ಕಾರವಾರ | ಕಾಡು ಪ್ರಾಣಿಗಳಿಗೆ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ 7 ಎಮ್ಮೆಗಳು ಸಾವು

ಕಾರವಾರ: ಕಾಡು ಪ್ರಾಣಿಗಳಿಗೆ ಅಳವಡಿಸಿದ್ದ ವಿದ್ಯುತ್ ತಂತಿಗೆ ತಗುಲಿ ಇಬ್ಬರು ಕೃಷಿಕ ಮಹಿಳೆಯರ 7 ಜಾನುವಾರುಗಳು ದಾರುಣವಾಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರದಲ್ಲಿ ನಡೆದಿದೆ.
ಈ ಬಗ್ಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗದ್ದೆ ಕೆಲಸದ ಜೊತೆ ಎಮ್ಮೆಗಳನ್ನು ಸಾಕಿ ಪಾಲನೆ ಮಾಡುತ್ತಿರುವ ಕಿನ್ನರದ ಮಸೀದಿ ಹತ್ತಿರದ ನಿವಾಸಿಯಾಗಿರುವ ಸುಶೀಲಾ ಸುರೇಶ ಪೆಡ್ನೇಕರ ಎಂಬವರು ಇಲ್ಲಿನ ವಿದ್ಯಾಧರ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ನನ್ನ 5 ಎಮ್ಮೆಗಳು ಹಾಗೂ ನನ್ನ ಅಣ್ಣನ ಪತ್ನಿ ಶಕುಂತಲಾ ವಿಠೋಬಾ ಪೆಡ್ನೇಕರ ಅವರ 2 ಕೋಣಗಳು ಸೇರಿ ಒಟ್ಟೂ 7 ಜಾನುವಾರುಗಳು ಮೃತಪಟ್ಟಿವೆ ಎಂದು ತಿಳಿಸಲಾಗಿದೆ.
ಜೂನ್‌ 2 ರಂದು ಮೇಯಲು ಬಿಟ್ಟಿದ್ದ ಜಾನುವಾರುಗಳು ಅಂದು ರಾತ್ರಿಯಾದರೂ ಮರಳಿ ಬಂದಿರಲಿಲ್ಲ. ಹೀಗಾಗಿ ಮರುದಿನ ಜೂ. 3 ರಂದು ಬೆಳಿಗ್ಗೆಯಿಂದ ಗ್ರಾಮದಲ್ಲಿ ಅವುಗಳಿಗಾಗಿ ಎರಡೂ ಕುಟುಂಬದವರು ಹುಟುಕಾಟ ಆರಂಭಿಸಿದ ನಂತರ ಮಧ್ಯಾಹ್ನದ ವೇಳೆಗೆ ಎಲ್ಲ ಏಳು ಜಾನುವಾರುಗಳು ಸತ್ತು ಬಿದ್ದಿರುವುದು ಪತ್ತೆಯಾಗಿದೆ. ಆಗ ಇತರರೊಂದಿಗೆ ಸೇರಿ ಸ್ಥಳಕ್ಕೆ ತೆರಳಿ ನೋಡಿದಾಗ ಎಲ್ಲ ಜಾನುವಾರುಗಳು ವಿದ್ಯುತ್ ಶಾಕ್‌ನಿಂದ ಮೃತಪಟ್ಟಿರುವಂತೆ ಗೋಚರಿಸಿದ್ದು ಅವುಗಳ ಕಾಲಿಗೆ ತಂತಿ ತಗುಲಿದ ಗಾಯಗಳು ಕಂಡು ಬಂದಿವೆ. ಈ ಬಗ್ಗೆ ವಿಚಾರಿಸಿದಾಗ ಘಟನೆ ನಡೆದ ಸ್ಥಳದಿಂದ ಕೊಂಚ ದೂರದಲ್ಲಿ ಜಮೀನು ಹೊಂದಿರುವ ವಿದ್ಯಾಧರ  ಎಂಬವರು ಪ್ರತಿ ದಿನ ರಾತ್ರಿ ವೇಳೆ ಕಾಡು ಹಂದಿಗಳಿಗೆಂದು ತಂತಿ ಕಟ್ಟಿ ಅದಕ್ಕೆ ವಿದ್ಯುತ್ ಸಂಪರ್ಕ ನೀಡುತ್ತಿದ್ದರು ಎಂದು ತಿಳಿದು ಬಂದಿದೆ. ಜೂ.2ರಂದು ತಂತಿಗೆ ಅನಧಿಕೃತ ವಿದ್ಯುತ್‌ ಸಂಪರ್ಕ ನೀಡಿದ್ದರಿಂದ ಅದು ತಗುಲಿ ತಮ್ಮ ಜಾನುವಾರುಗಳು ಮೃತಪಟ್ಟಿವೆ ಎಂದು ದೂರಿನಲ್ಲಿ ಸುಶೀಲಾ ಸುರೇಶ ಪೆಡ್ನೇಕರ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಮುಖ ಸುದ್ದಿ :-   ಆರ್‌ಸಿಬಿ, ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಅಧಿಕಾರಿಗಳು ಸೇರಿ ನಾಲ್ವರ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement