ರೈಲು ಹತ್ತುವಾಗ ಸಣ್ಣ ಜಗಳಕ್ಕೆ ಕಾಲೇಜು ಪ್ರೊಫೆಸರ್‌ ಗೆ ಚಾಕುವಿನಿಂದ ಇರಿದು ಹತ್ಯೆ

  ಮುಂಬೈ: ಮುಂಬೈನ ರೈಲಿನಲ್ಲಿ  ಸಣ್ಣ ವಿಷಯಕ್ಕೆ ನಡೆದ ಜಗಳ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಮಾಲಾಡ್ ರೈಲ್ವೆ ನಿಲ್ದಾಣದಲ್ಲಿ ಕಾಲೇಜು ಪ್ರೊಫೆಸರ್ ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪದ ಮೇಲೆ ಸರ್ಕಾರಿ ರೈಲ್ವೆ ಪೊಲೀಸರು (GRP) 27 ವರ್ಷದ ಓಂಕಾರ ಶಿಂಧೆ ಎಂಬಾತನನ್ನು ಬಂಧಿಸಿದ್ದಾರೆ.
ಹತ್ಯೆಗೀಡಾದವರನ್ನು ವಿಲೆ ಪಾರ್ಲೆಯ ಪ್ರಮುಖ ಕಾಲೇಜೊಂದರ ಪ್ರೊಫೆಸರ್ ಅವರನ್ನು ಅಲೋಕ ಸಿಂಗ್ ಎಂದು ಗುರುತಿಸಲಾಗಿದೆ. ಮಾಲಾಡ್ ನಿಲ್ದಾಣದ ಪ್ಲಾಟ್‌ಫಾರ್ಮ್ 1 ಮತ್ತು 2 ರಲ್ಲಿ ನಡೆದ ಈ ಘಟನೆ ಮುಂಬೈನ ಲಕ್ಷಾಂತರ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಶನಿವಾರ ನಡೆದ ಈ ಘಟನೆಗೆ ಅತ್ಯಂತ “ಸಣ್ಣ” ಕಾರಣವಿದೆ. ಪ್ರೊಫೆಸರ್ ಅಲೋಕ ಸಿಂಗ್ ಮತ್ತು ಆರೋಪಿ ಓಂಕಾರ ಶಿಂಧೆ ಒಂದೇ ಲೋಕಲ್ ಟ್ರೈನ್‌ನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಮಾಲಾಡ್ ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ, ಜನದಟ್ಟಣೆಯ ಬಾಗಿಲಲ್ಲಿ ರೈಲು ಹತ್ತುವ ಅಥವಾ ಇಳಿಯುವ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಬಾಯಿಮಾತಿನ ಜಗಳ ನಿಲ್ದಾಣದ ಪ್ಲಾಟ್‌ಫಾರ್ಮ್ ಮೇಲೆ ಬಂದಾಗ ವಿಕೋಪಕ್ಕೆ ತಿರುಗಿದೆ. ಈ ವೇಳೆ ಸಿಟ್ಟಿಗೆದ್ದ ಶಿಂಧೆ, ತನ್ನ ಬಳಿಯಿದ್ದ ಚೂಪಾದ ಚಾಕುವಿನಿಂದ ಅಲೋಕ ಸಿಂಗ್ ಅವರ ಹೊಟ್ಟೆಗೆ ಹಲವು ಬಾರಿ ಇರಿದಿದ್ದಾನೆ. ಸಿಂಗ್ ರಕ್ತದ ಮಡುವಿನಲ್ಲಿ ಕುಸಿದು ಬೀಳುತ್ತಿದ್ದಂತೆ, ಹಂತಕ ಜನಸಂದಣಿಯ ನಡುವೆ ಪರಾರಿಯಾಗಿದ್ದ.
ಸಿಸಿಟಿವಿ ಮೂಲಕ ಆರೋಪಿಯ ಸೆರೆ
ಘಟನೆ ನಡೆದ ಬೆನ್ನಲ್ಲೇ ಬೊರಿವಲಿ ರೈಲ್ವೆ ಪೊಲೀಸರು ತನಿಖೆ ಚುರುಕುಗೊಳಿಸಿದರು. ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದ ವ್ಯಕ್ತಿಯೊಬ್ಬ ಪಾದಚಾರಿ ಮೇಲ್ಸೇತುವೆಯ (FOB) ಮೂಲಕ ಓಡಿ ಹೋಗುವುದು ಪತ್ತೆಯಾಗಿತ್ತು. ಈ ದೃಶ್ಯಾವಳಿ ಮತ್ತು ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ವಸಾಯಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರವಿಲ್ಲದ ಪ್ರಶ್ನೆಗಳು
ಕೇವಲ ರೈಲು ಇಳಿಯುವ ವಿಚಾರಕ್ಕೆ ಅಪರಿಚಿತ ವ್ಯಕ್ತಿಯನ್ನು ಇಷ್ಟು ಕ್ರೂರವಾಗಿ ಹತ್ಯೆ ಮಾಡಿರುವುದು ಪೊಲೀಸರಿಗೂ ಅಚ್ಚರಿ ಮೂಡಿಸಿದೆ. “ರೈಲು ಇಳಿಯುವ ವಿಚಾರದ ಜಗಳವೇ ಮೇಲ್ನೋಟಕ್ಕೆ ಕಾರಣವೆಂದು ಕಂಡುಬಂದರೂ, ಇಷ್ಟು ದೊಡ್ಡ ಮಟ್ಟದ ಹಿಂಸಾಚಾರಕ್ಕೆ ಬೇರೇನಾದರೂ ಕಾರಣವಿದೆಯೇ ಅಥವಾ ಹಳೆಯ ದ್ವೇಷವೇನಾದರೂ ಇತ್ತೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ,” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತ ಅಲೋಕ್ ಸಿಂಗ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement