ನವದೆಹಲಿ: ವಿಮಾನ ಪ್ರಯಾಣಿಕರ ದೀರ್ಘಕಾಲದ ದೂರುಗಳಿಗೆ ಕಿವಿಗೊಟ್ಟಿರುವ ಕೇಂದ್ರ ಸರ್ಕಾರವು ವಿಮಾನಯಾನ ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿದೆ. ಇನ್ಮುಂದೆ ಯಾವುದೇ ವಿಮಾನದಲ್ಲಿನ ಒಟ್ಟು ಸೀಟುಗಳ ಪೈಕಿ ಕನಿಷ್ಠ ಶೇಕಡಾ 60 ರಷ್ಟು ಸೀಟುಗಳನ್ನು ಉಚಿತವಾಗಿ (ಯಾವುದೇ ಹೆಚ್ಚುವರಿ ಆಯ್ಕೆ ಶುಲ್ಕವಿಲ್ಲದೆ) ಪ್ರಯಾಣಿಕರಿಗೆ ನೀಡಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಇತ್ತೀಚಿನ ದಿನಗಳಲ್ಲಿ ವಿಮಾನಯಾನ ಸಂಸ್ಥೆಗಳು ಸೀಟು ಆಯ್ಕೆಯ ಹೆಸರಿನಲ್ಲಿ ‘ಹಿಡನ್ ಚಾರ್ಜ್’ (ಗುಪ್ತ ಶುಲ್ಕ) ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿತ್ತು. ಕಿಟಕಿ ಪಕ್ಕದ ಸೀಟು (Window seat), ಅಕ್ಕಪಕ್ಕದ ನಡಿಗೆ ಹಾದಿಯ ಸೀಟು (Aisle seat) ಹಾಗೂ ಹೆಚ್ಚಿನ ಕಾಲು ಚಾಚುವ ಸ್ಥಳಾವಕಾಶವಿರುವ ಸೀಟುಗಳಿಗೆ ಭಾರಿ ಹಣ ವಸೂಲಿ ಮಾಡಲಾಗುತ್ತಿತ್ತು. ಇದರಿಂದಾಗಿ ಯಾವುದೇ ಹೆಚ್ಚುವರಿ ಆಯ್ಕೆ ಶುಲ್ಕವಿಲ್ಲದ ಸೀಟುಗಳು (ಉಚಿತ ಸೀಟುಗಳು) ಕೇವಲ ಮಧ್ಯದ ಸಾಲಿನಲ್ಲಿ ಅಥವಾ ವಿಮಾನದ ಕೊನೆಯಲ್ಲಿ ಮಾತ್ರ ಸಿಗುತ್ತಿದ್ದವು. ಗ್ರಾಹಕರ ಈ ಶೋಷಣೆಯನ್ನು ತಡೆಯಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಕುಟುಂಬ ಸಮೇತ ಪ್ರಯಾಣಿಸುವವರಿಗೆ ಸಿಹಿ ಸುದ್ದಿ
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಹೊರಡಿಸಿರುವ ಹೊಸ ನಿಯಮದಂತೆ, ಒಂದೇ PNR ಅಡಿಯಲ್ಲಿ ಟಿಕೆಟ್ ಕಾಯ್ದಿರಿಸಿದ ಕುಟುಂಬ ಸದಸ್ಯರು ಅಥವಾ ಗುಂಪಾಗಿ ಪ್ರಯಾಣಿಸುವವರಿಗೆ ಸಾಧ್ಯವಾದಷ್ಟು ಪಕ್ಕದ ಸೀಟುಗಳನ್ನೇ ನೀಡಬೇಕು. ಸೀಟುಗಳ ಹಂಚಿಕೆಯ ವಿಷಯದಲ್ಲಿ ವಿಮಾನದೊಳಗೆ ಪ್ರಯಾಣಿಕರ ನಡುವೆ ನಡೆಯುವ ಮಾತಿನ ಚಕಮಕಿ ಮತ್ತು ಗೊಂದಲಗಳನ್ನು ತಪ್ಪಿಸಲು ಈ ಕ್ರಮ ಅತ್ಯಗತ್ಯ ಎಂದು ಸಚಿವಾಲಯ ಹೇಳಿದೆ. ಕುಟುಂಬದ ಸದಸ್ಯರು ಮತ್ತು ಗುಂಪಿನಲ್ಲಿ ಪ್ರಯಾಣಿಸುವವರು ಒಟ್ಟಿಗೆ ಪ್ರಯಾಣಿಸಲು ಬಯಸುತ್ತಾರೆ ಮತ್ತು ಸಹ ಪ್ರಯಾಣಿಕರಿಗೆ ಬೇರೆ ಆಸನಗಳಿಗೆ ಬದಲಾಯಿಸಿಕೊಳ್ಳುವಂತೆ ವಿನಂತಿಸುತ್ತಾರೆ. ಕೆಲವರು ನಿರಾಕರಿಸುತ್ತಾರೆ, ಇದು ಟೇಕ್ ಆಫ್ ಆಗುವ ಮೊದಲು ಮಾತಿನ ಚಕಮಕಿಗಳಿಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಸರ್ಕಾರ ಈ ಸೂಚನೆ ನೀಡಿದೆ.
ಪ್ರಯಾಣಿಕರ ಹಕ್ಕುಗಳ ರಕ್ಷಣೆ
ವಿಮಾನ ವಿಳಂಬ, ರದ್ದತಿ ಅಥವಾ ಬೋರ್ಡಿಂಗ್ ನಿರಾಕರಣೆಯಂತಹ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ವಿಮಾನಯಾನ ಸಂಸ್ಥೆಗಳು ತಮ್ಮ ವೆಬ್ಸೈಟ್, ಮೊಬೈಲ್ ಆ್ಯಪ್ ಮತ್ತು ವಿಮಾನ ನಿಲ್ದಾಣದ ಕೌಂಟರ್ಗಳಲ್ಲಿ ಸ್ಪಷ್ಟವಾಗಿ ಮಾಹಿತಿ ನೀಡಬೇಕು. ಅಷ್ಟೇ ಅಲ್ಲದೆ, ಈ ಮಾಹಿತಿಯನ್ನು ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಾಗುವಂತೆ ಮಾಡಬೇಕು ಎಂದು ಸೂಚಿಸಲಾಗಿದೆ.
ಇತರ ಪ್ರಮುಖ ಅಂಶಗಳು:
ಸಾಮಗ್ರಿ ಸಾಗಣೆ: ಕ್ರೀಡಾ ಪರಿಕರಗಳು, ಸಂಗೀತ ವಾದ್ಯಗಳು ಮತ್ತು ಸಾಕುಪ್ರಾಣಿಗಳನ್ನು ಕೊಂಡೊಯ್ಯುವ ಬಗ್ಗೆ ಪಾರದರ್ಶಕ ಮತ್ತು ಪ್ರಯಾಣಿಕ ಸ್ನೇಹಿ ನಿಯಮಗಳನ್ನು ಜಾರಿಗೆ ತರಲು ಸೂಚಿಸಲಾಗಿದೆ.
ಸೌಲಭ್ಯಗಳು: ವಿಮಾನ ನಿಲ್ದಾಣಗಳಲ್ಲಿ ಕೈಗೆಟುಕುವ ದರದಲ್ಲಿ ಆಹಾರಕ್ಕಾಗಿ ‘ಉಡಾನ್ ಕೆಫೆ’, ಓದುಗರಿಗಾಗಿ ‘ಫ್ಲೈಬ್ರರಿ’ (ಪುಸ್ತಕಾಲಯ) ಮತ್ತು ಉಚಿತ ವೈ-ಫೈ ಸೌಲಭ್ಯಗಳನ್ನು ಪ್ರಾರಂಭಿಸಲಾಗಿದೆ.
ಭಾರತವು ವಿಶ್ವದ ಮೂರನೇ ಅತಿದೊಡ್ಡ ದೇಶೀಯ ವಾಯುಯಾನ ಮಾರುಕಟ್ಟೆಯಾಗಿ ಬೆಳೆದಿದ್ದು, ಪ್ರತಿದಿನ 5 ಲಕ್ಷಕ್ಕೂ ಹೆಚ್ಚು ಜನರು ವಿಮಾನದಲ್ಲಿ ಸಂಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತರಕ್ಷಣೆಯೇ ತಮ್ಮ ಮೊದಲ ಆದ್ಯತೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ