ಹೈದರಾಬಾದ್: ತೆಲಂಗಾಣ ಜಾಗೃತಿ ಅಧ್ಯಕ್ಷೆ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯೆ ಕಲ್ವಕುಂಟ್ಲ ಕವಿತಾ ಅವರು ರಾಜ್ಯದಲ್ಲಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಮುಂಬರುವ ಮೇ ತಿಂಗಳಿನಲ್ಲಿ ಪಕ್ಷಕ್ಕೆ ಚಾಲನೆ ಸಿಗಲಿದ್ದು, ಪಕ್ಷದ ಹೆಸರಿನಲ್ಲಿ ‘ತೆಲಂಗಾಣ’ ಎಂಬ ಪದ ಇರಲಿದೆ ಎಂದು ಅವರು ತಿಳಿಸಿದ್ದಾರೆ.
“ತೆಲಂಗಾಣ ನಮ್ಮ ಮದರ್ ಬೋರ್ಡ್ ಇದ್ದಂತೆ. ‘ಸಾಮಾಜಿಕ ತೆಲಂಗಾಣ’ (ಸಾಮಾಜಿಕ ನ್ಯಾಯದ ತೆಲಂಗಾಣ) ನಿರ್ಮಾಣವೇ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಅನುಗುಣವಾಗಿ ನಾವು ಪಕ್ಷವನ್ನು ಮುನ್ನಡೆಸುತ್ತೇವೆ,” ಎಂದು ಕವಿತಾ ಹೇಳಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕವಿತಾ ಅವರು ಮೊದಲು ಸಿದ್ಧಿಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಒಲವು ತೋರಿದ್ದು, ಎರಡನೇ ಆಯ್ಕೆಯಾಗಿ ಬೋಧನ್ ಕ್ಷೇತ್ರವನ್ನು ಇರಿಸಿಕೊಂಡಿದ್ದಾರೆ.
ಹೊಸ ಪಕ್ಷ ಅಸ್ತಿತ್ವಕ್ಕೆ ಬಂದ ಕೂಡಲೇ ರಾಜ್ಯದಲ್ಲಿ ಬಿಜೆಪಿ ಅಳಿಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆಡಳಿತಾರೂಢ ಕಾಂಗ್ರೆಸ್, ಬಿಆರ್ಎಸ್ ಮತ್ತು ಬಿಜೆಪಿಯ ಜನವಿರೋಧಿ ನೀತಿಗಳ ವಿರುದ್ಧ ತಮ್ಮ ಪಕ್ಷ ನಿರಂತರವಾಗಿ ಧ್ವನಿ ಎತ್ತಲಿದೆ ಎಂದು ಅವರು ಗುಡುಗಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆ: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ. ZPTC ಮತ್ತು MPTC ಚುನಾವಣೆಗಳಿಗಾಗಿ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಸುಳಿವು ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ