ಅಣ್ಣಾಮಲೈ ಹೊಸ ರಾಜಕೀಯ ಆಂದೋಲನ ಘೋಷಣೆಯಾದ 24 ಗಂಟೆಯೊಳಗೆ 14 ಲಕ್ಷ ಜನ ಸೇರ್ಪಡೆ…!

 ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಭಾರಿ ಬೆಳವಣಿಗೆಯೊಂದು ನಡೆದಿದ್ದು, ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಜೂನ್ 5 ರಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಹೊರಬಂದಿದ್ದಾರೆ. ಪಕ್ಷ ತೊರೆದ ಬೆನ್ನಲ್ಲೇ ಅವರು ತಮ್ಮದೇ ಆದ ಹೊಸ ರಾಜಕೀಯ ಆಂದೋಲನವನ್ನು ಘೋಷಿಸಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ ಸುಮಾರು 14 ಲಕ್ಷಕ್ಕೂ ಹೆಚ್ಚು ಜನರು ಈ ಆಂದೋಲನಕ್ಕೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ಅಣ್ಣಾಮಲೈ ಹಾಗೂ ತಮಿಳುನಾಡಿನ ಬಿಜೆಪಿ ನಾಯಕರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದವು. ಶುಕ್ರವಾರ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದು, ಪಕ್ಷದ ಮುಖ್ಯಸ್ಥ ನಿತಿನ್ ನಬಿನ್ ಅವರು ಈ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ರಾಜೀನಾಮೆ ಪತ್ರದಲ್ಲಿ ಏನಿದೆ?
ತಮ್ಮ ರಾಜೀನಾಮೆ ಪತ್ರದಲ್ಲಿ ಅಣ್ಣಾಮಲೈ ಅವರು ತಮಿಳುನಾಡು ಬಿಜೆಪಿಯ ಹಿರಿಯ ನಾಯಕರ ಜೊತೆಗಿನ ಭಿನ್ನಾಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. “ಕಳೆದ 18 ತಿಂಗಳುಗಳಿಂದ ಪಕ್ಷದ ಉನ್ನತ ನಾಯಕತ್ವದೊಂದಿಗೆ ನಾನು ನಡೆಸಿದ ಸುದೀರ್ಘ ಮಾತುಕತೆಗಳು ಮತ್ತು ಹಲವು ವಿಷಯಗಳಲ್ಲಿ ನಾನು ವ್ಯಕ್ತಪಡಿಸಿದ ಭಿನ್ನಾಭಿಪ್ರಾಯಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ. ತಮಿಳುನಾಡಿನಲ್ಲಿ ಅಭಿವೃದ್ಧಿ ಆಧಾರಿತ ಮತ್ತು ಸಾಂಸ್ಕೃತಿಕವಾಗಿ ಬೇರೂರಿರುವ ರಾಜಕಾರಣದ ಮುಂದಿನ ಹಾದಿಯ ಬಗ್ಗೆ ನನಗಿರುವ ಆಲೋಚನೆಗಳಿಂದಾಗಿ ನಾನು ಪಕ್ಷದ ಉನ್ನತ ನಾಯಕತ್ವಕ್ಕೆ ಮತ್ತಷ್ಟು ಹೊರೆಯಾಗಲು ಬಯಸುವುದಿಲ್ಲ. ಹಿರಿಯ ನಾಯಕರೊಂದಿಗೆ ಚರ್ಚಿಸಿದ ನಂತರ, ತಮಿಳುನಾಡಿನ ರಾಜಕೀಯದ ಕುರಿತು ನಮ್ಮ ಮತ್ತು ಪಕ್ಷದ ನಾಯಕರ ದೃಷ್ಟಿಕೋನಗಳು ಪರಸ್ಪರ ಹೊಂದಾಣಿಕೆಯಾಗುತ್ತಿಲ್ಲ ಎಂಬ ತೀರ್ಮಾನಕ್ಕೆ ನಾನು ಬಂದಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ನಾಗರಿಕ ಸೇವೆಯನ್ನು ತೊರೆದು 2020 ರಲ್ಲಿ ಬಿಜೆಪಿ ಸೇರಿದ್ದರು. ಪಕ್ಷ ಸೇರಿದ ಕೆಲವೇ ವಾರಗಳಲ್ಲಿ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಆ ಬಳಿಕ ಕೇವಲ ಒಂದು ವರ್ಷದಲ್ಲಿ, ಅಂದರೆ ತಮ್ಮ 37ನೇ ವಯಸ್ಸಿನಲ್ಲಿಯೇ ಅವರು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿ ನಿಯುಕ್ತರಾಗಿದ್ದರು.
ಜನಸಾಮಾನ್ಯರ ಚಳವಳಿ: ‘ವಿ ದ ಲೀಡರ್ಸ್’
ತಮ್ಮ ಮುಂದಿನ ಹೆಜ್ಜೆಯನ್ನು “ಸಾರ್ವಜನಿಕ ಜೀವನ ಮತ್ತು ರಾಜಕೀಯ ಪ್ರಯಾಣದ ಮುಂದಿನ ಹಂತ” ಎಂದು ಬಣ್ಣಿಸಿರುವ ಅಣ್ಣಾಮಲೈ, ಯುವಕರು ಮತ್ತು ಸಾಮಾನ್ಯ ನಾಗರಿಕರು ತಮ್ಮ ಬೆನ್ನಿಗೆ ನಿಲ್ಲುವಂತೆ ಕರೆ ನೀಡಿದ್ದಾರೆ.
“ಜನಸಾಮಾನ್ಯನೊಬ್ಬ ರಾಜಕೀಯಕ್ಕೆ ಪ್ರವೇಶಿಸುವುದು ದೊಡ್ಡ ವಿಷಯ. ನಾವು ‘ಜನಕೇಂದ್ರಿತ ರಾಜಕಾರಣ’ವನ್ನು ನಿರ್ಮಿಸಲು ಬಯಸುತ್ತೇವೆ ಮತ್ತು ಸದಾಕಾಲ ಅವರೇ ಶಾಸಕರು, ಸಂಸದರಾಗಿ ಮುಂದುವರಿಯುವ ‘ಕಾಯಂ ಶಾಸಕ-ಸಂಸದ’ ಸಂಸ್ಕೃತಿಗೆ ಮುಕ್ತಾಯ ಹಾಡಲಿದ್ದೇವೆ. ನಾವು ರಾಜಕಾರಣವನ್ನು ಜನರ ಬಳಿಗೆ ಕೊಂಡೊಯ್ಯಲು ಬಯಸುತ್ತೇವೆ” ಎಂದು ಅವರು ಹೇಳಿದ್ದಾರೆ.
ತಮ್ಮ ಹೊಸ ಸಂಘಟನೆಯನ್ನು “ವೈಚಾರಿಕ ಸ್ಪಷ್ಟತೆ ಹೊಂದಿರುವ ಜನಸಾಮಾನ್ಯರ ರಾಜಕಾರಣ” ಎಂದು ಕರೆದಿರುವ ಅವರು, “ವ್ಯಕ್ತಿ ಪೂಜೆ (cult politics) ಮತ್ತು ವಂಶಪಾರಂಪರ್ಯ ರಾಜಕಾರಣವನ್ನು” ಕೊನೆಗಾಣಿಸಲು ಯುವಕರು ಕೈಜೋಡಿಸಬೇಕು ಎಂದು ವಿನಂತಿಸಿದ್ದಾರೆ. “ನಾವು ಬದಲಾವಣೆಯ ರಾಜಕಾರಣವನ್ನು ರೂಪಿಸುತ್ತಿದ್ದೇವೆ, ಮುಂದಿನ ಪೀಳಿಗೆಗೆ ಭದ್ರ ಬುನಾದಿ ಹಾಕುತ್ತಿದ್ದೇವೆ” ಎಂದು ಹೇಳಿರುವ ಅವರು, ಈ ಚಳವಳಿಯನ್ನು ಹಂತ-ಹಂತವಾಗಿ ಕಟ್ಟಲು “ತಾಳ್ಮೆ ಮತ್ತು ಸಂಯಮ” ಅಗತ್ಯವಿದೆ. ನಮ್ಮ ಗುರಿಗಳು ಈಗ ತುಂಬಾ ದೊಡ್ಡದಾಗಿವೆ. ನಿಜವಾದ ಬದಲಾವಣೆ ತರಬಲ್ಲ ರಾಜಕೀಯದ ಅಗತ್ಯತೆ ಈಗಿದೆ ಎಂದಿದ್ದಾರೆ.
24 ಗಂಟೆಯಲ್ಲಿ 14 ಲಕ್ಷ ಸದಸ್ಯರು !
ಅಣ್ಣಾಮಲೈ ಅವರ ಈ ಕರೆಗೆ ತಮಿಳುನಾಡು ಜನತೆಯಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಅವರ ಈ ಹೊಸ ಚಳವಳಿಯ ವೆಬ್‌ಸೈಟ್ ಆದ “ವಿ ದ ಲೀಡರ್ಸ್” (We The Leaders) ನಲ್ಲಿ 14 ಲಕ್ಷ ಸಕ್ರಿಯ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ.
ಸ್ವಯಂಸೇವಕರಿಗೆ ಕರೆ ನೀಡಿರುವ ವೆಬ್‌ಸೈಟ್ ಸಂದೇಶದಲ್ಲಿ, “ಸ್ವಯಂಸೇವಕರು ನಮ್ಮ ಚಳವಳಿಯ ಜೀವಾಳ. ಅವರು ಸಮುದಾಯಗಳನ್ನು ಸಬಲೀಕರಣಗೊಳಿಸುತ್ತಾರೆ, ನಾಯಕತ್ವವನ್ನು ಬೆಳೆಸುತ್ತಾರೆ ಮತ್ತು ತಳಮಟ್ಟದಲ್ಲಿ ನಿಜವಾದ ಬದಲಾವಣೆಯನ್ನು ತರುತ್ತಾರೆ. ಶಿಕ್ಷಣ, ಆರೋಗ್ಯ, ಪರಿಸರ ಅಥವಾ ಯುವ ನಾಯಕತ್ವ ಆಗಿರಲಿ — ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಅವಕಾಶಗಳನ್ನು ಕಂಡುಕೊಳ್ಳಿ. ಒಂದು ಸಣ್ಣ ಸ್ಥಳೀಯ ಉಪಕ್ರಮದೊಂದಿಗೆ ಪ್ರಾರಂಭಿಸಿ ಮತ್ತು ನಾಳಿನ ದಿನವನ್ನು ಉತ್ತಮಗೊಳಿಸಲು ನಮ್ಮೊಂದಿಗೆ ಕೈಜೋಡಿಸಿ” ಎಂದು ಉಲ್ಲೇಖಿಸಲಾಗಿದೆ.
ಲೋಕಸಭಾ ಚುನಾವಣೆಯೇ ಮುಂದಿನ ಟಾರ್ಗೆಟ್
ತಮ್ಮ ಹೊಸ ಚಳವಳಿಯು ತಮಿಳುನಾಡಿನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಅಣ್ಣಾಮಲೈ ಖಚಿತಪಡಿಸಿದ್ದಾರೆ. ಭವಿಷ್ಯಕ್ಕಾಗಿ “ಹಲವು ಹೊಸ ನಾಯಕರನ್ನು” ಸಿದ್ಧಪಡಿಸಲು ಈ ವೇದಿಕೆ ಕೆಲಸ ಮಾಡಲಿದೆ ಎಂದಿರುವ ಅವರು, ಸಾಂಪ್ರದಾಯಿಕ ಪಕ್ಷಗಳಿಗಿಂತ ಭಿನ್ನವಾಗಿ ಜನಸಾಮಾನ್ಯರಿಂದ ನಿಯಂತ್ರಿಸಲ್ಪಡುವ ರಾಜಕಾರಣದ ಭರವಸೆ ನೀಡಿದ್ದಾರೆ.
“ತಮಿಳುನಾಡಿನಲ್ಲಿ ಧನಾತ್ಮಕ ಬದಲಾವಣೆ ತರಲು ಮತ್ತು ರಾಜ್ಯದಲ್ಲಿ ರಾಜಕೀಯ ನಡೆಸುವ ವಿಧಾನವನ್ನು ಸುಧಾರಿಸಲು ನಾನು ಆರು ವರ್ಷಗಳ ಹಿಂದೆ ರಾಜಕೀಯಕ್ಕೆ ಬಂದೆ. ರಾಜಕೀಯ ಎನ್ನುವುದು ಕೇವಲ ಗಣ್ಯರು ಮತ್ತು ಆಯ್ದ ಕೆಲವರಿಗೆ ಮಾತ್ರ ಸೀಮಿತವಾದ ಹಾದಿ, ಜನಸಾಮಾನ್ಯರಿಗಲ್ಲ ಎಂಬ ಕಲ್ಪನೆಯನ್ನು ನಾನು ಬದಲಾಯಿಸಲು ಬಯಸಿದ್ದೆ. ದಯವಿಟ್ಟು ನನ್ನೊಂದಿಗೆ ಕೈಜೋಡಿಸಿ, ನನ್ನನ್ನು ನಂಬಿ ಮತ್ತು ನನ್ನ ಮೇಲೆ ವಿಶ್ವಾಸವಿಡಿ” ಎಂದು ತಮಿಳುನಾಡು ಜನತೆಯಲ್ಲಿ ಅಣ್ಣಾಮಲೈ ಭಾವನಾತ್ಮಕ ಮನವಿ ಮಾಡಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement