್ರವಾಹದಿಂದ ತತ್ತರಿಸಿದ ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹಾನಿಗೊಳಗಾದ ತೂಗು ಸೇತುವೆಯ ಮೂಲಕ ಭಾರೀ ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ನದಿಯನ್ನು ದಾಟಿದ್ದಾನೆ.
ಈ ತನ ಹಾನಿಗೊಳಗಾದ ತೂಗು ಸೇತುವೆಯ ಮೂಲಕ ಉಕ್ಕೇರಿದ ನದಿಯನ್ನು ದಾಟಿರುವ ವೀಡಿಯೊ ದೃಶ್ಯಾವಳಿ ಹೊರಹೊಮ್ಮಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು X ನಲ್ಲಿ ಹಂಚಿಕೊಂಡಿರುವ 45 ಸೆಕೆಂಡುಗಳ ವೀಡಿಯೊದಲ್ಲಿ, ಅಪರಿಚಿತ ವ್ಯಕ್ತಿ ಮುರಿದಂತೆ ಕಾಣುವ ತೂಗು ಸೇತುವೆಯ ಮೇಲಿನ ಹಗ್ಗಗಳಿಗೆ ಅಂಟಿಕೊಂಡು ದಾಟುವುದನ್ನು ಕಾಣಬಹುದು. ನೀರು ಆತನ ಕೆಳಗೆ ಭೋರ್ಗರೆಯುತ್ತ ಹರಿಯುತ್ತಿದೆ. ಯಾವುದೇ ರಕ್ಷಣಾತ್ಮಕ ಸಾಧನಗಳಿಲ್ಲದೆ ಆ ವ್ಯಕ್ತಿ ನದಿಯನ್ನು ದಾಟಲು ಪ್ರಯತ್ನಿಸಿದ್ದಾನೆ.
ಅರುಣಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿ, ಹಳ್ಳ-ಕೊಳ್ಳಗಳು ಉಕ್ಕೇರಿ ಹರಿಯುತ್ತಿವೆ. ಉಕ್ಕಿ ಹರಿಯುತ್ತಿರುವ ನದಿಯನ್ನು ದಾಟಲು ಈ ವ್ಯಕ್ತಿ ಹುಂಬತನದ ಧೈರ್ಯ ತೋರಿದಂತೆ ಕಂಡುಬರುತ್ತದೆ. ನದಿಯ ಒಂದು ಬದಿಯಲ್ಲಿ ಕೆಲವರು ಕೂಗುತ್ತಿರುವುದು ಕಂಡುಬಂದಿದೆ. ಈ ವೀಡಿಯೊ ಎಂಥವರನ್ನೂ ಬೆಚ್ಚಿ ಬೀಳಿಸುವಂತಿದೆ.

ವೀಡಿಯೊ ಹಂಚಿಕೊಂಡಿರುವ ಕೇಂದ್ರ ಸಚಿವ ಕಿರಣ ರಿಜಿಜು ಅವರು, ದಯವಿಟ್ಟು ಜಾಗರೂಕರಾಗಿರು, ಸುರಕ್ಷಿತವಾಗಿರಿ ಎಂದು ಮನವಿ ಮಾಡಿದ್ದಾರೆ.
“ಅರುಣಾಚಲ ಪ್ರದೇಶದಲ್ಲಿ ಅತಿ ಹೆಚ್ಚು ಮಾನ್ಸೂನ್ ಮಳೆಯಾಗುತ್ತಿದೆ. ಭಾರತ, ಚೀನಾ ಮತ್ತು ಮ್ಯಾನ್ಮಾರ್ ಗಡಿಯ ತ್ರಿ-ಜಂಕ್ಷನ್ ಬಳಿಯ ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ಸಾಂಪ್ರದಾಯಿಕ ತೂಗು ಸೇತುವೆಯನ್ನು ದಾಟುತ್ತಿರುವ ವ್ಯಕ್ತಿಯ ವೀಡಿಯೊವನ್ನು ನಾನು ಪಡೆದುಕೊಂಡಿದ್ದೇನೆ. ದಯವಿಟ್ಟು ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ. ಸರ್ಕಾರವು ಅಗತ್ಯ ಬೆಂಬಲವನ್ನು ಒದಗಿಸುತ್ತದೆ” ಎಂದು ರಿಜಿಜು ವೀಡಿಯೊ ಜೊತೆಗೆ ಬರೆದಿದ್ದಾರೆ.
ಪಶ್ಚಿಮ ಅರುಣಾಚಲ ಪ್ರದೇಶದ ಲೋಕಸಭಾ ಕ್ಷೇತ್ರದ ಸಂಸದ ರಿಜಿಜು ಪ್ರತ್ಯೇಕ ಪೋಸ್ಟ್‌ನಲ್ಲಿ ಭಾರತೀಯ ವಾಯುಪಡೆಯು ಕೇಂದ್ರ ಸಶಸ್ತ್ರ ಪಡೆಗಳು, ಎನ್‌ಡಿಆರ್‌ಎಫ್ ಮತ್ತು ಈಶಾನ್ಯದಾದ್ಯಂತ ರಾಜ್ಯ ಸರ್ಕಾರಿ ಪಡೆಗಳ ಸಮನ್ವಯದೊಂದಿಗೆ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದೆ ಎಂದು ಹಂಚಿಕೊಂಡಿದ್ದಾರೆ.

ಮುಂಗಾರು ಆರಂಭದೊಂದಿಗೆ ಅರುಣಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಮೇ 30 ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಘಟನೆಗಳು ಮತ್ತು ಭೂಕುಸಿತಗಳಲ್ಲಿ ಕನಿಷ್ಠ ಒಂಬತ್ತು ಜನರು ಸಾವಿಗೀಡಾಗಿದ್ದಾರೆ.
ಪೂರ್ವ ಕಾಮೆಂಗ್‌ನಲ್ಲಿ, ಎರಡು ಕುಟುಂಬಗಳ ಸದಸ್ಯರನ್ನು ಕರೆದೊಯ್ಯುತ್ತಿದ್ದ ವಾಹನವು ಭಾರಿ ಭೂಕುಸಿತದಿಂದ ರಸ್ತೆಯಿಂದ ಕೊಚ್ಚಿಹೋದಾಗ ಇಬ್ಬರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಸಾವಿಗೀಡಾಗಿದ್ದಾರೆ. ವರದಿ ಪ್ರಕಾರ, ರಾಷ್ಟ್ರೀಯ ಹೆದ್ದಾರಿ -13 ರ ಬನಾ-ಸೆಪ್ಪಾ ಪ್ರದೇಶದ ನಡುವೆ ಈ ಘಟನೆ ವರದಿಯಾಗಿದೆ. ಎರಡನೇ ಘಟನೆಯಲ್ಲಿ, ಲೋವರ್ ಸುಬನ್ಸಿರಿ ಜಿಲ್ಲೆಯ ಪೈನ್ ಗ್ರೋವ್ ಪ್ರದೇಶದ ಬಳಿ ಎಲೆಕೋಸು ತೋಟದಲ್ಲಿ ಭೂಕುಸಿತ ಸಂಭವಿಸಿದ ನಂತರ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದಾರೆ ಮತ್ತು ಇತರ ಇಬ್ಬರನ್ನು ರಕ್ಷಿಸಲಾಯಿತು.

ಮುಖ್ಯಮಂತ್ರಿ ಪೆಮಾ ಖಂಡು ನೇತೃತ್ವದ ಅರುಣಾಚಲ ಪ್ರದೇಶ ಸರ್ಕಾರವು ರಾಜ್ಯಾದ್ಯಂತ ಭೂಕುಸಿತ ಸಂಬಂಧಿತ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಮುಖ್ಯಮಂತ್ರಿಗಳು ಮತ್ತು ಮಣಿಪುರದ ರಾಜ್ಯಪಾಲರೊಂದಿಗೆ ಮಾತನಾಡಿದರು.”ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲ ಸಹಾಯವನ್ನು” ಅವರು ಅವರಿಗೆ ಭರವಸೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ವ್ಯಕ್ತಿಯನ್ನು ಎತ್ತಿ ನೆಲಕ್ಕೆ ಒಗೆದು, ಎಳೆದಾಡಿ, ತುಳಿದಾಡಿದ ಬೀದಿ ಗೂಳಿ ; ದೃಶ್ಯ ಕ್ಯಾಮೆರಾದಲ್ಲಿ ಸೆರೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement