ಕೇಂದ್ರ ಬಜೆಟ್ 2026 : ಕೃಷಿಕರಿಗೆ ಕೊಟ್ಟಿದ್ದೇನು…? ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆಗೆ ಏನು ನೀಡಲಾಗಿದೆ ?

 ನವದೆಹಲಿ:  2026-27ರ ಕೇಂದ್ರ ಬಜೆಟ್ ಕೃಷಿ, ಸಂಬಂಧಿತ ವಲಯಗಳು ಮತ್ತು ತಂತ್ರಜ್ಞಾನ ಆಧಾರಿತ ಕೃಷಿಗೆ ಬಲವಾದ ಒತ್ತು ನೀಡಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೈತರ ಆದಾಯವನ್ನು ಹೆಚ್ಚಿಸಲು, ಗ್ರಾಮೀಣ ಉದ್ಯೋಗ ಸೃಷ್ಟಿಸಲು ಮತ್ತು ಕೃಷಿ ಪದ್ಧತಿಗಳನ್ನು ಆಧುನೀಕರಿಸಲು ಕೆಲವು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಈ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ₹1,62,671 ಕೋಟಿ ಹಂಚಿಕೆ ಮಾಡುವುದಾಗಿ ಅವರು ಘೋಷಿಸಿದ್ದಾರೆ. ಇದು ರೈತರ ಕಲ್ಯಾಣ, ಆಹಾರ ಭದ್ರತೆ ಮತ್ತು ಗ್ರಾಮೀಣ ಜೀವನೋಪಾಯದ ಮೇಲೆ ನಿರಂತರ ಗಮನವನ್ನು ವಿವರಿಸುವ 2025-26 ರ ಪರಿಷ್ಕೃತ ಅಂದಾಜು ₹1,51,853 ಕ್ಕಿಂತ 7% ಹೆಚ್ಚಾಗಿದೆ. ಆದರೆ, 2025-26ರ ಬಜೆಟ್ ಅಂದಾಜಿಗೆ ಹೋಲಿಸಿದರೆ ಈ ಬಾರಿ ಕೃಷಿ ವಲಯದ ಒಟ್ಟಾರೆ ವೆಚ್ಚದಲ್ಲಿ ಶೇಕಡಾ 4.4 ರಷ್ಟು ಇಳಿಕೆಯಾಗಿದೆ.
ವಿಶೇಷವಾಗಿ ತೆಂಗು, ಕೋಕೋ, ಗೋಡಂಬಿ ಮತ್ತು ಶ್ರೀಗಂಧದಂತಹ ಹೆಚ್ಚಿನ ಮೌಲ್ಯದ ತೋಟಗಾರಿಕಾ ಬೆಳೆಗಳು ಹಾಗೂ ಮೀನುಗಾರಿಕೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಈ ಘೋಷಣೆಗಳು ದಕ್ಷಿಣ ಭಾರತದ ರಾಜ್ಯಗಳ ಚುನಾವಣಾ ರಾಜಕೀಯದ ದೃಷ್ಟಿಯಿಂದಲೂ ಮಹತ್ವ ಪಡೆದುಕೊಂಡಿವೆ. ಅಲ್ಲದೆ, ರೈತರು ಮತ್ತು ಕೃಷಿಕರ ಉಪಯುಕ್ತ ಸಲಹೆ ಮತ್ತು ಸಹಕಾರ ನೀಡುವ ಸಲುವಾಗಿ ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ಕೃತಕ ಬುದ್ಧಿಮತ್ತೆ(AI) ಪರಿಕರಗಳನ್ನು ಒದಗಿಸುವುದಾಗಿ ಘೋಷಿಸಿದೆ.
ಕಳೆದ ವರ್ಷದ ಬಜೆಟ್‌ನಲ್ಲಿ ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸಲು ಘೋಷಿಸಲಾಗಿದ್ದ ದೊಡ್ಡ ಯೋಜನೆಗಳ ಬಗ್ಗೆ ಈ ಬಾರಿ ಅಷ್ಟಾಗಿ ಪ್ರಸ್ತಾಪವಿಲ್ಲ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಹಂಚಿಕೆಯಲ್ಲಿ ಕೇವಲ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆಯೇ ಹೊರತು, ವಲಯಕ್ಕೆ ಯಾವುದೇ ಪ್ರಮುಖ ಅಥವಾ ಕ್ರಾಂತಿಕಾರಿ ಘೋಷಣೆಗಳಾಗಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ.
ಭಾರತೀಯ ಕಿಸಾನ್ ಯೂನಿಯನ್ (ಅರಾಜಕೀಯ) ರಾಷ್ಟ್ರೀಯ ವಕ್ತಾರ ಧರ್ಮೇಂದ್ರ ಮಲಿಕ್ ಅವರು ಪ್ರತಿಕ್ರಿಯಿಸಿ, “ಕೃಷಿಯನ್ನು ಕೇವಲ ಉತ್ಪಾದಕತೆಯನ್ನು ಹೆಚ್ಚಿಸುವ ಆಧಾರದ ಮೇಲೆ ನೋಡಲಾಗಿದೆ. ಆದರೆ, ರೈತರ ಆದಾಯವು ಕೇವಲ ಉತ್ಪಾದನೆ ಹೆಚ್ಚಳದಿಂದ ಮಾತ್ರವಲ್ಲ, ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಕ್ಕಾಗ ಮಾತ್ರ ಹೆಚ್ಚಾಗುತ್ತದೆ. ಬಜೆಟ್ ಈ ಪ್ರಮುಖ ಅಂಶವನ್ನು ಪರಿಹರಿಸುವಲ್ಲಿ ವಿಫಲವಾಗಿದೆ” ಎಂದು ಹೇಳಿದ್ದಾರೆ.
ಪ್ರಮುಖ ಯೋಜನೆಗಳು ಮತ್ತು ಘೋಷಣೆಗಳು
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ರೈತರು, ಪಶುಸಂಗೋಪನೆ, ಪಶುವೈದ್ಯಕೀಯ ವೃತ್ತಿಪರರು ಮತ್ತು ವಿಶೇಷವಾಗಿ ಮಹಿಳಾ ನೇತೃತ್ವದ ಗ್ರಾಮೀಣ ಉದ್ಯಮಗಳಿಗೆ ಪ್ರಯೋಜನವಾಗುವಂತೆ ಹಲವಾರು ಉಪಕ್ರಮಗಳನ್ನು ಪ್ರಸ್ತಾಪಿಸಿದ್ದಾರೆ.
ಭಾರತ-ವಿಸ್ತಾರ (Bharat-VISTAAR): ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ ನೀಡಲು 150 ಕೋಟಿ ರೂ. ವೆಚ್ಚದಲ್ಲಿ ಬಹುಭಾಷಾ
ಬಹುಭಾಷಾ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸಾಧನವಾದ ಭಾರತ ವಿಸ್ತಾರ್ ಅನ್ನು ಪ್ರಾರಂಭಿಸುವ ಬಗ್ಗೆ ಅವರು ಪ್ರಸ್ತಾಪಿಸಿದರು. ರೈತರಿಗೆ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡಲು ಮತ್ತು ಸಲಹೆ ನೀಡುವ ನಿಟ್ಟಿನಲ್ಲಿ ಈ AI ಪರಿಕರಗಳು ಕಾರ್ಯ ನಿರ್ವಹಿಸಲಿವೆ. ಇದು ‘ಅಗ್ರಿ-ಸ್ಟಾಕ್’ (AgriStack) ಪೋರ್ಟಲ್‌ಗಳನ್ನು ಐಸಿಎಆರ್ (ICAR) ನೊಂದಿಗೆ ಸಂಯೋಜಿಸುತ್ತದೆ.
ಹೆಚ್ಚಿನ ಮೌಲ್ಯದ ಕೃಷಿ ವಯಲಕ್ಕೆ 350 ಕೋಟಿ ರೂ. ಮೀಸಲಿಡಲಾಗಿದೆ.
ಮೀನುಗಾರಿಕೆ: ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆ ಮೌಲ್ಯವರ್ಧನೆಗಾಗಿ 500 ಜಲಾಶಯಗಳು ಮತ್ತು ‘ಅಮೃತ್ ಸರೋವರ’ಗಳ ಸಂಯೋಜಿತ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.
ಪಶುಸಂಗೋಪನೆ: ಈ ವಲಯದಲ್ಲಿ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಉದ್ಯಮಶೀಲತೆ ಅಭಿವೃದ್ಧಿ ಯೋಜನೆಯನ್ನು ಘೋಷಿಸಲಾಗಿದೆ.
ಪಶುವೈದ್ಯಕೀಯ ಮತ್ತು ಜಾನುವಾರು ವಲಯಕ್ಕೆ ಉತ್ತೇಜನ
ಜಾನುವಾರು ವಲಯವು ಕೃಷಿ ಆದಾಯಕ್ಕೆ ಸುಮಾರು ಶೇಕಡಾ 16 ರಷ್ಟು ಕೊಡುಗೆ ನೀಡುತ್ತದೆ. ಈ ಕುರಿತು ಮಾತನಾಡಿದ ಸಚಿವರು, “ಪಶುವೈದ್ಯಕೀಯ ವೃತ್ತಿಪರರ ಲಭ್ಯತೆಯನ್ನು 20,000 ಕ್ಕಿಂತ ಹೆಚ್ಚು ಮಾಡಲು, ಖಾಸಗಿ ವಲಯದಲ್ಲಿ ಪಶುವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು, ರೋಗನಿರ್ಣಯ ಕೇಂದ್ರಗಳು ಮತ್ತು ತಳಿ ಸೌಲಭ್ಯಗಳ ಸ್ಥಾಪನೆಗೆ ಸಾಲ-ಸಂಯೋಜಿತ ಬಂಡವಾಳ ಸಬ್ಸಿಡಿ ಯೋಜನೆಯನ್ನು ಜಾರಿಗೆ ತರಲು ನಾನು ಪ್ರಸ್ತಾಪಿಸಿದ್ದಾರೆ.  ಭಾರತೀಯ ಮತ್ತು ವಿದೇಶಿ ಸಂಸ್ಥೆಗಳ ನಡುವಿನ ಸಹಯೋಗಕ್ಕೂ ಅವಕಾಶ ನೀಡಲಾಗುವುದು” ಎಂದು ಹೇಳಿದ್ದಾರೆ.
ಬೆಳೆ ವೈವಿಧ್ಯೀಕರಣ ಮತ್ತು ಪ್ರಾದೇಶಿಕ ಆದ್ಯತೆ
ಕೃಷಿ ಉತ್ಪಾದನೆಯನ್ನು ವೈವಿಧ್ಯಗೊಳಿಸಲು ಮತ್ತು ರೈತರ ಆದಾಯ ಹೆಚ್ಚಿಸಲು ಸರ್ಕಾರ ಈ ಕೆಳಗಿನ ಕ್ರಮಗಳನ್ನು ಕೈಗೊಂಡಿದೆ.
ಕರಾವಳಿ ಪ್ರದೇಶ: ತೆಂಗು, ಶ್ರೀಗಂಧ, ಕೋಕೋ ಮತ್ತು ಗೋಡಂಬಿ ಬೆಳೆಗಳಿಗೆ ಬೆಂಬಲ.
ಈಶಾನ್ಯ ರಾಜ್ಯಗಳು: ಅಗರ್ (Agar) ಮರಗಳ ಬೆಳೆವಣಿಗೆಗೆ ಪ್ರೋತ್ಸಾಹ.
ಪರ್ವತ ಪ್ರದೇಶಗಳು: ಬಾದಾಮಿ, ಆಕ್ರೋಟ್ (Walnut) ಮತ್ತು ಪೈನ್ ನಟ್ಸ್ ಬೆಳೆಗಳಿಗೆ ಉತ್ತೇಜನ.
 ಪ್ರಮುಖ ವಲಯವಾರು ಯೋಜನೆಗಳು:
ತೆಂಗು ಉತ್ತೇಜನಾ ಯೋಜನೆ: ದಕ್ಷಿಣದ ರಾಜ್ಯಗಳಿಗಾಗಿ ವಿಶೇಷ ಯೋಜನೆಯನ್ನು ಘೋಷಿಸಲಾಗಿದೆ. ಇದು ಸುಮಾರು 3 ಕೋಟಿ ಜನರ (1 ಕೋಟಿ ಬೆಳೆಗಾರರು ಸೇರಿ) ಜೀವನೋಪಾಯಕ್ಕೆ ನೆರವಾಗಲಿದೆ.
ಜಾಗತಿಕ ಬ್ರ್ಯಾಂಡಿಂಗ್: ಭಾರತೀಯ ಗೋಡಂಬಿ ಮತ್ತು ಕೋಕೋವನ್ನು 2030 ರ ವೇಳೆಗೆ ಪ್ರೀಮಿಯಂ ಜಾಗತಿಕ ಬ್ರ್ಯಾಂಡ್‌ಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ.
ಶ್ರೀಗಂಧ: ಭಾರತೀಯ ಶ್ರೀಗಂಧದ ಹಳೆಯ ವೈಭವವನ್ನು ಮರುಸ್ಥಾಪಿಸಲು ರಾಜ್ಯ ಸರ್ಕಾರಗಳೊಂದಿಗೆ ಸಹಭಾಗಿತ್ವ.
ಹಣ್ಣಿನ ತೋಟಗಳು: ಹಳೆಯ ಮತ್ತು ಕಡಿಮೆ ಇಳುವರಿ ನೀಡುವ ಹಣ್ಣಿನ ತೋಟಗಳನ್ನು ಪುನಶ್ಚೇತನಗೊಳಿಸಲು ಮತ್ತು ಬಾದಾಮಿ, ಆಕ್ರೋಟ್ ನಂತಹ ಬೆಳೆಗಳಲ್ಲಿ ಯುವಕರನ್ನು ತೊಡಗಿಸಿಕೊಳ್ಳುವ ಮೂಲಕ ಮೌಲ್ಯವರ್ಧನೆ ಮಾಡಲು ವಿಶೇಷ ಕಾರ್ಯಕ್ರಮ ಘೋಷಿಸಲಾಗಿದೆ.
ಸಹಕಾರ ವಲಯ
ಸಹಕಾರ ವಲಯ(Cooperative Sector)ಕ್ಕಾಗಿ ಹಣಕಾಸು ಸಚಿವರು ಹಲವು ತೆರಿಗೆ ಕ್ರಮಗಳನ್ನು ಘೋಷಿಸಿದ್ದಾರೆ.
ವಿನಾಯಿತಿ ವ್ಯಾಪ್ತಿ ವಿಸ್ತರಣೆ: ಪ್ರಸ್ತುತ ತಮ್ಮ ಸದಸ್ಯರು ಉತ್ಪಾದಿಸಿದ ಜಾನುವಾರು ಮೇವು ಮತ್ತು ಹತ್ತಿ ಬೀಜಗಳನ್ನು ಪೂರೈಸುವ ಸಹಕಾರ ಸಂಘಗಳಿಗೆ ಮಾತ್ರ ಲಭ್ಯವಿದ್ದ ತೆರಿಗೆ ಕಡಿತದ ಸೌಲಭ್ಯವನ್ನು, ಇನ್ನು ಮುಂದೆ ಹಾಲು, ಎಣ್ಣೆಕಾಳುಗಳು, ಹಣ್ಣು ಮತ್ತು ತರಕಾರಿಗಳನ್ನು ಪೂರೈಸುವ ಸಹಕಾರ ಸಂಘಗಳಿಗೂ ವಿಸ್ತರಿಸಲಾಗುವುದು.
ಅಂತರ-ಸಹಕಾರ ಸಂಘಗಳ ಲಾಭಾಂಶ (Dividend): ಹೊಸ ತೆರಿಗೆ ಪದ್ಧತಿಯಡಿ, ಅಂತರ-ಸಹಕಾರ ಸಂಘಗಳ ಲಾಭಾಂಶದ ಆದಾಯವನ್ನು ಸದಸ್ಯರಿಗೆ ವಿತರಿಸಿದಷ್ಟರ ಮಟ್ಟಿಗೆ ಕಡಿತವಾಗಿ (Deduction) ಅನುಮತಿಸಲು ಪ್ರಸ್ತಾಪಿಸಲಾಗಿದೆ.
ರಾಷ್ಟ್ರೀಯ ಸಹಕಾರ ಒಕ್ಕೂಟಗಳಿಗೆ ವಿನಾಯಿತಿ: ಅಧಿಸೂಚಿತ ರಾಷ್ಟ್ರೀಯ ಸಹಕಾರ ಒಕ್ಕೂಟಗಳು ಕಂಪನಿಗಳಲ್ಲಿ ಮಾಡಿದ ಹೂಡಿಕೆಯಿಂದ ಪಡೆಯುವ ಲಾಭಾಂಶ ಆದಾಯಕ್ಕೆ ಮೂರು ವರ್ಷಗಳ ಅವಧಿಯವರೆಗೆ ತೆರಿಗೆ ವಿನಾಯಿತಿ ನೀಡಲು ಪ್ರಸ್ತಾಪಿಸಲಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement