ತಿಂಗಳಿಗೆ 1.20 ಲಕ್ಷ ರೂ. ಸಂಬಳದ ಕೆಲಸ ಬಿಟ್ಟು ಗುಹೆಯಲ್ಲಿ ವಾಸಿಸುತ್ತಿರುವ 35 ವರ್ಷದ ವ್ಯಕ್ತಿ..! ಮದುವೆ ಎಂಬುದು “ಸಮಯ ವ್ಯರ್ಥʼವಂತೆ..!!

ಚೀನಾದ ಸಿಚುವಾನ್ ಪ್ರಾಂತ್ಯದ 35 ವರ್ಷದ ವ್ಯಕ್ತಿ ಮಿನ್ ಹೆಂಗ್ಕೈ ಎಂಬವರು ಉದ್ಯೋಗ ಮತ್ತು ಮದುವೆ ಅರ್ಥಹೀನವೆಂದು ಭಾವಿಸಿ ಗುಹೆಯಲ್ಲಿ ಏಕಾಂತವಾಗಿ ಜೀವನ ನಡೆಸುತ್ತಿದ್ದಾರೆ.
ಕುಟುಂಬದ ಸಾಲಗಳನ್ನು ತೀರಿಸಲು ದಿನಕ್ಕೆ 10 ಗಂಟೆಗಳ ಕಾಲ ರೈಡ್-ಹೇಲಿಂಗ್ ಚಾಲಕನಾಗಿ ಕೆಲಸ ಮಾಡಿದ ನಂತರ, ಅವರು ತಮ್ಮ ಕೆಲಸ ತಮ್ಮ ಉದ್ದೇಶವನ್ನು ಈಡೇರಿಸುವುದಿಲ್ಲ ಎಂದು ಕಂಡುಕೊಂಡರು. ಹೀಗಾಗಿ ಅವರು 2021 ರಲ್ಲಿ, ನಗರ ಜೀವನದ ಒತ್ತಡಗಳಿಂದ ದೂರವಾಗಿ ಏಕಾಂತದಲ್ಲಿ ವಾಸಿಸಲು ತಿಂಗಳಿಗೆ $1,400 (1.20 ಲಕ್ಷ ರೂ.) ಗಳಿಸುವ ತಮ್ಮ ಕೆಲಸವನ್ನು ಬಿಟ್ಟರು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಮಿನ್ ಹೆಂಗ್ಕೈ ಅವರು ಬ್ಯಾಂಕ್‌ಗಳಿಗೆ $42,000 ತುಂಬುವುದು ಬಾಕಿ ಇದೆ ಆದರೆ ಅವರ ಸಂಬಂಧಿಕರು ತಮ್ಮ ಆಸ್ತಿಗಳನ್ನು ಮಾರಿದ ನಂತರ ನಿರಾಶೆಗೊಂಡು ಅದನ್ನು ಮರುಪಾವತಿಸಲು ಪ್ರಯತ್ನಿಸುವುದನ್ನು ಕೈಬಿಟ್ಟಿದ್ದಾರೆ. ಅವರು 50 ಚದರ ಮೀಟರ್ ಗುಹೆಯ ಸಣ್ಣ ಜಮೀನಿಗೆ ತಮ್ಮ ಭೂಮಿಯನ್ನು ವಿನಿಮಯ ಮಾಡಿಕೊಂಡರು ಮತ್ತು ಅದನ್ನು ತಮ್ಮ ಸರಳ ಮನೆಯನ್ನಾಗಿ ಪರಿವರ್ತಿಸಲು $6,000 ಹೂಡಿಕೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಇಸ್ರೇಲ್‌-ಇರಾನ್‌ ಸಂಘರ್ಷ | ಇಸ್ರೇಲಿ ವಾಯುದಾಳಿಯಲ್ಲಿ ಇರಾನಿನ 4 ಸೇನಾ ಮೇಜರ್‌ ಜನರಲ್‌ ಗಳು, 6 ಪರಮಾಣು ವಿಜ್ಞಾನಿಗಳು ಸಾವು

ಅವರು ಸರಳ ದಿನಚರಿಯನ್ನು ಅನುಸರಿಸುತ್ತಾರೆ, ಓದಲು, ನಡೆಯಲು ಮತ್ತು ತಮ್ಮ ಭೂಮಿಯನ್ನು ನೋಡಿಕೊಳ್ಳಲು ಅವರು ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಏಳುತ್ತಾರೆ ಹಾಗೂ ರಾತ್ರಿ 10 ಗಂಟೆಗೆ ಮಲಗುತ್ತಾರೆ. ಅವರು ಮನೆಯಲ್ಲಿ ಬೆಳೆದ ತರಕಾರಿಗಳನ್ನು ತಿನ್ನುತ್ತಾರೆ ಮತ್ತು ಅಗತ್ಯ ವಸ್ತುಗಳಿಗೆ ಮಾತ್ರ ಖರ್ಚು ಮಾಡುತ್ತಾರೆ. ತಮ್ಮ ಗುಹೆಯನ್ನು ಅವರು “ಕಪ್ಪು ಕುಳಿ” ಎಂದು ಉಲ್ಲೇಖಿಸುತ್ತಾರೆ.
ಆದಾಗ್ಯೂ, ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಜೀವನದ ಬಗ್ಗೆ ಹಂಚಿಕೊಳ್ಳುತ್ತಾರೆ, ಅಲ್ಲಿ ಅವರು 40,000 ಫಾಲೋವರ್ಸ್‌ಗಳನ್ನು ಮತ್ತು ಲೈವ್-ಸ್ಟ್ರೀಮಿಂಗ್ ಮೂಲಕ ಹಣವನ್ನೂ ಗಳಿಸಿದ್ದಾರೆ. ನಗರದಲ್ಲಿ ಕೆಲಸ ಮಾಡುವಾಗ ಈ ಸರಳ ಜೀವನಕ್ಕಾಗಿ ತಾನು ಹಂಬಲಿಸಿದ್ದೆ ಎಂದು ಹೆಂಗ್ಕೈ ಹೇಳಿದ್ದಾರೆ. ಅವರು ಮದುವೆ ಮಾಡಿಕೊಳ್ಳುವುದನ್ನು ಸಹ ತಿರಸ್ಕರಿಸಿದ್ದಾರಂತೆ. ಮದುವೆ ಮಾಡಿಕೊಳ್ಳುವುದು “ಸಮಯ ಮತ್ತು ಹಣದ ವ್ಯರ್ಥ” ಎಂದು ಅವರು ಕರೆಯುತ್ತಾರೆ. ಅದರಲ್ಲಿ ನಿಜವಾದ ಪ್ರೀತಿಯನ್ನು ಕಂಡುಕೊಳ್ಳುವ ಸಾಧ್ಯತೆಗಳು ತುಂಬಾ ಕಡಿಮೆ ಎಂದು ನಂಬಿದ್ದಾಗಿ ಸಿಚುವಾನ್ ಟೆಲಿವಿಷನ್‌ಗೆ ತಿಳಿಸಿದ್ದಾರೆ.

ಅವರ ಕಥೆ ಆನ್‌ಲೈನ್ ಚರ್ಚೆಗೆ ಕಾರಣವಾಗಿದೆ. ಅವರನ್ನು “ಟ್ಯಾಂಗ್ ಪಿಂಗ್” ಅಥವಾ “ಸಮತಟ್ಟಾಗಿ ಮಲಗುವುದು” ಎಂದು ಲೇಬಲ್ ಮಾಡಿದರು, ಅಂದರೆ ಅವರು ಕನಿಷ್ಠ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಅರ್ಥ. ಇನ್ನೂ ಕೆಲವರು, ಮೂಲಭೂತ ಶಿಕ್ಷಣವನ್ನು ಹೊಂದಿದ್ದರೂ ಸಹ, ಸಾಮಾಜಿಕ ರೂಢಿಗಳನ್ನು ತಿರಸ್ಕರಿಸಿದ್ದಕ್ಕಾಗಿ ಅವರನ್ನು “ನಿಜವಾದ ತತ್ವಜ್ಞಾನಿ” ಎಂದು ಬಣ್ಣಿಸಿದ್ದಾರೆ.
ಆದಾಗ್ಯೂ, ಕೆಲವರು ಅವರ ಏಕಾಂತ ಜೀವನಶೈಲಿಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಅವರು ಇನ್ನೂ ಲೈವ್‌ ಸ್ಟ್ರೀಮ್‌ಗೆ ಬರುವ ಮೂಲಕ ನೇರ ಪ್ರಸಾರದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಸಂದರ್ಶನಗಳನ್ನು ನೀಡುತ್ತಾರೆ. ಇದು ಅವರು ತಾವು ಪ್ರತ್ಯೇಕವಾಗಿ ವಾಸಿಸುತ್ತೇನೆ ಎಂದು ಪ್ರತಿಪಾದಿಸುವುದಕ್ಕೆ ವಿರುದ್ಧವಾಗಿದೆ ಎಂದು ಬೊಟ್ಟು ಮಾಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಭಾರಿ ಬೆಂಕಿ ಅವಘಡ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement