ಕೊಪ್ಪಳ: ”ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಿಸಬೇಕೆಂದರೆ ಅನ್ನಭಾಗ್ಯ ಯೋಜನೆಯ ಅಕ್ಕಿ ಸೇರಿ ಎಲ್ಲ ಬಂದ್ ಆಗುತ್ತವೆ,” ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿಕೆ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜಿಲ್ಲೆಯ ಕುಕನೂರು ತಾಲೂಕಿನ ಗ್ರಾಮವೊಂದರಲ್ಲಿ ಶನಿವಾರ ನಡೆದ ಸರಕಾರಿ ಪ್ರೌಢಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ರೈತರೊಬ್ಬರು, ” ಮಹಿಳೆಯರಿಗೆ ಹಣ ಕೊಡ್ತೀರಿ, ಸೌಲಭ್ಯ ಕೊಡ್ತೀರಿ. ನಮಗೆ ಹೊಲಕ್ಕೆ ಹೋಗಲಿಕ್ಕೆ ರಸ್ತೆ ಮಾಡಿ ಎಂದು ಕೋರಿಕೆ ಇಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ರಾಯರಡ್ಡಿ ಅವರು, ” ನಿಮಗೆ ಗ್ಯಾರಂಟಿ ಯೋಜನೆಯ ಅಕ್ಕಿ ಬ್ಯಾಡ ಅಂದರೆ ಆ ಹಣದಲ್ಲಿ ರಸ್ತೆ ಅಭಿವೃದ್ಧಿ ಮಾಡೋಣ. ನಿಂಗೆ ರಸ್ತೆ ಬೇಕಾದರೆ ಅಕ್ಕಿ ಎಲ್ಲವೂ ಬಂದ್ ಆಗುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳುತ್ತೇನೆ. ಜನ ಗ್ಯಾರಂಟಿ ಬೇಡ ಎಂದು ಹೇಳುತ್ತಿದ್ದಾರೆ. ಆ ಹಣದಲ್ಲಿ ಜನ ಗ್ರಾಮೀಣ ರಸ್ತೆ ಬೇಕು ಎಂದು ಎನ್ನುತ್ತಿದ್ದಾರೆ ಎಂದು ಹೇಳುವೆ. ಇನ್ನೂ ಮೂರು ವರ್ಷ ಅವಧಿ ಇದೆ. ರಸ್ತೆಯನ್ನೂ ಅಭಿವೃದ್ಧಿ ಮಾಡೋಣ ಎಂದು ಹೇಳಿದ್ದಾರೆ.
ಆ ಮೂಲಕ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಬಳಿಕ ರಾಜ್ಯದಲ್ಲಿ ಅಭಿವೃದ್ಧಿಗೆ ಹಣದ ಕೊರತೆ ಇದೆ ಎಂದು ಮತ್ತೊಮ್ಮೆ ಪರೋಕ್ಷವಾಗಿ ಹೇಳಿದ್ದಾರೆ.
ಸದ್ಯ ಬಸವರಾಜ ರಾಯರೆಡ್ಡಿಯವರ ಈ ಹೇಳಿಕೆ ವಿಪಕ್ಷಗಳು ಸರ್ಕಾರದ ಮೇಲೆ ವಾಗ್ದಾಳಿ ನಡೆಸಲು ದಾರಿಮಾಡಿಕೊಟ್ಟಿವೆ. ಗ್ಯಾರಂಟಿ ಯೋಜನೆ ಕುರಿತು ರಾಯರೆಡ್ಡಿ ಹೇಳಿಕೆಗೆ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. ಬಸವರಾಜ ರಾಯರೆಡ್ಡಿ ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರರು. ರಾಜ್ಯ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎನ್ನುವುದಕ್ಕೆ ಅವರು ಹೀಗೆ ಹೇಳಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಅನುದಾನವಿಲ್ಲದೆ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಆಗದೆ, ಕೇತ್ರದ ಜನರ ಬೇಡಿಕೆಗಳಿಗೆ ಸ್ಪಂದಿಸಲಾಗದೆ ಶಾಸಕರು ನಲುಗಿ ಹೋಗಿದ್ದಾರೆ. ಆಡಳಿತ ಪಕ್ಷದ ಶಾಸಕರೊಬ್ಬರು ತಮ್ಮ ಸರ್ಕಾರದಲ್ಲಿ ಅನುದಾನಕ್ಕೂ ಕೊರತೆಯಾಗಿದೆ ಎಂದು ಬಹಿರಂಗವಾಗಿ ಅಂಗಲಾಚುವ ಪರಿಸ್ಥಿತಿ ಬಂದಿದೆ. ಅಕ್ಕಿ, ಇನ್ನೊಂದು ಬೇಡ ಎಂದರೆ ರಸ್ತೆ ಮಾಡ್ತೀವಿ, ರಸ್ತೆ ಬೇಕು ಎಂದರೆ ಗ್ಯಾರಂಟಿ ಸ್ಕೀಂ ನಿಲ್ಲಿಸಲು ಹೇಳ್ತಿನಿ ಎಂದು ಸ್ವತಃ ಮುಖ್ಯಮಂತ್ರಿಗಳ ಅರ್ಥಿಕ ಸಲಹೆಗಾರರೇ ಹೇಳಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಅನುದಾನದ ವಿಚಾರದಲ್ಲಿ ರಾಜು ಕಾಗೆ ಅಸಮಾಧಾನಗೊಂಡು ರಾಜೀನಾಮೆಗೆ ಮುಂದಾಗಿದ್ದರು, ಒಂದು ಚರಂಡಿ ನಿರ್ಮಿಸಲು ಅನುದಾನ ಸಿಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಎನ್. ವೈ. ಗೋಪಾಲಕೃಷ್ಣ ಹೇಳಿದ್ದರು. ಗೃಹ ಸಚಿವ ಪರಮೇಶ್ವರ ಸಹ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದ ಬಳಿ ಹಣ ಇಲ್ಲ ಎಂದು ಬಹಿರಂಗವಾಗಿ ಹೇಳಿದ್ದರು. ಈಗ ಮುಖ್ಯಮಂತ್ರಿಗಳ ಅರ್ಥಿಕ ಸಲಹೆಗಾರರೇ ರಸ್ತೆ ಬೇಕು ಎಂದರೆ ಗ್ಯಾರಂಟಿ ಸ್ಕೀಂ ನಿಲ್ಲಿಸಲು ಹೇಳ್ತಿನಿ ಎನ್ನುವ ಮೂಲಕ ಸರ್ಕಾರದ ಅರ್ಥಿಕ ಸ್ಥಿತಿಗತಿ ಹೇಗಿದೆ ಎಂದು ಬಹಿರಂಗಪಡಿಸಿದ್ದಾರೆ ಓಲೈಕೆ ರಾಜಕಾರಣಕ್ಕೆ ಅನುದಾನ ಬಿಡುಗಡೆ ಮಾಡುವ ಸರ್ಕಾರಕ್ಕೆ, ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡಲು ದುಡ್ಡಿಲ್ಲವೇ ಎಂದು ಪ್ರಶ್ನಿಸಿದೆ.
ಬಸವರಾಜ ರಾಯರೆಡ್ಡಿ ಹೇಳಿಕೆಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ರಾಯರೆಡ್ಡಿ ಅನೇಕ ಬಾರಿ ಹೇಳಿಕೆ ಕೊಟ್ಟಿರುವುದನ್ನು ನೋಡಿದ್ದೇವೆ. ನಂತರ ಅದಕ್ಕೆ ಸ್ಪಷ್ಟೀಕರಣ ಕೊಡುತ್ತಾರೆ. ಓಪನ್ ಆಗಿ ರಸ್ತೆ ಬೇಕು ಅಂದ್ರೆ ಅಕ್ಕಿ ಕೊಡುವುದು ನಿಲ್ಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಸರ್ಕಾರದ ಪರಿಸ್ಥಿತಿ ಹೇಗಿದೆ ಎಂಬುದು ಅವರ ಹೇಳಿಕೆಯಲ್ಲಿ ತಿಳಿಯುತ್ತದೆ. ಈ ಸರ್ಕಾರದಿಂದ ಅಭಿವೃದ್ಧಿಯನ್ನು ನಿರೀಕ್ಷೆ ಮಾಡಲು ಆಗುವುದಿಲ್ಲ ಎಂದು ಟೀಕಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ