ದೆಹಲಿ ಹೊಟೇಲ್‌ ಅಗ್ನಿ ದುರಂತ : ಐಸಿಯುನಲ್ಲಿದ್ದ ತಂದೆ ಸನಿಹ ಇರಲು ಹೊಟೇಲ್‌ನಲ್ಲಿ ತಂಗಿದ್ದ ಸಿಎ ಕುಟುಂಬದ 8 ಮಂದಿ ಸಾವು

ನವದೆಹಲಿ: ಇಲ್ಲಿನ ದಕ್ಷಿಣ ದೆಹಲಿಯ ಮಾಳವೀಯ ನಗರದ ಹೌಜ್ ರಾಣಿ ಪ್ರದೇಶದಲ್ಲಿರುವ ‘ಫ್ಲರಿಶ್ ಸ್ಟೇ’ (Flourish Stay) ಹೋಟೆಲ್‌ನಲ್ಲಿ ಬುಧವಾರ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಎಂಟು ಸದಸ್ಯರು ಸೇರಿದಂತೆ ಕನಿಷ್ಠ 21 ಜನರು ಜೀವಂತವಾಗಿ ದಹನವಾಗಿದ್ದಾರೆ. ಮೃತರ ಪೈಕಿ 12 ಮಂದಿ ವಿದೇಶಿ ಪ್ರಜೆಗಳಾಗಿದ್ದಾರೆ ಎಂದು ವರದಿಯಾಗಿದೆ.
ಗುರುಗ್ರಾಮದ ಸೆಕ್ಟರ್ 46 ರ ನಿವಾಸಿಯಾದ ಚಾರ್ಟರ್ಡ್ ಅಕೌಂಟೆಂಟ್ ವಿವೇಕ ಅಗರ್ವಾಲ್ ಎಂಬವರು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ತಂದೆಯನ್ನು ನೋಡಿಕೊಳ್ಳಲು ಕುಟುಂಬದೊಂದಿಗೆ ದೆಹಲಿಯ ಈ ಹೊಟೇಲ್‌ಗೆ ಬಂದಿದ್ದರು. ವಿವೇಕ ಅವರೊಂದಿಗೆ ಅವರ ಪತ್ನಿ ತರ್ಜನಿ ಅಗರ್ವಾಲ್, ಪುತ್ರಿಯರಾದ ಜಿವಿಶಾ ಮತ್ತು ವಾರ್ಯ ಹಾಗೂ ಇತರ ನಾಲ್ವರು ಸಂಬಂಧಿಕರು ಇದ್ದರು.
ತಂಗಲು ವಿವೇಕ ಅವರು ಈ ಹೋಟೆಲ್‌ನಲ್ಲಿ ಎರಡು ಕೊಠಡಿಗಳನ್ನು ಕಾಯ್ದಿರಿಸಿದ್ದರು. ಬುಧವಾರ ಬೆಳಿಗ್ಗೆ ಇಡೀ ಕುಟುಂಬ ಹೋಟೆಲ್‌ನ ರೆಸ್ಟೋರೆಂಟ್‌ನಲ್ಲಿ ಉಪಾಹಾರ ಸೇವಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ದುರದೃಷ್ಟವಶಾತ್, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕುಟುಂಬದ ಎಂಟೂ ಸದಸ್ಯರು ಮೃತಪಟ್ಟಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿವೇಕ ಅವರ 80 ವರ್ಷದ ವೃದ್ಧ ತಂದೆ ರಾಧೆ ಶ್ಯಾಮ ಅಗರ್ವಾಲ್ ಮಾತ್ರ ಈ ಕುಟುಂಬದಲ್ಲಿ ಬದುಕುಳಿದ ಏಕೈಕ ಸದಸ್ಯರಾಗಿದ್ದಾರೆ.

ವಿವೇಕ ಅವರ ತಂದೆ ರಾಧೆ ಶ್ಯಾಮ ಅಗರ್ವಾಲ್ ಅವರು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಇಡೀ ಕುಟುಂಬ ಈ ಹೋಟೆಲ್‌ನಲ್ಲಿ ತಂಗಿತ್ತು. ಆಸ್ಪತ್ರೆಗೆ ಹತ್ತಿರವಾಗಿರಲಿ,ಓಡಾಡಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿಯೇ ವಿವೇಕ ಅವರು ಈ ಹೋಟೆಲ್‌ನಲ್ಲಿ ಎರಡು ಕೊಠಡಿಗಳನ್ನು ಕಾಯ್ದಿರಿಸಿದ್ದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.
“ಮರಣೋತ್ತರ ಪರೀಕ್ಷೆಯ ನಂತರ ನಾಳೆ ಮೃತದೇಹಗಳು ಮನೆಗೆ ಬರಲಿವೆ ಎಂದು ನಮಗೆ ತಿಳಿಸಲಾಗಿದೆ. ನಾವೆಲ್ಲರೂ ತೀವ್ರ ಆಘಾತದಲ್ಲಿದ್ದೇವೆ” ಎಂದು ಅವರ ಅಕ್ಕಪಕ್ಕದವಾರದ ಯೋಗೇಂದರ ಸಿಂಗ್ ಹೇಳಿದ್ದಾರೆ. ವಿವೇಕ ಅವರು ಖಾಸಗಿ ಸಂಸ್ಥೆಯೊಂದರಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ಅವರ ಪತ್ನಿ ಎನ್‌ಜಿಒ (NGO) ಮೂಲಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಮತ್ತೊಬ್ಬ ನೆರೆಹೊರೆಯವರಾದ ಧುಲ್ ಅವರು, ಈ ಕುಟುಂಬವು ಅತ್ಯಂತ ಆತ್ಮೀಯ ಹಾಗೂ ಎಲ್ಲರನ್ನೂ ಪ್ರೀತಿಸುವ ಸ್ವಭಾವದವರಾಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ. “ಇಡೀ ಕುಟುಂಬವೇ ಬೆಂಕಿ ಅವಘಡದಲ್ಲಿ ಮೃತಪಟ್ಟಿದೆ ಎಂಬುದನ್ನು ನಮ್ಮಲ್ಲಿ ಯಾರಿಗೂ ನಂಬಲು ಸಾಧ್ಯವಾಗುತ್ತಿಲ್ಲ. ವಿವೇಕ ಒಳ್ಳೆಯ ಸ್ವಭಾವದವರಾಗಿದ್ದರು ಮತ್ತು ಅವರ ಕುಟುಂಬದವರು ನೆರೆಹೊರೆಯ ಎಲ್ಲರೊಂದಿಗೂ ಸ್ನೇಹಪರವಾಗಿದ್ದರು” ಎಂದು ಅವರು ನೆನಪಿಸಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ಹೋಟೆಲ್‌ನಲ್ಲಿ ಅಗ್ನಿ ಅವಘಡ : 21 ಮಂದಿ ಸಾವು ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಧುಮುಕಿದ ಇಬ್ಬರು ಮಹಿಳೆಯರು

ಈ ಮಹಾ ದುರಂತವು ವೃದ್ಧ ರಾಧೆ ಶ್ಯಾಮ ಅಗರ್ವಾಲ್ ಅವರನ್ನು ತಮ್ಮ ಕುಟುಂಬದ ಏಕೈಕ ಬದುಕುಳಿದ ಸದಸ್ಯರನ್ನಾಗಿ ಮಾಡಿದೆ. ಆಸ್ಪತ್ರೆಯಲ್ಲಿದ್ದ ಅಜ್ಜನನ್ನು ನೋಡಲೆಂದೇ ವಿವೇಕ ಅವರ ಪುತ್ರಿಯರಲ್ಲಿ ಒಬ್ಬರು ಕೇವಲ ಒಂದು ದಿನ ಮೊದಲು ಬೆಂಗಳೂರಿನಿಂದ ಬಂದು ಈ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಬೆಂಕಿ ಹೊತ್ತಿ ಉರಿಯುತ್ತಿದ್ದಾಗ ವಿವೇಕ ಅವರ ಜೊತೆ ಫೋನ್‌ನಲ್ಲಿ ಮಾತನಾಡಿದ್ದನ್ನು ಅವರ ಸಂಬಂಧಿ ಪುನೀತ ಗುಪ್ತಾ ನೆನಪಿಸಿಕೊಂಡಿದ್ದಾರೆ. “ಅವರು ನನಗೆ ಫೋನ್ ಮಾಡಿ, ‘ಬ್ರದರ್‌, ಬಹುಶಃ ನಾವು ಬದುಕುಳಿಯುವುದಿಲ್ಲ ಅನಿಸುತ್ತದೆ’ ಎಂದರು. ನಾನು ಅವರಿಗೆ ಕರವಸ್ತ್ರವನ್ನು (Handkerchief) ಒದ್ದೆ ಮಾಡಿ ಮುಖಕ್ಕೆ ಮುಚ್ಚಿಕೊಳ್ಳಿ ಎಂದು ಹೇಳಿದೆ, ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ.ನಾವು ಅಲ್ಲಿಗೆ ತಲುಪುವಷ್ಟರಲ್ಲಿ ಅವರೆಲ್ಲರೂಸಾವಿಗೀಡಾಗಿದ್ದರು” ಎಂದು ಗುಪ್ತಾ ಕಣ್ಣೀರು ಹಾಕಿದ್ದಾರೆ.
ಈ ಭೀಕರ ಘಟನೆಯಿಂದಾಗಿ ಗುರುಗ್ರಾಮದ ಸೆಕ್ಟರ್ 46 ರಲ್ಲಿರುವ ವಿವೇಕ ಅವರ ಮನೆ ಸದ್ಯ ಶೂನ್ಯವಾಗಿದ್ದು, ಇಡೀ ಪ್ರದೇಶವೇ ತೀವ್ರ ಶೋಕ ಸಾಗರದಲ್ಲಿ ಮುಳುಗಿದೆ.
ಹೋಟೆಲ್‌ನಲ್ಲಿದ್ದ ಸುರಕ್ಷತಾ ಕ್ರಮಗಳ ಬಗ್ಗೆಯೂ ಕುಟುಂಬದ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಹೋಟೆಲ್‌ನಲ್ಲಿ ಸೂಕ್ತ ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳಿದ್ದವೇ ಎಂದು ಪ್ರಶ್ನಿಸಿರುವ ಪುನೀತ ಗುಪ್ತಾ, ಹೋಟೆಲ್ ಕಿರಿದಾದ ಗಲ್ಲಿಯೊಳಗೆ ಇದ್ದಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ತೊಂದರೆಯಾಗಿರಬಹುದು ಎಂದು ಹೇಳಿದ್ದಾರೆ.

ಡಿಎನ್‌ಎ ಪರೀಕ್ಷೆಯ ನಂತರವಷ್ಟೇ ಮೃತದೇಹಗಳ ಹಸ್ತಾಂತರ:
ವಿಷಯ ತಿಳಿಯುತ್ತಿದ್ದಂತೆ ವಿವೇಕ ಅವರ ಇತರ ಸಂಬಂಧಿಕರು ಮೃತದೇಹಗಳನ್ನು ಪಡೆಯಲು ಆಸ್ಪತ್ರೆಗೆ ಧಾವಿಸಿದ್ದಾರೆ. ಆದರೆ, ಬೆಂಕಿಯ ತೀವ್ರತೆಗೆ ದೇಹಗಳು ಗುರುತು ಸಿಗದಷ್ಟು ಸುಟ್ಟುಹೋಗಿರುವುದರಿಂದ, ಡಿಎನ್‌ಎ (DNA) ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದ ನಂತರವಷ್ಟೇ ಮೃತದೇಹಗಳನ್ನು ವಾರಸುದಾರರಿಗೆ ಒಪ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡದ ನಿಯಮಗಳ ಘೋರ ಉಲ್ಲಂಘನೆ
ಭಾನುವಾರ ಬೆಳಿಗ್ಗೆ ಸುಮಾರು 8:30 ರ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಐದು ಅಂತಸ್ತಿನ ಕಿರಿದಾದ ಕಟ್ಟಡದಲ್ಲಿ ಅತ್ಯಂತ ವೇಗವಾಗಿ ಹರಡಿತು. ಬೆಂಕಿ ಹೊತ್ತಿಕೊಂಡಾಗ ಸುಮಾರು 40 ಕ್ಕೂ ಹೆಚ್ಚು ಅತಿಥಿಗಳು ಹೋಟೆಲ್‌ನಲ್ಲಿದ್ದರು ಮತ್ತು ಅವರಲ್ಲಿ ಹೆಚ್ಚಿನವರು ನಿದ್ರೆಯಲ್ಲಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ಬಂಗಾಳ ರಾಜಕೀಯದಲ್ಲಿ ಸುನಾಮಿ ; ದೀದಿಗೆ ಬಿಗ್ ಶಾಕ್ : ಟಿಂಎಂಸಿ ಶಾಸಕರ ಬೆಂಬಲದಿಂದಲೇ ವಿಧಾನಸಭೆ ವಿಪಕ್ಷದ ನಾಯಕನಾದ ಉಚ್ಚಾಟಿತ ಶಾಸಕ..!

ದೆಹಲಿ ಪೊಲೀಸರ ತನಿಖೆಯ ಪ್ರಕಾರ, ಈ ಹೋಟೆಲ್‌ನಲ್ಲಿ ಸುರಕ್ಷತಾ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿತ್ತು.ಇಡೀ ಐದು ಅಂತಸ್ತಿನ ಕಟ್ಟಡಕ್ಕೆ ಪ್ರವೇಶಿಸಲು ಮತ್ತು ಹೊರಹೋಗಲು ಕೇವಲ ಒಂದೇ ಒಂದು ದಾರಿ ಇತ್ತು. ಕಟ್ಟಡದ ಕಿಟಕಿಗಳನ್ನು ಮುಚ್ಚಿ ಸೀಲ್ ಮಾಡಲಾಗಿತ್ತು. ಇದರಿಂದಾಗಿ ಹೊಗೆ ಹೊರಹೋಗಲು ದಾರಿಯಿರಲಿಲ್ಲ. ಹೋಟೆಲ್‌ನ ಮುಖ್ಯ ದ್ವಾರವು ಸೆನ್ಸರ್ ಮೂಲಕ ಸ್ವಯಂಚಾಲಿತವಾಗಿ ತೆರೆಯುವುದು ಹಾಗೂ ಮುಚ್ಚುವುದನ್ನು ಮಾಡುತ್ತಿತ್ತು. ಆದರೆ ಬೆಂಕಿ ಹರಡಿ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಬಾಗಿಲುಗಳು ಬಂದ್ ಆಗಿ, ಅತಿಥಿಗಳಿಗೆ ಹೊರಬರಲು ಯಾವುದೇ ಮಾರ್ಗವಿಲ್ಲದಂತಾಯಿತು. ಕಿಟಕಿ, ಬಾಗಿಲುಗಳಿಲ್ಲದೆ ಕಂಗಾಲಾದ ವಿದೇಶಿ ಪ್ರಜೆಯೊಬ್ಬರು ಪ್ರಾಣ ಉಳಿಸಿಕೊಳ್ಳಲು ಹೋಟೆಲ್‌ನ ಮೇಲ್ಛಾವಣಿಗೆ ನೇತಾಡುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
6 ರೂಮ್‌ಗಳ ಅನುಮತಿ ಪಡೆದು 25 ರೂಮ್‌ಗಳ ವ್ಯವಹಾರ !
ದೆಹಲಿ ಸರ್ಕಾರದ ‘ಬೆಡ್ ಅಂಡ್ ಬ್ರೇಕ್‌ಫಾಸ್ಟ್’ ಯೋಜನೆಯಡಿ ಈ ಹೋಟೆಲ್‌ಗೆ ಕೇವಲ ಗರಿಷ್ಠ 6 ಕೊಠಡಿಗಳನ್ನು ಮಾತ್ರ ನಡೆಸಲು ಪರವಾನಗಿ ನೀಡಲಾಗಿತ್ತು. ಆದರೆ, ನಿಯಮಗಳನ್ನು ಉಲ್ಲಂಘಿಸಿ ಹೋಟೆಲ್‌ನ ಬೇಸ್‌ಮೆಂಟ್ (ನೆಲಮಹಡಿ) ಸೇರಿದಂತೆ ಒಟ್ಟು 25 ಕೊಠಡಿಗಳನ್ನು ಅಕ್ರಮವಾಗಿ ನಿರ್ಮಿಸಿ ಗ್ರಾಹಕರಿಗೆ ಬಾಡಿಗೆಗೆ ನೀಡಲಾಗುತ್ತಿತ್ತು ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement