
ಚಂಡೀಗಢ: ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಭೀಕರ ಪ್ರವಾಹದಿಂದ ತತ್ತರಿಸಿರುವ ಪಂಜಾಬ್ಗೆ ಸೆಪ್ಟೆಂಬರ್ 9 ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಪ್ರವಾಹ ಪರಿಸ್ಥಿತಿ ಮತ್ತು ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳನ್ನು ಪರಿಶೀಲಿಸಲಿದ್ದಾರೆ. ಬಿಜೆಪಿಯ ಪಂಜಾಬ್ ಘಟಕವು X ನಲ್ಲಿ ಪೋಸ್ಟ್ನಲ್ಲಿ ಪ್ರಧಾನಿ ಗುರುದಾಸಪುರಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಅಲ್ಲಿ ರೈತರು ಸೇರಿದಂತೆ ಪ್ರವಾಹ ಪೀಡಿತ ಜನರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದೆ.
ಪಂಜಾಬ್ ಅತ್ಯಂತ ಹೆಚ್ಚು ಹಾನಿಗೊಳಗಾದ ರಾಜ್ಯಗಳಲ್ಲಿ ಒಂದಾಗಿದೆ, ಪಂಜಾಬ್ನಲ್ಲಿ 37 ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ, ಆದರೆ ಮೂವರು ಕಾಣೆಯಾಗಿದ್ದಾರೆ. ಸೇನೆ, ವಾಯುಪಡೆ, ಬಿಎಸ್ಎಫ್ ಮತ್ತು ಎನ್ಡಿಆರ್ಎಫ್ನ ರಕ್ಷಣಾ ಕಾರ್ಯಾಚರಣೆಗಳು ಯುದ್ಧೋಪಾದಿಯಲ್ಲಿ ಮುಂದುವರಿದಿರುವುದರಿಂದ ಸೆಪ್ಟೆಂಬರ್ 7 ರವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಆದೇಶಿಸಿದೆ.

ಈ ಮಧ್ಯೆ ಪಂಜಾಬ್ ಪ್ರವಾಹದ ಭೀಕರೆಯನ್ನು ತೋರಿಸುವ ಮನಕಲಕುವ ವೀಡಿಯೊವೊಂದು ವೈರಲ್ ಆಗಿದೆ. ಮಗುವೊಂದು ತನ್ನ ತಾಯಿಯ ದೇಹವನ್ನು ನೀರಿನಿಂದ ಎಳೆಯುತ್ತಿರುವ ಹೃದಯ ವಿದ್ರಾವಕ ವೀಡಿಯೊವೊಂದು ವೈರಲ್ ಆಗಿದೆ. ಇದು ಪಂಜಾಬಿನನಲ್ಲಿ ಸುರಿದ ಭಾರೀ ಮಳೆ ಹಾಗೂ ಅದರಿಂದ ಸಂಭವಿಸಿದ ಭಾರೀ ಪ್ರವಾಹದ ಭೀಕರತೆಯನ್ನು ತೋರಿಸುತ್ತದೆ. ಈ ಮುಗ್ಧ ಮಗುವಿಗೆ ತನ್ನ ತಾಯಿ ಇನ್ನೂ ಜೀವಂತವಾಗಿದ್ದಾರೋ ಅಥವಾ ಸತ್ತಿದ್ದಾರೋ ಗೊತ್ತಿಲ್ಲ. ತನ್ನ ಅಮ್ಮ ಬದುಕಿದ್ದಾಳೆಂಬ ಭರವಸೆಯಿಂದ ಬಾಲಕ ನೀರಿನಲ್ಲಿ ತೇಲುತ್ತಿರುವ ತಾಯಿಯ ದೇಹವನ್ನು ಎಳೆದು ತರುತ್ತಿರುವ ಪುಟ್ಟ ಬಾಲಕನ ವೀಡಿಯೊ ಎಂಥಾ ಕಲ್ಲು ಹೃದಯವನ್ನೂ ಕರಗಿಸುತ್ತದೆ. ಆಕೆ ಬದುಕಿದ್ದಾಳೆ, ಎದ್ದು ಬಂದು ತನ್ನ ಬಳಿ ಮಾತನಾಡುತ್ತಾಳೆ ಎನ್ನುವ ಭರವಸೆಯೊಂದಿಗೆ ಆತ ಆಕೆಯ ಮೃದೇಹವನ್ನು ನೀರಿನಿಂದ ಹೊರಕ್ಕೆ ಎಳೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
ಇತ್ತೀಚಿನ ವಾರಗಳಲ್ಲಿ ನಿರಂತರ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡದಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, ಜೂನ್ನಿಂದ 500 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಪಂಜಾಬಿನ ಎಲ್ಲಾ 23 ಜಿಲ್ಲೆಗಳಲ್ಲಿ ಸುಮಾರು 1,650 ಗ್ರಾಮಗಳು ಮುಳುಗಿವೆ, 1.75 ಲಕ್ಷ ಎಕರೆ ಕೃಷಿಭೂಮಿ ಮುಳುಗಿ ಬೆಳೆಗಳು ನಾಶವಾಗಿವೆ. ಬಿಯಾಸ್, ಸಟ್ಲುಜ್, ರಾವಿ ಮತ್ತು ಘಗ್ಗರ್ನಂತಹ ನದಿಗಳು ಅಪಾಯದ ಮಟ್ಟಕ್ಕಿಂತ ಮೀರಿ ಹರಿಯುತ್ತವೆ. ಭಖ್ರಾ, ಪಾಂಗ್ ಮತ್ತು ರಂಜಿತ್ ಸಾಗರ ಸೇರಿದಂತೆ ಪ್ರಮುಖ ಅಣೆಕಟ್ಟುಗಳಿಂದ ನೀರನ್ನು ಹೊರಬಿಡಲಾಗುತ್ತಿದೆ. ಗುರುದಾಸಪುರ, ಫಿರೋಜಪುರ ಮತ್ತು ಫಜಿಲ್ಕಾ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿದ್ದು, 1.45 ಲಕ್ಷ ನಿವಾಸಿಗಳ ಮೇಲೆ ಪರಿಣಾಮ ಬೀರಿದೆ.


ನಿಮ್ಮ ಕಾಮೆಂಟ್ ಬರೆಯಿರಿ