ಪುಸ್ತಕ ಎಂಬುದು ಪ್ರತಿಯೊಬ್ಬ ಓದುಗನಲ್ಲೂ ಹೊಸ ಅರ್ಥವನ್ನು ಸೃಷ್ಟಿಸುವ ಜೀವಂತ ದ್ರವ್ಯ

ಸಿದ್ದಾಪುರ : ಪುಸ್ತಕ ಎಂಬುದು ಕೇವಲ ಅಚ್ಚಾದ ವಸ್ತುವಲ್ಲ; ಅದು ಪ್ರತಿಯೊಬ್ಬ ಓದುಗನಲ್ಲೂ ಹೊಸ ಅರ್ಥವನ್ನು ಸೃಷ್ಟಿಸುವ ಜೀವಂತ ದ್ರವ್ಯ ಎಂದು
ಸಿದ್ದಾಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಅಭಿಪ್ರಾಯಪಟ್ಟರು.
ಪೌರ್ಣಿಮಾ ಸಾಹಿತ್ಯ ವೇದಿಕೆ ಹಾಗೂ ಪ್ರಯೋಗ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಲಯನ್ಸ್‌ ಬಾಲಭವನದಲ್ಲಿ ಆಯೋಜಿಸಲಾದ ಪತ್ರಕರ್ತ, ಸಾಹಿತಿ ಗಂಗಾಧರ ಕೊಳಗಿ ಅವರ ಮರುಮುದ್ರಣಗೊಂಡ ಕೃತಿಗಳ ಅವಲೋಕನ ಕಾರ್ಯಕ್ರಮದಲ್ಲಿ ಕಾಡಂಚಿನ ಯಾನ: ಪರಿಸರದ ಅನುಭವ ಕಥನ ಕೃತಿಯ ಕುರಿತು ಅವರು ಮಾತನಾಡಿದರು.
ಮನುಷ್ಯ ನಿರ್ಮಿತವಾದ ಯಾವುದೂ ಶಾಶ್ವತವಲ್ಲದಿದ್ದರೂ, ಅವನು ಸೃಷ್ಟಿಸಿದ ಅಕ್ಷರ ಮತ್ತು ಸಾಹಿತ್ಯ ಮಾತ್ರ ಮನುಕುಲ ಇರುವವರೆಗೂ ಶಾಶ್ವತವಾಗಿರುತ್ತದೆ. ೨೦೦೩ ಮತ್ತು ೨೦೧೯ರಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹವಾಗಿರುವ ಮರುಮುದ್ರಣಗೊಂಡ ಈ ಕೃತಿಯು ಲೇಖಕರ ಸಾಮಾಜಿಕ ಹೊಣೆಗಾರಿಕೆ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರವನ್ನು ನೋಡುವ ಒಳನೋಟವನ್ನು ಪರಿಚಯಿಸುತ್ತದೆ ಎಂದರು.

ಕೃತಿಯಲ್ಲಿನ ಒಂಬತ್ತು ಅನುಭವ ಕಥನಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿದ ಅವರು ಮುಖ್ಯವಾಗಿ ನೀರಯಾನದ ಕುರಿತು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು. ಹೊನ್ನೆಮರಡುವಿನಿಂದ ಹೊಸನಗರದವರೆಗೆ ಸುಮಾರು ೭೦-೮೦ ಕಿಲೋಮೀಟರ್ ದೂರವನ್ನು ತೆಪ್ಪದಲ್ಲಿ ಕ್ರಮಿಸಿದ ಆ ಸಾಹಸಮಯ ಯಾನ
ಲೇಖಕರ ಆತ್ಮಕಥನದಂತೆ ಮೂಡಿಬಂದಿದೆ. ಆಳವಾದ ನೀರಿನ ಮೇಲೆ ಸಾಗುವಾಗ ಲೇಖಕರು ಅನುಭವಿಸಿದ ಆತಂಕ, ಪರಿಸರದ ಸೌಂದರ್ಯ ಹಾಗೂ ಮಲೆನಾಡಿನ ಜಲಾನಯನ ಪ್ರದೇಶದ ಜನರ ಬದುಕಿನ ಸಂಕಷ್ಟಗಳನ್ನು ಈ ಕೃತಿಯು ಅತ್ಯಂತ ಮೌಲಿಕವಾಗಿ ದಾಖಲಿಸಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮುಳುಗಡೆಯಾದ ಊರುಗಳು, ಅಲ್ಲಿನ ಸಂಸ್ಕೃತಿ ಮತ್ತು ಮನುಷ್ಯ ಸಂಬಂಧಗಳ ಹಳಹಳಿಕೆಯನ್ನು ಲೇಖಕರು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಬೈಸಿಕಲ್ ಯಾನ, ಮಾಯಾಮೃಗ (ಕಳೆದುಹೋದ ಎಮ್ಮೆಯ ಕಥೆ), ಹಾವುಗೊಲ್ಲರ ಕರಾಮತ್ತು, ದೆವ್ವದ ಕಾಟ ಹಾಗೂ ಚೌತಿ ಮೆಣಸಿನ ಜಾಡು ಮುಂತಾದ ಲೇಖನಗಳು ಸಿದ್ದಾಪುರ ಮತ್ತು ಸುತ್ತಮುತ್ತಲ ಹಳ್ಳಿಗಳ ಮಣ್ಣಿನ ವಾಸನೆಯನ್ನು ಹೊಂದಿವೆ. ಹಳ್ಳಿಯ ಜನರ ಆಡುಭಾಷೆ, ಹುಕ್ಕಿ ಹೊಡೆಯುವುದು, ಕುನ್ನಿ ಈಜು, ಬಳಕೆ ಹಚ್ಚುವುದು ಎಂಬಂತಹ ಅಪ್ಪಟ ಗ್ರಾಮೀಣ ಶಬ್ದಗಳು ಕೃತಿಯ ಓದಿನ ಆಪ್ತತೆಯನ್ನು ಹೆಚ್ಚಿಸುತ್ತವೆ. ಮೀನು ಹಿಡಿಯುವ ಸಂಪ್ರದಾಯ, ಅಜ್ಜಿಕಟ್ಟೆ ಕಾಡಿನ ದಟ್ಟತೆ, ಕಾನೂರು ಕೋಟೆಯ ಐತಿಹಾಸಿಕ ಹಿನ್ನೆಲೆ ಹಾಗೂ ವಾಸ್ಕೋಡಗಾಮನನ್ನು ಭಾರತಕ್ಕೆ ಕರೆತಂದ ಮೆಣಸಿನ ಸುವಾಸನೆಯವರೆಗೆ ಈ ಕೃತಿಯು ಓದುಗರನ್ನು ಬೇರೊಂದು ಲೋಕಕ್ಕೇ ಕರೆದುಕೊಂಡು ಹೋಗುತ್ತದೆ. ಒಟ್ಟಾರೆಯಾಗಿ, ಕಾಡಂಚಿನ ಯಾನ ಕೇವಲ ಪ್ರವಾಸ ಕಥನವಾಗಿ ಉಳಿಯದೆ, ನಮ್ಮ ಬದುಕಿನ ಯಾನವನ್ನು ಪ್ರತಿಬಿಂಬಿಸುವ ಒಂದು ವಾಸ್ತವ ಕನ್ನಡಿಯಾಗಿದೆ. ಈ ಅಪೂರ್ವ ಕೃತಿಯನ್ನು ಪ್ರತಿಯೊಬ್ಬ ಸಾಹಿತ್ಯಾಸಕ್ತರೂ ಓದಿ, ಪರಿಸರ ಮತ್ತು ಬದುಕಿನ ಸೂಕ್ಷ್ಮತೆಗಳನ್ನು ಅರಿತುಕೊಳ್ಳಬೇಕು ಎಂದರು.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

ಮನಸು ಆಕಾಶದ ನೀಹಾರಿಕೆ ಕೃತಿಯ ಕುರಿತು ಮಾತನಾಡಿದ ಉಪನ್ಯಾಸಕ ರತ್ನಾಕರ ನಾಯ್ಕ ಅವರು, ಗಂಗಾಧರ ಕೊಳಗಿ ಅವರ ಸಾಹಿತ್ಯವು ಕೇವಲ ಸ್ಥಳೀಯತೆಗೆ ಸೀಮಿತವಾಗದೆ, ಮನುಷ್ಯನ ಮನಸ್ಸಿನ ಒಳತಲ್ಲಣಗಳನ್ನು ವೈಚಾರಿಕ ನೆಲೆಯಲ್ಲಿ ವಿಶ್ಲೇಷಿಸುವ ಶಕ್ತಿಯನ್ನು ಹೊಂದಿದೆ. ಮನಸ್ಸು, ಆಕಾಶ ಮತ್ತು ನೀಹಾರಿಕೆ ಈ ಮೂರೂ ಭೌತಿಕವಾಗಿ ಕೈಗೆ ಸಿಗದಿದ್ದರೂ ಮನುಷ್ಯನ ಮೇಲೆ ಗಾಢ ಪ್ರಭಾವ ಬೀರುವ ಅಂಶಗಳಾಗಿವೆ. ಬಾಹ್ಯಾಕಾಶದ ನೀಹಾರಿಕೆಯಂತೆ ಮನುಷ್ಯನ ಮನಸ್ಸು ಕೂಡ ಅನೇಕ ಭಾವನೆಗಳನ್ನು ಸೃಷ್ಟಿಸುವ ಮತ್ತು ಸಾಯಿಸುವ ಶಕ್ತಿಯನ್ನು ಹೊಂದಿದೆ. ಈ ಸಂಕಲನದ ಆರು ಕಥೆಗಳಲ್ಲಿ ನವ್ಯ ಸಾಹಿತ್ಯದ
ಛಾಯೆ ಗಾಢವಾಗಿದ್ದು, ವ್ಯಕ್ತಿ ಕೇಂದ್ರಿತ ನೆಲೆಯಲ್ಲೇ ಕಥೆಗಳು ವಿಸ್ತರಿಸುತ್ತವೆ. ಕೃತಿಯಲ್ಲಿನ ಪ್ರೇರಣೆ, ಕುರುಹು, ಅಧ್ಯಾಯ, ದಿಗ್ಭ್ರಮೆ, ಮತ್ತು ಅನ್ವೇಷಣೆಯಂತಹ ಕಥೆಗಳು ಕಾಲ ಮತ್ತು ಸ್ಥಳದ ಹಿನ್ನೆಲೆಯಲ್ಲಿ ಭಿನ್ನವಾಗಿದ್ದರೂ, ಇವುಗಳ ಅಂತಃಸತ್ವದಲ್ಲಿ ಸ್ಥಳೀಯ ಪ್ರೀತಿ, ಕಾಮದ ಅವಾಂತರಗಳು ಮತ್ತು ಸಂಬಂಧಗಳ ಜಿಜ್ಞಾಸೆ ಎದ್ದುಕಾಣುತ್ತವೆ. ಸಂಪ್ರದಾಯಗಳನ್ನು ಗೌರವಿಸುತ್ತಲೇ ಅದರಲ್ಲಿನ ಮೌಢ್ಯಗಳನ್ನು ಪ್ರಶ್ನಿಸುವ ವೈಚಾರಿಕತೆ ಕೊಳಗಿಯವರ ಬರಹದ ವೈಶಿಷ್ಟ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗದ್ಯ ಸಾಹಿತ್ಯದ ಪರಂಪರೆಯಲ್ಲಿ ಗಂಗಾಧರ ಕೊಳಗಿ ಅವರು ತಮ್ಮ ವಿಶಿಷ್ಟ ಶೈಲಿಯ ಮೂಲಕ ಮಹತ್ವದ ಸ್ಥಾನವನ್ನು ಪಡೆದಿದ್ದಾರೆ. ಶೀರ್ಷಿಕೆಯ ಕಥೆಯು ಸಾವು ಮತ್ತು ಸಂಬಂಧಗಳ ಹೊಸ ಪ್ರಶ್ನೆಗಳನ್ನು ಓದುಗರ ಮುಂದೆ ತೆರೆದಿಡುತ್ತದೆ ಎಂದು ಅವರು ವಿಶ್ಲೇಷಿಸಿದರು.

ಪ್ರಮುಖ ಸುದ್ದಿ :-   ಕುಮಟಾ: ಭಾರಿ ಮಳೆಗೆ ಗೋಕರ್ಣ–ತದಡಿ ರಸ್ತೆಯಲ್ಲಿ ಗುಡ್ಡ ಕುಸಿತ

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಕುಂಬ್ರಿಗದ್ದೆ, ಲಯನ್ಸ್ ಅಧ್ಯಕ್ಷ ರಾಘವೇಂದ್ರ ಭಟ್ಟ, ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್. ಮಾತನಾಡಿದರು. ಪ್ರೊ. ಎಂ.ಕೆ. ನಾಯ್ಕ ಹೊಸಳ್ಳಿ, ಕೃತಿಕಾರ ಗಂಗಾಧರ ಕೊಳಗಿ ಅನಿಸಿಕೆ ವ್ಯಕ್ತಪಡಿಸಿದರು.
ಪೌರ್ಣಿಮಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಅಧ್ಯಕ್ಷತೆ ವಹಿಸಿದ್ದರು. ಕವಿಯಿತ್ರಿ ಸುಧಾರಾಣಿ ಕಾರ್ಯಕ್ರಮ ನಿರ್ವಹಿಸಿದರು. ಜಾನಪದ ಗಾಯಕ ಗೋಪಾಲ ಕಾನಳ್ಳಿ ಕವಿತೆ ಹಾಡಿದರು. ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ ಸ್ವಾಗತಿಸಿದರು. ಕವಿ ವೆಂಕಟೇಶ ಮಡಿವಾಳ ಕೃತಿಕಾರರನ್ನು ಪರಿಚಯಿಸಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement