ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಉಭಯ ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಜುಲೈ 10ರಿಂದ ಸೆಪ್ಟೆಂಬರ್ 7ರ ತನಕ ನಡೆಯಲಿದೆ ಎಂದು ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ತಿಳಿಸಿದ್ದಾರೆ.
ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹಾಗೂ ಮಠದ ಕಿರಿಯ ಶ್ರೀಗಳಾದ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿ ವ್ಯಾಸ ಪೂಜೆ ನಡೆಸಿ ವ್ರತ ಸಂಕಲ್ಪಿಸಲಿದ್ದಾರೆ. ಸಂಕಲ್ಪಿಸಲಿರುವ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಶ್ರೀ ಮಠದಲ್ಲಿ ಋಗ್ವೇದ, ಕೃಷ್ಣಯಜುರ್ವೇದ, 18 ಪುರಾಣಗಳ ಪಾರಾಯಣ ನಡೆಯಲಿದ್ದು, ಸಂಜೆ 4:30ಕ್ಕೆ ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. ಅತಿಥಿಗಳಾಗಿ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಂಗನಾಥ ಎಸ್., ವಿಶ್ವ ರಾಮಕ್ಷತ್ರಿಯ ಮಹಾಸಭಾದ ಅಧ್ಯಕ್ಷ ಶಶಿಧರ ನಾಯ್ಕ ಭಾಗವಹಿಸಲಿದ್ದಾರೆ.
ನಿವೃತ್ತ ಪ್ರಾಚಾರ್ಯ ಕೆ.ಎನ್.ಹೊಸ್ಮನಿ, ಸಿಬಿಐ ನಿವೃತ್ತ ಅಧಿಕಾರಿ ಶಿವಾನಂದ ದೀಕ್ಷಿತ ಅವರನ್ನು ಶ್ರೀಗಳು ಗೌರವಿಸಲಿದ್ದಾರೆ. ಇದೇ ವೇಳೆ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಅಂದು ಬರೆದಿದ್ದ ಬೃಹತ್ ವೇದಾಂತಸಿದ್ಧಾಂತಸೂಕ್ತಿಮರಿ ಗ್ರಂಥದ ಕನ್ನಡ ಅನುವಾದದ ಕೃತಿ ಬಿಡುಗಡೆ ಆಗಲಿದೆ. ಶಿಷ್ಯ ಭಕ್ತರು ಚಾತುರ್ಮಾಸ್ಯದಲ್ಲಿ ಮಠಕ್ಕೆ ಆಗಮಿಸಬೇಕು ಎಂದು ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ಪ್ರಕಟನೆಯಲ್ಲಿ ಕೋರಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ