ಮುಜಾಫರ್ನಗರ/ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ ಆಪ್ತ ಸಹಾಯಕ (PA) ಚಂದ್ರನಾಥ ರಥ್ ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಮುಖ್ಯ ಶೂಟರನನ್ನು ಕೇಂದ್ರ ತನಿಖಾ ದಳ (CBI) ಬಂಧಿಸಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶ ಪೊಲೀಸರ ಸಹಯೋಗದೊಂದಿಗೆ ಸಿಬಿಐ ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿ ರಾಜಕುಮಾರನ ಟ್ರಾನ್ಸಿಟ್ ರಿಮಾಂಡ್ (Transit Remand) ಪಡೆದುಕೊಂಡಿದೆ. ಮಂಗಳವಾರ ಆತನನ್ನು ಕೋಲ್ಕತಾದ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.
ಹತ್ಯೆಯಾದ ಚಂದ್ರನಾಥ ರಥ್ ಅವರು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಅತ್ಯಂತ ನಂಬಿಕಸ್ಥ ಒಡನಾಡಿಯಾಗಿದ್ದರು. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಎರಡು ದಿನಗಳ ನಂತರ, ಅಂದರೆ ಮೇ 6 ರ ರಾತ್ರಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ಚಂದ್ರನಾಥ ರಥ್ ಅವರು ಕೋಲ್ಕತಾಕ್ಕೆ ಪ್ರಯಾಣಿಸುತ್ತಿದ್ದಾಗ, ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದ ದೊಲ್ತಾಲಾ ಪ್ರದೇಶದಲ್ಲಿ ಮೋಟಾರ್ ಸೈಕಲ್ನಲ್ಲಿ ಬಂದ ದುಷ್ಕರ್ಮಿಗಳು ಅವರ ಕಾರನ್ನು ತಡೆದು ಅತ್ಯಂತ ಹತ್ತಿರದಿಂದ (Point-blank range) ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು.
ಈ ಹತ್ಯೆಯ ಬೆನ್ನಲ್ಲೇ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿತ್ತು. ಅಲ್ಲದೆ, ರಥ್ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವುದಾಗಿ ಸುವೇಂದು ಅಧಿಕಾರಿ ಭರವಸೆ ನೀಡಿದ್ದರು. ತದನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಯಾಂಕ್ ರಾಜ್ ಮಿಶ್ರಾ, ವಿಕ್ಕಿ ಮೌರ್ಯ ಮತ್ತು ರಾಜ ಸಿಂಗ್ ಎಂಬ ಮೂವರನ್ನು ಬಂಧಿಸಲಾಗಿತ್ತು.
ಇವರಲ್ಲಿ ಮಿಶ್ರಾ ಮತ್ತು ಮೌರ್ಯ ಅವರನ್ನು ಬಿಹಾರದ ಬಕ್ಸರ್ನಿಂದ ಹಾಗೂ ಸಿಂಗ್ನನ್ನು ಉತ್ತರ ಪ್ರದೇಶದ ಬಲ್ಲಿಯಾದಿಂದ ಬಂಧಿಸಲಾಗಿತ್ತು. ರಾಜಕುಮಾರ ಬಂಧನದಿಂದ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಪೊಲೀಸ್ ಮೂಲಗಳ ಪ್ರಕಾರ, ಈ ಹತ್ಯಾಕಾಂಡದಲ್ಲಿ ಒಟ್ಟು ಎಂಟು ಮಂದಿ ಭಾಗಿಯಾಗಿರುವ ಶಂಕೆಯಿದೆ. ಪ್ರಸ್ತುತ ಬಂಧಿತರಾಗಿರುವ ಆರೋಪಿಗಳು ವಿಚಾರಣೆ ವೇಳೆ ಪದೇ ಪದೇ ತಮ್ಮ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಚಂದ್ರನಾಥ ರಥ್ ಅವರ ಸಂಚಾರದ ನಿಖರ ಮಾಹಿತಿ ಈ ಶೂಟರ್ಗಳಿಗೆ ಹೇಗೆ ಸಿಕ್ಕಿತು? ಮತ್ತು ಘಟನಾ ಸ್ಥಳದಲ್ಲಿ ಬೇರೆ ಯಾರ್ಯಾರು ಉಪಸ್ಥಿತರಿದ್ದರು? ಎಂಬುದನ್ನು ಪತ್ತೆಹಚ್ಚಲು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ