ಇರಾನ್‌ನಲ್ಲಿರುವ ಭಾರತೀಯರಿಗೆ ತಕ್ಷಣ ದೇಶ ತೊರೆಯಲು ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ಇರಾನ್‌ನಲ್ಲಿ ದಿನೇ ದಿನೇ ಉಲ್ಬಣಿಸುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಪ್ರಾದೇಶಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಅಲ್ಲಿ ನೆಲೆಸಿರುವ ಭಾರತೀಯ ನಾಗರಿಕರು ಆದಷ್ಟು ಬೇಗ ದೇಶವನ್ನು ತೊರೆಯುವಂತೆ ಭಾರತ ಸರ್ಕಾರ ಬುಧವಾರ (ಜನವರಿ 14, 2026) ತುರ್ತು ಸಲಹೆ (Advisory) ನೀಡಿದೆ.
ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಲಭ್ಯವಿರುವ ವಿಮಾನಗಳು ಅಥವಾ ಇತರೆ ಸಾರಿಗೆ ವ್ಯವಸ್ಥೆಗಳನ್ನು ಬಳಸಿಕೊಂಡು ತಕ್ಷಣವೇ ಇರಾನ್‌ನಿಂದ ಹೊರಬರುವಂತೆ ಪ್ರವಾಸಿಗರಿಗೆ ಮತ್ತು ನಾಗರಿಕರಿಗೆ ಸೂಚಿಸಿದೆ.
ಯುದ್ಧದ ಕಾರ್ಮೋಡ?
ಇದೇ ವೇಳೆ, ಕತಾರ್‌ನಲ್ಲಿರುವ ಅಮೆರಿಕದ ಬೃಹತ್ ವಾಯುನೆಲೆ ‘ಅಲ್ ಉದೈದ್’ (Al Udeid) ನಲ್ಲಿ ಯುದ್ಧ ವಿಮಾನಗಳ ಸಂಚಾರ ಮತ್ತು ಚಟುವಟಿಕೆಗಳು ಗಣನೀಯವಾಗಿ ಏರಿಕೆಯಾಗಿವೆ ಎಂದು ವರದಿಗಳು ತಿಳಿಸಿವೆ. ಇದು ಈ ಭಾಗದಲ್ಲಿ ಮಿಲಿಟರಿ ಕಾರ್ಯಾಚರಣೆಯ ಮುನ್ಸೂಚನೆಯಾಗಿರಬಹುದು ಎಂಬ ಆತಂಕ ಸೃಷ್ಟಿಸಿದೆ.

ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಇದುವರೆಗೆ ಸುಮಾರು 2,000ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಇದರೊಂದಿಗೆ ಇರಾನ್ ಮೇಲೆ ಅಮೆರಿಕದ ಸಂಭಾವ್ಯ ಮಿಲಿಟರಿ ದಾಳಿಯ ಭೀತಿಯೂ ಹೆಚ್ಚಾಗಿದೆ.
ಪ್ರತಿಭಟನಾ ಸ್ಥಳಗಳಿಂದ ದೂರವಿರಲು ಮತ್ತು ಸ್ಥಳೀಯ ಮಾಧ್ಯಮಗಳ ಅಪ್‌ಡೇಟ್ ಗಮನಿಸುತ್ತಿರಲು ಭಾರತೀಯರಿಗೆ ಸೂಚಿಸಲಾಗಿದೆ. ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ಮತ್ತು ಪಾಸ್‌ಪೋರ್ಟ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಲು ತಿಳಿಸಲಾಗಿದೆ.
ತುರ್ತು ಸಂದರ್ಭಗಳಿಗಾಗಿ ರಾಯಭಾರ ಕಚೇರಿಯು ಸಹಾಯವಾಣಿ ಸಂಖ್ಯೆಗಳನ್ನು ಮತ್ತು ಇಮೇಲ್ ಐಡಿಯನ್ನು ಬಿಡುಗಡೆ ಮಾಡಿದೆ. ಇದುವರೆಗೆ ನೋಂದಣಿ ಮಾಡಿಕೊಳ್ಳದ ಭಾರತೀಯರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪೋರ್ಟಲ್‌ನಲ್ಲಿ ತಕ್ಷಣ ನೋಂದಾಯಿಸಿಕೊಳ್ಳಲು ಕೋರಲಾಗಿದೆ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement