
ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ಪ್ರಮುಖ ಬೆಳವಣಿಗೆಯಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯು 26 ಪ್ರವಾಸಿಗರನ್ನು ಕೊಂದುಹಾಕಿದ ಮತ್ತು 16 ಜನರನ್ನು ತೀವ್ರವಾಗಿ ಗಾಯಗೊಳಿಸಿದ ಕ್ರೂರ ಪಹಲ್ಗಾಮ್ ದಾಳಿಗೆ ಕಾರಣರಾದ ಲಷ್ಕರ್-ಎ-ತೊಯ್ಬಾ (LeT) ಭಯೋತ್ಪಾದಕರಿಗೆ ಆಶ್ರಯ ನೀಡಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ.
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ಅಮಾಯಕ ಭಾರತೀಯರ ಸಾವಿಗೆ ಕಾರಣವಾದ ಮೂವರು ಭಯೋತ್ಪಾದಕರು ಪಾಕಿಸ್ತಾನಿ ಪ್ರಜೆಗಳು ಮತ್ತು ಲಷ್ಕರ್-ಎ-ತೈಬಾದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕಂಡುಕೊಂಡಿದೆ.
ಈ ಘೋರ ದಾಳಿಯ ತನಿಖೆಯಲ್ಲಿ ದೊಡ್ಡ ಪ್ರಗತಿ ಕಂಡಿರುವ ಭಯೋತ್ಪಾದನಾ ನಿಗ್ರಹ ಸಂಸ್ಥೆ, ‘ಮಿನಿ ಸ್ವಿಟ್ಜರ್ಲೆಂಡ್’ ಎಂದೂ ಕರೆಯಲ್ಪಡುವ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ದಾಳಿ ನಡೆಸಿದ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವುದಾಗಿ ತಿಳಿಸಿದೆ.

“ಪಹಲ್ಗಾಮ್ನ ಬಟ್ಕೋಟ್ನ ಪರ್ವೈಜ್ ಅಹ್ಮದ್ ಜೋಥರ್ ಮತ್ತು ಪಹಲ್ಗಾಮ್ನ ಹಿಲ್ ಪಾರ್ಕ್ನ ಬಶೀರ್ ಅಹ್ಮದ್ ಜೋಥರ್ ಎಂಬ ಇಬ್ಬರು ವ್ಯಕ್ತಿಗಳು ದಾಳಿಯಲ್ಲಿ ಭಾಗಿಯಾಗಿರುವ ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರ ಗುರುತುಗಳನ್ನು ಬಹಿರಂಗಪಡಿಸಿದ್ದಾರೆ ಮತ್ತು ಅವರು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾ (LeT) ಗೆ ಸಂಬಂಧಿಸಿದ ಪಾಕಿಸ್ತಾನಿ ಪ್ರಜೆಗಳು ಎಂದು ದೃಢಪಡಿಸಿದ್ದಾರೆ” ಎಂದು ಎನ್ಐಎ (NIA) ಹೇಳಿಕೆಯಲ್ಲಿ ತಿಳಿಸಿದೆ. ಎನ್ಐಎ ತನಿಖೆಯ ಪ್ರಕಾರ, ದಾಳಿಗೆ ಮುನ್ನ ಪರ್ವೈಜ್ ಮತ್ತು ಬಶೀರ್ ಮೂವರು ಶಸ್ತ್ರಸಜ್ಜಿತ ಭಯೋತ್ಪಾದಕರಿಗೆ ಹಿಲ್ ಪಾರ್ಕ್ನಲ್ಲಿರುವ ಋತುಮಾನದ ಧೋಕ್ (ಗುಡಿಸಲು) ನಲ್ಲಿ ಅವರ ಬಗ್ಗೆ ಗೊತ್ತಿದ್ದರೂ ಆಶ್ರಯ, ಆಹಾರ ನೀಡಿದ್ದರು ಎಂದು ಎನ್ಐಎ ಹೇಳಿದೆ.
ಅಧಿಕಾರಿಗಳ ಪ್ರಕಾರ, ಪ್ರವಾಸಿಗರನ್ನು ಹತ್ಯೆ ಮಾಡುವ ಮೊದಲು ಭಯೋತ್ಪಾದಕರು ಹಿಲ್ ಪಾರ್ಕ್ನಲ್ಲಿರುವ ಋತುಮಾನದ ಧೋಕ್ (ಗುಡಿಸಲು) ದಲ್ಲಿ ತಂಗಿದ್ದರು.
ವಿಚಾರಣೆಯ ಸಮಯದಲ್ಲಿ, ಪರ್ವೈಜ್ ಮತ್ತು ಬಶೀರ್ ಮೂವರು ಸಶಸ್ತ್ರ ದಾಳಿಕೋರರ ಗುರುತನ್ನು ಬಹಿರಂಗಪಡಿಸಿದರು, ಈ ಮೂವರು ನಿಷೇಧಿತ ಎಲ್ಇಟಿ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಪಾಕಿಸ್ತಾನಿ ಪ್ರಜೆಗಳು ಎಂದು ದೃಢಪಡಿಸಿದರು.
ಏಪ್ರಿಲ್ 22, 2025 ರ ದಾಳಿಯ ನಂತರ ದಾಖಲಾಗಿರುವ RC-02/2025/NIA/JMU ಪ್ರಕರಣದ ತನಿಖೆಯ ಭಾಗವಾಗಿ, ಎನ್ಐಎ ಇವರಿಬ್ಬರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967 ರ ಸೆಕ್ಷನ್ 19 ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ತನಿಖೆ ಮುಂದುವರೆದಿದೆ.
ಏಪ್ರಿಲ್ 22, 2025 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯು 26 ಅಮಾಯಕ ಪ್ರವಾಸಿಗರನ್ನು ಕ್ರೂರವಾಗಿ ಕೊಂದು, ಇತರ 16 ಜನರನ್ನು ತೀವ್ರವಾಗಿ ಗಾಯಗೊಳಿಸಿತು. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕಾರ, ದಾಳಿಕೋರರು ಪ್ರವಾಸಿಗರನ್ನು ಅವರ ಧರ್ಮದ ಆಧಾರದ ಮೇಲೆ ಕೊಂದಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಭಯಾನಕ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿದೆ.
ಈ ದಾಳಿಯು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು. ನಂತರ ಭಾರತವು ಗಡಿಯಾಚೆಯಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು “ಆಪರೇಷನ್ ಸಿಂಧೂರ” ಅಡಿ ಕಾರ್ಯಾಚರಣೆ ನಡೆಸಿತು.


ನಿಮ್ಮ ಕಾಮೆಂಟ್ ಬರೆಯಿರಿ