ಬೆಂಗಳೂರು : ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಸೂಪರ್ಫಾಸ್ಟ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವಾಲಯವು ಅನುಮೋದನೆ ನೀಡಿದೆ. ಇದರಿಂದ ಸುಮಾರು 30 ವರ್ಷಗಳಿಂದ ಬಾಕಿ ಉಳಿದಿದ್ದ ಬೇಡಿಕೆ ಬಹುತೇಕ ಈಡೇರುವ ಹಂತಕ್ಕೆ ಬಂದುನಿಂತಂತಾಗಿದೆ. ಬಿಜೆಪಿ ನಾಯಕ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಶನಿವಾರ ಈ ವಿಷಯ ಪ್ರಕಟಿಸಿದ್ದಾರೆ.
ಸಂಸತ್ತು, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಗಳು ಮತ್ತು ಕಳೆದ ನಾಲ್ಕು ವರ್ಷಗಳಿಂದ ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ಈ ವಿಷಯದ ಕುರಿತು ಸ್ಥಿರವಾದ ಅನುಸರಣೆಯ ನಂತರ ಈ ಘೋಷಣೆ ಮಾಡಲಾಗಿದೆ ಎಂದು ಸೂರ್ಯ ಹೇಳಿದರು.
“ಇದು 30 ವರ್ಷಗಳಿಂದ ಬಾಕಿ ಉಳಿದಿದ್ದ ಬೇಡಿಕೆಯಾಗಿತ್ತು. ಕಳೆದ ಮೂರು ದಶಕಗಳಲ್ಲಿ, ಎರಡೂ ನಗರಗಳ ಬೆಳವಣಿಗೆಯ ಹೊರತಾಗಿಯೂ, ಬೆಂಗಳೂರು ಮತ್ತು ಮುಂಬೈ ನಡುವೆ ಒಂದೇ ಒಂದು ಸೂಪರ್ ಫಾಸ್ಟ್ ರೈಲು ಉದ್ಯಾನ್ ಎಕ್ಸ್ಪ್ರೆಸ್ ಮಾತ್ರ ಇತ್ತು. ಕಳೆದ ವರ್ಷವಷ್ಟೇ, 26 ಲಕ್ಷಕ್ಕೂ ಹೆಚ್ಚು ಜನರು ಎರಡು ನಗರಗಳ ನಡುವೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಈ ಹೊಸ ಸೇವೆಯು ಲಕ್ಷಾಂತರ ನಾಗರಿಕರಿಗೆ ಪ್ರಯಾಣವನ್ನು ಹೆಚ್ಚು ಕೈಗೆಟುಕುವ ಮತ್ತು ಅನುಕೂಲಕರವಾಗಿಸುತ್ತದೆ” ಎಂದು ಸೂರ್ಯ ಹೇಳಿದರು.
ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲು ಲಕ್ಷಾಂತರ ಪ್ರಯಾಣಿಕರಿಗೆ ತ್ವರಿತ, ಹೆಚ್ಚು ಅನುಕೂಲಕರ ಮತ್ತು ಕೈಗೆಟುಕುವ ರೈಲು ಆಗಲಿದೆ ಎಂದು ನಿರೀಕ್ಷಿಸಲಾಗಿದೆ.
ಬೆಂಗಳೂರು- ಮುಂಬೈ ಸುಪರ್ ಫಾಸ್ಟ್ ರೈಲು ಏಕೆ ಮುಖ್ಯ…?
30 ವರ್ಷಗಳಿಂದ, ಬೆಂಗಳೂರು ಮತ್ತು ಮುಂಬೈ ನಡುವೆ ಕೇವಲ ಒಂದು ರೈಲು ಉದ್ಯಾನ್ ಎಕ್ಸ್ಪ್ರೆಸ್ ಮಾತ್ರ ಓಡಾಡುತ್ತಿದೆ. ಉದ್ಯಾನ್ ಎಕ್ಸ್ಪ್ರೆಸ್ ಪ್ರಯಾಣವು 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಇದರಿಂದಾಗಿ ಪ್ರಯಾಣಿಕರಿಗೆ ಸೀಮಿತ ಆಯ್ಕೆಗಳಿವೆ.
2024 ರಲ್ಲಿ ಬೆಂಗಳೂರು ಹಾಗೂ ಮುಂಬೈ ನಡುವೆ ಮಾತ್ರ 26 ಲಕ್ಷಕ್ಕೂ ಹೆಚ್ಚು ಜನರು ವಿಮಾನದ ಮೂಲಕ ಪ್ರಯಾಣಿಸಿದ್ದಾರೆ. ಈ ಹೊಸ ರೈಲಿನ ಮೂಲಕ ವಿಮಾನಗಳು ಮತ್ತು ಬಸ್ಗಳಿಗೆ ಹೋಲಿಸಿದರೆ ಅಗ್ಗದ ಮತ್ತು ಆರಾಮದಾಯಕ ಪರ್ಯಾಯ ಸೌಲಭ್ಯ ನೀಡುವ ಉದ್ದೇಶ ಹೊಂದಲಾಗಿದೆ.
ಇದು ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಪ್ರಯಾಣದ ಸಮಯವನ್ನು ಉಳಿಸುತ್ತದೆ ಮತ್ತು ಕುಟುಂಬಗಳು, ವ್ಯಾಪಾರಿಗಳು ಮತ್ತು ದೈನಂದಿನ ಪ್ರಯಾಣಿಕರಿಗೆ ಹೆಚ್ಚು ಅನುಕೂಲ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ರೈಲು ಸೇವೆಯು ಭಾರತದ ವೇಗವಾಗಿ ಬೆಳೆಯುತ್ತಿರುವ ಎರಡು ಮಹಾನಗರ ಪ್ರದೇಶಗಳ ನಡುವಿನ ಸಾಮಾಜಿಕ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸುತ್ತದೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ತೇಜಸ್ವಿ ಸೂರ್ಯ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಹಾಗೂ ರಾಜ್ಯದವರೇ ಆದ ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಅವರ ಬೆಂಬಲಕ್ಕೆ ಶ್ಲಾಘಿಸಿದ್ದಾರೆ.
ಹೊಸ ರೈಲು ಒಮ್ಮೆ ಕಾರ್ಯರೂಪಕ್ಕೆ ಬಂದರೆ, ಎರಡು ಮಹಾನಗರಗಳ ನಡುವಿನ ಪ್ರಯಾಣವನ್ನು ಗಮನಾರ್ಹವಾಗಿ ಸುಗಮಗೊಳಿಸುವ ನಿರೀಕ್ಷೆಯಿದೆ.


ನಿಮ್ಮ ಕಾಮೆಂಟ್ ಬರೆಯಿರಿ