ಉಡುಪಿ : ಮಗನೊಬ್ಬ ಹಣಕ್ಕಾಗಿ ಹೆತ್ತ ತಾಯಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಪದ್ಮಾಬಾಯಿ(45) ಎಂದು ಗುರುತಿಸಲಾದ ಮಹಿಳೆ ಕೊಲೆಯಾಗಿದ್ದು, ಮಗ ಈಶ ನಾಯಕ್ (26) ಕೊಲೆ ಆರೋಪಿಯಾಗಿದ್ದಾನೆ. ಜೂ.18ರಂದು ರಾತ್ರಿ ಪದ್ಮಾಬಾಯಿ ಸೊಂಟ ನೋವಿನಿಂದ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು.
ಅಂದು ರಾತ್ರಿ ಪದ್ಮಾಬಾಯಿ ಅವರ ತಂಗಿ ಶಿಲ್ಪಾ ಎಂಬವರಿಗೆ ಕರೆ ಮಾಡಿದ್ದ ಈಶ ನಾಯಕ್, ತಾಯಿಗೆ ಸೌಖ್ಯವಿಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಣ ಕಳುಹಿಸುವಂತೆ ತಿಳಿಸಿದ್ದ. ಅದರಂತೆ ಶಿಲ್ಪಾ ಆನ್ಲೈನ್ ಮೂಲಕ ಹಣ ಕಳುಹಿಸಿದ್ದರು. ಜೂ.19ರಂದು ಬೆಳಗ್ಗೆ ಶಿಲ್ಪಾರಿಗೆ ಕರೆ ಮಾಡಿದ ಈಶಾ ನಾಯಕ್, ತಾಯಿ ಬೆಳಿಗ್ಗೆ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದ್ದ.
ನಂತರ ಶಿಲ್ಪಾ ಆಸ್ಪತ್ರೆಗೆ ಬಂದಿದ್ದಾರೆ. ಪದ್ಮಬಾಯಿ ಅವರ ಶವ ನೋಡಿದಾಗ ಅವರಿಗೆ ಕುತ್ತಿಗೆ ಬಳಿ ಕೆಂಪಾಗಿದ್ದುದು ಕಂಡುಬಂದಿತ್ತು. ಇದು ಅವರಿಗೆ ಅನುಮಾನಕ್ಕೆ ಕಾರಣವಾಯಿತು. ಪದ್ಮಾಬಾಯಿ ಸಾವಿನ ಬಗ್ಗೆ ಸಂಶಯ ಇರುವುದಾಗಿ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜೂನ್ 21ರಂದು ಮಣಿಪಾಲ ಆಸ್ಪತ್ರೆಯ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರು ನೀಡಿದ ವರದಿಯಲ್ಲಿ ಪದ್ಮಾಬಾಯಿ ಅವರನ್ನು ಯಾರೋ ಜೂ.18ರಂದು ರಾತ್ರಿಯಿಂದ ಜೂ.19ರ ಬೆಳಗಿನ ನಡುವೆ ಕೊಲೆ ಮಾಡಿದ್ದರ ಬಗ್ಗೆ ಬೊಟ್ಟು ಮಾಡಲಾಗಿತ್ತು. ಅದರಂತೆ ಮಣಿಪಾಲ ಪೊಲೀಸರು ಪ್ರಕರಣವನ್ನು ಕೊಲೆ ಪ್ರಕರಣವೆಂದು ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು.
ತನಿಖೆ ವೇಳೆ ಪದ್ಮಾಬಾಯಿಯವರನ್ನು ಅವರ ಮಗ ಈಶ ನಾಯ್ಕ್ ಹಣಕ್ಕಾಗಿ ಕೊಲೆ ಮಾಡಿರುವುದು ತಿಳಿದುಬಂದಿದೆ ಎಂದು ಹೇಳಲಾಗಿದೆ. ಪೊಲೀಸರು ಆರೋಪಿ ಈಶ ನಾಯಕ್ನನ್ನು ಬಂಧಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ