ಬೆಂಗಳೂರು: ಕಿರುತೆರೆ ನಟಿ, ಬಿಗ್ ಬಾಸ್ (Bigg boss) ಮಾಜಿ ಸ್ಪರ್ಧಿ ದಿವ್ಯಾ ಸುರೇಶ ಅವರ ವಿರುದ್ಧ ಹಿಟ್ ಆ್ಯಂಡ್ ರನ್ ಆರೋಪ ಕೇಳಿಬಂದಿದೆ. ಅತಿ ವೇಗ ಮತ್ತು ನಿರ್ಲಕ್ಷದಿಂದ ಕಾರು ಚಾಲನೆ ಮಾಡಿದ ಆರೋಪ ಕೇಳಿ ಬಂದಿದ್ದು, ಅಪಘಾತದಲ್ಲಿ ಮಹಿಳೆಯೊಬ್ಬರ ಕಾಲು ಮುರಿದಿದೆ ಎನ್ನಲಾಗಿದೆ. ಅಕ್ಟೋಬರ್ 4ರಂದು ರಾತ್ರಿ 1:30ರ ವೇಳೆಗೆ ಬೆಂಗಳೂರಿನ ಬ್ಯಾಟರಾಯನಪುರ ಎಂಎಂ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ಕಿರಣ್, ಅನುಷಾ, ಅನಿತಾ ಎಂಬವರು ಬೈಕ್ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಬ್ಯಾಟರಾನಪುರದ ಎಂ.ಎಂ ರಸ್ತೆ ಬಳಿ ನಾಯಿಗಳಿದ್ದು, ಭಯದಿಂದ ಕಿರಣ್ ಬೈಕ್ ಅನ್ನು ಸ್ವಲ್ಪ ಬಲಕ್ಕೆ ತಂದಿದ್ದಾರೆ. ಈ ವೇಳೆ ವೇಗವಾಗಿ ಬಂದ ದಿವ್ಯಾ ಸುರೇಶ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಮೂವರೂ ಬೈಕ್ನಿಂದ ಬಿದ್ದಿದ್ದು, ಒಬ್ಬರು ಗಾಯಗೊಂಡಿದ್ದಾರೆ. ಅನಿತಾ ಎಂಬವರ ಕಾಲಿಗೆ ಗಾಯವಾಗಿದೆ ಎಂದು ಹೇಳಲಾಗಿದೆ.
ದಿವ್ಯಾ ಸುರೇಶ ಕಾರು ನಿಲ್ಲಿಸದೇ, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲೂ ಯತ್ನಿಸದೆ ಸ್ಥಳದಿಂದ ತೆರಳಿದ್ದಾರೆ. ಬಳಿಕ ಈ ಬ್ಯಾಟರಾಯನಪುರ ಸಂಚಾರಿ ಠಾಣೆಗೆ ದೂರು ನೀಡಲಾಗಿತ್ತು. ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಘಟನೆಯ ಸ್ಥಳದ ಸಿಟಿಟಿವಿ ಫೂಟೇಜ್ಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ನಟಿ ದಿವ್ಯಾ ಸುರೇಶ ಕಾರ್ ಡಿಕ್ಕಿ ಹೊಡೆದು ಹೋಗಿರುವುದು ಗೊತ್ತಾಗಿದೆ. ಅವರನ್ನು ಪೊಲೀಸರು ಕರೆಸಿ ವಿಚಾರಿಸಿದ್ದು, ತನಿಖೆ ಮುಂದುವರೆಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ