ವೀಡಿಯೊ | ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ : ಕರ್ನಾಟಕ ಆಟಗಾರನಿಗೆ ತಲೆಯಿಂದ ಡಿಚ್ಚಿ ಹೊಡೆದ ಜಮ್ಮು ತಂಡದ ನಾಯಕ

ಹುಬ್ಬಳ್ಳಿ: ಇಲ್ಲಿನ ಕೆ.ಎಸ್.ಸಿ.ಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ನಡುವಿನ 2025-26ರ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದ ಎರಡನೇ ದಿನದಂದು ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಜಮ್ಮು-ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಅವರು ಕರ್ನಾಟಕದ ಫೀಲ್ಡರ್ ಕೆ.ವಿ. ಅನೀಶ್ ಅವರಿಗೆ ತಲೆಯಿಂದ ಡಿಚ್ಚಿ ಹೊಡೆದ (Headbutt) ಪ್ರಸಂಗ ನಡೆದಿದೆ.
ಜಮ್ಮು-ಕಾಶ್ಮೀರ ಇನಿಂಗ್ಸ್‌ನ 101ನೇ ಓವರ್‌ನಲ್ಲಿ ಡೋಗ್ರಾ ಬಾರಿಸಿದ ಚೆಂಡು ಗಲ್ಲಿ ಫೀಲ್ಡರ್ ಪಕ್ಕದಲ್ಲಿ ಬೌಂಡರಿ ಗೆರೆ ದಾಟಿತು. ಈ ಸಂದರ್ಭದಲ್ಲಿ ಬ್ಯಾಟರ್ ಮತ್ತು ಫೀಲ್ಡರ್ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಕ್ರೀಸ್‌ನಲ್ಲಿದ್ದ ಡೋಗ್ರಾ ಮತ್ತು ಕೆ.ವಿ. ಅನೀಶ ನಡುವೆ ನಡೆದ ಮಾತಿನ ಚಕಮಕಿ ಕ್ಷಣಾರ್ಧದಲ್ಲಿ ವಿಕೋಪಕ್ಕೆ ತಿರುಗಿ, ಡೋಗ್ರಾ ಅವರು ಅನೀಶಗೆ ತಲೆಯಿಂದ ಗುದ್ದಿದರು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಕರ್ನಾಟಕದ ಹಿರಿಯ ಆಟಗಾರ ಮಯಾಂಕ್ ಅಗರ್ವಾಲ್, ಕೂಡಲೇ ಇಬ್ಬರ ನಡುವೆ ಬಂದು ಡೋಗ್ರಾ ಅವರ ಮೇಲೆ ಕಿಡಿಕಾರಿದರು. ತಕ್ಷಣವೇ ಅಂಪೈರ್‌ಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅಂಪೈರ್‌ಗಳು ಮಧ್ಯಪ್ರವೇಶಿಸಿ ಡೋಗ್ರಾ ಮತ್ತು ಅನೀಶ ಅವರನ್ನು ಬೇರ್ಪಡಿಸಿದರು. ಘಟನೆಯ ನಂತರ, ಅಂಪೈರ್‌ಗಳು ಕರ್ನಾಟಕದ ನಾಯಕ ದೇವದತ್ ಪಡಿಕ್ಕಲ್ ಅವರಿಗೆ ಫೀಲ್ಡಿಂಗ್ ತಂಡ ಶಿಸ್ತನ್ನು ಪಾಲಿಸುವಂತೆ ಸೂಚಿಸಿದರು. ನಂತರ, ಪರಾಸ್ ಡೋಗ್ರಾ ಅವರು ಅನೀಶ್ ಕೆವಿ ಅವರ ಬಳಿ ಕ್ಷಮೆಯಾಚಿಸಲು ಮುಂದಾದರು. ಆದರೆ ಬದಲಿ ಫೀಲ್ಡರ್ ಕ್ಷಮೆಯಾಚನೆಯನ್ನು ಸ್ವೀಕರಿಸಲು ಆಸಕ್ತಿ ತೋರಲಿಲ್ಲ ಎನ್ನಲಾಗಿದೆ.

ಮೊದಲ ದಿನ ವೈಶಾಖ್ ವಿಜಯಕುಮಾರ ಎಸೆದ ಬೌನ್ಸರ್‌ನಿಂದ ಗಾಯಗೊಂಡು ನಿವೃತ್ತರಾಗಿದ್ದ (Retire hurt) 41 ವರ್ಷದ ಡೋಗ್ರಾ, ಎರಡನೇ ದಿನ ಮರಳಿ ಬಂದು ಅರ್ಧಶತಕ ದಾಖಲಿಸಿದರು. ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಜಮ್ಮು-ಕಾಶ್ಮೀರ ಮೊದಲ ದಿನದ ಅಂತ್ಯಕ್ಕೆ 284/2 ರನ್ ಗಳಿಸಿ ಭದ್ರ ಬುನಾದಿ ಹಾಕಿತ್ತು. ಶುಭಂ ಪುಂಡಿರ್ (121) ಆಕರ್ಷಕ ಶತಕ ಸಿಡಿಸಿದರೆ, ಅಬ್ದುಲ್ ಸಮದ್ (61) ಅರ್ಧಶತಕದ ಕಾಣಿಕೆ ನೀಡಿದರು. ಕರ್ನಾಟಕ ತಂಡವು ತನ್ನ 9ನೇ ರಣಜಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.

ಪ್ರಮುಖ ಸುದ್ದಿ :-   ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ ನೇಮಕ

1 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement