ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಪರಿಚಿತ ಬಂಧೂಕುಧಾರಿಗಳಿಂದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಬುರ್ಹಾನ್ ಹಮ್ಜಾ ಹತ್ಯೆ

ನವದೆಹಲಿ: ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರ ಹಾಗೂ ನಿಷೇಧಿತ ‘ಅಲ್-ಬದ್ರ’ ಭಯೋತ್ಪಾದನಾ ಸಂಘಟನೆಯ ಉನ್ನತ ಕಾರ್ಯಾಚರಣೆ ಕಮಾಂಡರ್ ಅರ್ಜಮಂದ್‌ ಗುಲ್ಜಾರ್ ಅಲಿಯಾಸ್ ಬುರ್ಹಾನ್ ಹಮ್ಜಾನನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ದ ಮುಜಾಫರಾಬಾದ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಅಪರಿಚಿತ ದುಷ್ಕರ್ಮಿಗಳು ನಡೆಸುತ್ತಿರುವ ಸರಣಿ ದಾಳಿಗಳಲ್ಲಿ ಇದು ಮತ್ತೊಂದು ಪ್ರಮುಖ ಘಟನೆಯಾಗಿದೆ. ಹತ್ಯೆಗೀಡಾದ ಬುರ್ಹಾನ್ ಹಮ್ಜಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯಂತ ಸಂಕೀರ್ಣವಾದ ಭಯೋತ್ಪಾದಕ ಜಾಲವನ್ನು ಮುನ್ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಭಾರತೀಯ ಭದ್ರತಾ ಸಂಸ್ಥೆಗಳಿಗೆ ದೀರ್ಘಕಾಲದಿಂದ ಬೇಕಾಗಿದ್ದ ವ್ಯಕ್ತಿಯಾಗಿದ್ದ.

ಯಾರು ಈ ಬುರ್ಹಾನ್ ಹಮ್ಜಾ?
ಅರ್ಜಮಂದ್‌ ಗುಲ್ಜಾರ್ (ಬುರ್ಹಾನ್ ಹಮ್ಜಾ) ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರತ್ನಿಪೋರಾ ಮೂಲದವನಾಗಿದ್ದಾನೆ. ಸುಮಾರು ಏಳು ವರ್ಷಗಳ ಹಿಂದೆ ಈತ ಪಾಕಿಸ್ತಾನಕ್ಕೆ ಪಲಾಯನ ಮಾಡಿ, ಅಲ್ಲಿ ಅಲ್-ಬದ್ರ ಉಗ್ರ ಸಂಘಟನೆಯನ್ನು ಸೇರಿಕೊಂಡಿದ್ದ.
ದಕ್ಷಿಣ ಕಾಶ್ಮೀರ ಮತ್ತು ಪುಲ್ವಾಮಾದಲ್ಲಿ ಭಯೋತ್ಪಾದನೆಯನ್ನು ಹರಡುವಲ್ಲಿ ಈತನ ಪ್ರಮುಖ ಪಾತ್ರ ವಹಿಸಿದ್ದನ್ನು ಗಮನಿಸಿ, ಭಾರತದ ಗೃಹ ಸಚಿವಾಲಯವು 2022 ರಲ್ಲಿ ಈತನನ್ನು ‘ಭಯೋತ್ಪಾದಕ’ ಎಂದು ಘೋಷಿಸಿತ್ತು. ಭಾರತದ ಭದ್ರತಾ ಸಂಸ್ಥೆಗಳ ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿ ಈತನ ಹೆಸರಿತ್ತು.
ಗಡಿಯ ಆಚೆಯಿಂದಲೇ ಕಾಶ್ಮೀರದಲ್ಲಿ ನೇಮಕಾತಿ, ಹಣಕಾಸು ನೆರವು ಮತ್ತು ಶಸ್ತ್ರಾಸ್ತ್ರ ಪೂರೈಕೆಯ ಜಾಲವನ್ನು ನಡೆಸುತ್ತಿದ್ದ ಈತ, ಅಲ್-ಬದ್ರ ಭಯೋತ್ಪಾದಕ ಸಂಘಟನೆಯ ಆಪರೇಷನಲ್ ಕಮಾಂಡರ್ ಆಗಿ ಬೆಳೆದಿದ್ದ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

ಭದ್ರತಾ ಅಧಿಕಾರಿಗಳ ಪ್ರಕಾರ, ಈ ಹಿಂದೆ ಹತರಾಗಿದ್ದ ಉಗ್ರ ಬುರ್ಹಾನ್ ವಾನಿಯಂತೆಯೇ ಈತ ಕೂಡ ‘ಡಿಜಿಟಲ್ ರಾಡಿಕಲೈಸೇಶನ್’ (Digital Radicalisation) ಮಾದರಿಯನ್ನು ಬಳಸುತ್ತಿದ್ದ. ಸಾಮಾಜಿಕ ಮಾಧ್ಯಮಗಳು ಮತ್ತು ಸ್ಥಳೀಯ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ದಕ್ಷಿಣ ಕಾಶ್ಮೀರದ ಯುವಕರನ್ನು ಭಯೋತ್ಪಾದನೆಯತ್ತ ಸೆಳೆಯುವಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ.
ಈತನ ಭಯೋತ್ಪಾದಕ ಜಾಲವು ಪುಲ್ವಾಮಾ, ಶೋಪಿಯಾನ್ ಮತ್ತು ಅವಂತಿಪೋರಾದಲ್ಲಿ ಸಕ್ರಿಯವಾಗಿತ್ತು. ಪಾಕಿಸ್ತಾನದಲ್ಲೇ ಕುಳಿತು ಭಾರತದಲ್ಲಿದ್ದ ಓವರ್‌ಗ್ರೌಂಡ್ ವರ್ಕರ್ಸ್ (OGW) ಮೂಲಕ ಶಸ್ತ್ರಾಸ್ತ್ರಗಳು, ಹಣ ಮತ್ತು ಸೂಚನೆಗಳನ್ನು ರವಾನಿಸುತ್ತಿದ್ದ. ಗ್ರೆನೇಡ್ ದಾಳಿಗಳು ಮತ್ತು ಉಗ್ರರ ನೇಮಕಾತಿಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ಈತನ ಹೆಸರು ಕೇಳಿಬಂದಿತ್ತು.

ಭಯೋತ್ಪಾದಕ ಸಂಘಟನೆಗಳಿಗೆ ಭಾರಿ ಹಿನ್ನಡೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೆಲೆಗಳಿಂದ ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಭಯೋತ್ಪಾದನೆಯನ್ನು ಮರುಜೀವಗೊಳಿಸಲು ಯತ್ನಿಸುತ್ತಿದ್ದ ಉಗ್ರ ಸಂಘಟನೆಗಳಿಗೆ ಬುರ್ಹಾನ್ ಹಮ್ಜಾ ಸಾವು ಭಾರಿ ಹಿನ್ನಡೆಯನ್ನುಂಟು ಮಾಡಿದೆ ಎಂದು ಭದ್ರತಾ ಮೂಲಗಳು ಖಚಿತಪಡಿಸಿವೆ.
2023 ರಿಂದೀಚೆಗೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಲಷ್ಕರ್-ಎ-ತೊಯ್ಬಾ (LeT), ಜೈಶ್-ಎ-ಮೊಹಮ್ಮದ್ (JeM) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಉಗ್ರ ಸಂಘಟನೆಗಳ 50 ಕ್ಕೂ ಹೆಚ್ಚು ಕಮಾಂಡರ್‌ಗಳನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ.
ಏಪ್ರಿಲ್‌ನಲ್ಲಿ ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯ ಕಮಾಂಡರ್ ಹಾಗೂ ಉಗ್ರ ಹಫೀಜ್ ಸಯೀದ್‌ನ ಆಪ್ತನಾಗಿದ್ದ ಶೇಖ್ ಯೂಸುಫ್ ಅಫ್ರಿದಿಯನ್ನು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದರು.
ಮಾರ್ಚ್‌ನಲ್ಲಿ ಲಷ್ಕರ್-ಎ-ತೊಯ್ಬಾ ಸಂಸ್ಥಾಪಕ ಸದಸ್ಯ ಹಾಗೂ ಮೋಸ್ಟ್ ವಾಂಟೆಡ್ ಉಗ್ರ ಅಮೀರ್ ಹಮ್ಜಾನನ್ನು ಪಾಕಿಸ್ತಾನದ ಲಾಹೋರ್‌ನ ಟಿವಿ ಸ್ಟೇಷನ್ ಹೊರಗಡೆ ಅಪರಿಚಿತ ಬಂದೂಕುಧಾರಿಯೊಬ್ಬ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದ. ಆದರೆ, ಆ ದಾಳಿಯಿಂದ ಅಮೀರ್ ಹಮ್ಜಾ ಬದುಕುಳಿದಿದ್ದ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement