
ನವದೆಹಲಿ : 2026ರ ನೀಟ್ (NEET-UG) ಮರುಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ತಪ್ಪುಮಾಹಿತಿ ಹರಡುವುದನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಟೆಲಿಗ್ರಾಂ ಮೆಸೆಜಿಂಗ್ ಪ್ಲಾಟ್ಫಾರ್ಮ್ (messaging platform) ಜೂನ್ 22ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಕ್ರಮವನ್ನುಪ್ರಶ್ನಿಸಿ ಟೆಲಿಗ್ರಾಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರು ತೀರ್ಪು ಪ್ರಕಟಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಸೆಕ್ಷನ್ 69A ಅಡಿಯಲ್ಲಿ ವೇದಿಕೆಗೆ ಪ್ರವೇಶ ನಿರ್ಬಂಧಿಸುವ ವೇಳೆ ಕೇಂದ್ರ ಸರ್ಕಾರ ಅನುಸರಿಸಿದ ಪ್ರಕ್ರಿಯೆ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಮರ್ಪಕವಾಗಿತ್ತು ಎಂದು ಅಭಿಪ್ರಾಯಪಟ್ಟರು. ಕಾರಣಗಳನ್ನು ಸಮರ್ಪಕವಾಗಿ ಒದಗಿಸಿಲ್ಲ ಎಂಬ ಟೆಲಿಗ್ರಾಂನ ವಾದವನ್ನೂ ನ್ಯಾಯಾಲಯ ತಳ್ಳಿಹಾಕಿತು ಎಂದು ಲೈವ್ ಲಾ ವರದಿ ಮಾಡಿದೆ.
ನೀಟ್ 2026 ಮರುಪರೀಕ್ಷೆ ಜೂನ್ 21ರಂದು ನಡೆಯಲಿದ್ದು, ಅದರ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯ ಕುರಿತ ಸುಳ್ಳು ಮಾಹಿತಿಯ ಹರಡುವಿಕೆ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ವಾದಿಸಿತ್ತು.
ಅದೇ ವೇಳೆ, ಟೆಲಿಗ್ರಾಂನ ಸಂದೇಶ ಎಡಿಟಿಂಗ್ (Message Editing) ವೈಶಿಷ್ಟ್ಯವನ್ನು ಜೂನ್ 30ರವರೆಗೆ ಸ್ಥಗಿತಗೊಳಿಸುವ ಕೇಂದ್ರದ ಆದೇಶಕ್ಕೂ ನ್ಯಾಯಾಲಯ ಅನುಮೋದನೆ ನೀಡಿದೆ ಎಂದು ವರದಿ ಹೇಳಿದೆ.
ಸೆಕ್ಷನ್ 69A ಅಡಿಯಲ್ಲಿ ಸಂಪೂರ್ಣ ವೇದಿಕೆಯನ್ನು ನಿರ್ಬಂಧಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಅಲ್ಲದೆ, ಈ ಕ್ರಮವು “ಅಗತ್ಯ ಹಾಗೂ ಅತ್ಯಂತ ಕಡಿಮೆ ನಿರ್ಬಂಧಕಾರಿ (Least Restrictive)” ಮಾರ್ಗವಾಗಿದ್ದು, ಅನುಪಾತಿತ್ವದ (Proportionality) ಮಾನದಂಡಗಳನ್ನು ಪೂರೈಸಿದೆ ಎಂದು ಹೇಳಿತು.
ಟೆಲಿಗ್ರಾಂನ ವಿಶೇಷ ತಾಂತ್ರಿಕ ವೈಶಿಷ್ಟ್ಯಗಳಾದ ಲಕ್ಷಾಂತರ ಸದಸ್ಯರನ್ನು ಹೊಂದಬಹುದಾದ ಸಾರ್ವಜನಿಕ ಚಾನೆಲ್ಗಳು, ಮಾನವ ಹಸ್ತಕ್ಷೇಪವಿಲ್ಲದೆ ಮಾಹಿತಿ ಹರಡಬಲ್ಲ ಬಾಟ್ಗಳು, ಬಳಕೆದಾರರ ದೂರವಾಣಿ ಸಂಖ್ಯೆಯನ್ನು ಮರೆಮಾಚುವ ವ್ಯವಸ್ಥೆ, ಯಾವುದೇ ಸಮಯ ಮಿತಿಯಿಲ್ಲದೆ ಸಂದೇಶಗಳನ್ನು ಎಡಿಟ್ ಮಾಡುವ ಅವಕಾಶ ಇರುವುದು ತಪ್ಪುಮಾಹಿತಿ ಹರಡುವ ಸಾಧನಗಳಾಗಿ ಬಳಸಲ್ಪಡುವ ಅಪಾಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಒಂದು ಚಾನೆಲ್ ತೆಗೆದುಹಾಕಿದರೂ ಅದನ್ನು ಸುಲಭವಾಗಿ ಮರುಸೃಷ್ಟಿಸಬಹುದು. ಹೀಗಾಗಿ ಮೂಲ ಚಾನೆಲ್ ವಿರುದ್ಧ ಕ್ರಮ ಕೈಗೊಂಡ ಬಳಿಕವೂ ಅಕ್ರಮ ಚಟುವಟಿಕೆಗಳು ಅಲ್ಪಾವಧಿಯಲ್ಲೇ ಪುನರಾರಂಭವಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಗಮನಿಸಿತು.
ಮೆಸೇಜ್ ಎಡಿಟಿಂಗ್ ವೈಶಿಷ್ಟ್ಯ ದುರುಪಯೋಗದ ಸಾಧ್ಯತೆ
ಸಂದೇಶ ಎಡಿಟಿಂಗ್ ವೈಶಿಷ್ಟ್ಯ ಕುರಿತು ನ್ಯಾಯಾಲಯ ವಿಶೇಷವಾಗಿ ಆತಂಕ ವ್ಯಕ್ತಪಡಿಸಿತು. “ಟೆಲಿಗ್ರಾಂನಲ್ಲಿ ಸಂದೇಶಗಳು ಹಾಗೂ ಅವುಗಳಿಗೆ ಲಗತ್ತಿಸಲಾದ ಕಡತಗಳನ್ನು ನಂತರದ ಹಂತದಲ್ಲಿಯೂ ಎಡಿಟಿಂಗ್ ಮಾಡಬಹುದಾಗಿದೆ. ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಪರೀಕ್ಷೆಯ ನಂತರ ಕಡತವನ್ನು ಬದಲಾಯಿಸಿ, ಪ್ರಶ್ನೆಪತ್ರಿಕೆ ಪರೀಕ್ಷೆಗೂ ಮುನ್ನವೇ ಸೋರಿಕೆಯಾಗಿತ್ತು ಎಂಬ ತಪ್ಪು ಭಾವನೆ ಉಂಟುಮಾಡಬಹುದು. ಇಂತಹ ಕ್ರಮ ಸಾರ್ವಜನಿಕರನ್ನು ದಾರಿತಪ್ಪಿಸಿ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇದೆ” ಎಂದು ನ್ಯಾಯಾಲಯ ಹೇಳಿದೆ.
ತಾತ್ಕಾಲಿಕ ಹಾಗೂ ನಿರ್ದಿಷ್ಟ ಉದ್ದೇಶದ ಕ್ರಮ
ಟೆಲಿಗ್ರಾಂ ಮೇಲಿನ ನಿಷೇಧ ಕೇವಲ ತಾತ್ಕಾಲಿಕ ಕ್ರಮವಾಗಿದ್ದು, ನಿರ್ದಿಷ್ಟ ಉದ್ದೇಶ ಸಾಧನೆಗಾಗಿ “ಸೂಕ್ಷ್ಮವಾಗಿ ರೂಪುಗೊಂಡ” ಕ್ರಮವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಕ್ರಮವು ಸುಪ್ರೀಂ ಕೋರ್ಟ್ನ ‘ಅನುರಾಧಾ ಭಸಿನ್’ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಅನುಪಾತಿತ್ವದ ನಾಲ್ಕು ಮಾನದಂಡಗಳನ್ನು ಪೂರೈಸುತ್ತದೆ ಎಂದು ಹೇಳಿದೆ. ನ್ಯಾಯಸಮ್ಮತ ಉದ್ದೇಶದ ಗುರುತಿಸುವಿಕೆ, ಉದ್ದೇಶ ಮತ್ತು ಕೈಗೊಂಡ ಕ್ರಮದ ನಡುವೆ ತಾರ್ಕಿಕ ಸಂಬಂಧ, ಪರಿಸ್ಥಿತಿಗೆ ಅನುಗುಣವಾದ ಅಗತ್ಯತೆ, ಲಭ್ಯವಿರುವ ಅತ್ಯಂತ ಕಡಿಮೆ ನಿರ್ಬಂಧಕಾರಿ ಕ್ರಮದ ಅನುಸರಣೆ ಈ ಮಾನದಂಡಗಳನ್ನು ಪೂರೈಸಿದೆ ಎಂದು ಹೇಳಿದೆ.
ಟೆಲಿಗ್ರಾಂ ವಿರುದ್ಧದ ತಾತ್ಕಾಲಿಕ ನಿರ್ಬಂಧ ಆದೇಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಹಾಗೂ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆ ನೀಡಿದ ಶಿಫಾರಸುಗಳ ಆಧಾರದ ಮೇಲೆ ಜಾರಿಗೊಳಿಸಲಾಗಿದೆ.
ಟೆಲಿಗ್ರಾಂನ ವಾದ
ನೀಟ್ ಸಂಬಂಧಿತ ಕಾನೂನುಬಾಹಿರ ವಿಷಯಗಳ ವಿರುದ್ಧ ಟೆಲಿಗ್ರಾಂ ಈಗಾಗಲೇ ಸಕ್ರಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿತು. 900ಕ್ಕೂ ಹೆಚ್ಚು ಲಿಂಕ್ಗಳನ್ನು ತೆಗೆದುಹಾಕಲಾಗಿದ್ದು, ಕೃತಕ ಬುದ್ಧಿಮತ್ತೆ (AI) ಹಾಗೂ ಯಂತ್ರ ಕಲಿಕೆ (Machine Learning) ತಂತ್ರಜ್ಞಾನಗಳ ನೆರವಿನಿಂದ ಅನಧಿಕೃತ ಮಾಹಿತಿಯನ್ನು ಪತ್ತೆಹಚ್ಚಿ ಅಳಿಸುವ ಕಾರ್ಯ ನಡೆಯುತ್ತಿದೆ ಎಂದು ಅದು ತಿಳಿಸಿತು.
ಕೇಂದ್ರ ಸರ್ಕಾರದ ಪ್ರತಿವಾದ
ಆದರೆ, ಟೆಲಿಗ್ರಾಂನ ತಾಂತ್ರಿಕ ವಿನ್ಯಾಸವೇ ದೊಡ್ಡ ಪ್ರಮಾಣದಲ್ಲಿ ಸ್ವಯಂಚಾಲಿತ ಖಾತೆಗಳನ್ನು (Bots) ರಚಿಸಿ, ನಿರಂತರ ಮಾನವ ನಿಯಂತ್ರಣವಿಲ್ಲದೆ ಮಾಹಿತಿ ಪ್ರಸಾರ ಮಾಡಲು ಅವಕಾಶ ಮಾಡಿಕೊಡುತ್ತದೆ ಎಂದು ಕೇಂದ್ರ ಸರ್ಕಾರ ವಾದಿಸಿತು. “ಒಂದು ಬಾಟ್ ಅನ್ನು ನಿರ್ಬಂಧಿಸಿದರೂ ಅದು ಮತ್ತೊಂದು ಬಾಟ್ಗೆ ಸ್ವಯಂಚಾಲಿತವಾಗಿ ಸಂಪರ್ಕ ಹೊಂದುವ ‘ಮಿರರ್ ಚಾನೆಲ್’ ವ್ಯವಸ್ಥೆ ಮೂಲಕ ಕಾರ್ಯನಿರ್ವಹಿಸಬಹುದು” ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.
150 ಮಿಲಿಯನ್ ಬಳಕೆದಾರರ ಹಕ್ಕುಗಳ ಪ್ರಶ್ನೆ
ವಿಚಾರಣೆಯ ವೇಳೆ ನ್ಯಾಯಮೂರ್ತಿಗಳು, “ನೀಟ್ ಪರೀಕ್ಷೆ ಬರೆಯುವ ಒಂದು ವರ್ಗದ ನಾಗರಿಕರ ಹಿತಾಸಕ್ತಿಗಾಗಿ ಭಾರತದ 150 ಮಿಲಿಯನ್ಗಿಂತ ಹೆಚ್ಚು ಟೆಲಿಗ್ರಾಂ ಬಳಕೆದಾರರ ಹಕ್ಕುಗಳನ್ನು ನಿರ್ಬಂಧಿಸಬಹುದೇ?” ಎಂಬ ಪ್ರಶ್ನೆಯನ್ನು ಕೇಂದ್ರ ಸರ್ಕಾರಕ್ಕೆ ಮೌಖಿಕವಾಗಿ ಕೇಳಿದ್ದರು.



ನಿಮ್ಮ ಕಾಮೆಂಟ್ ಬರೆಯಿರಿ