ಪುಣೆ : ಮಹಾರಾಷ್ಟ್ರದ ಪುಣೆ ಜಿಲ್ಲೆಯ ನಸ್ರಾಪುರ ಗ್ರಾಮದಲ್ಲಿ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದಲ್ಲಿ 65 ವರ್ಷದ ಭೀಮರಾವ್ ಕಾಂಬ್ಳೆಗೆ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಅಪರಾಧ ನಡೆದ ಕೇವಲ 60 ದಿನಗಳೊಳಗೆ ತೀರ್ಪು ಪ್ರಕಟವಾಗಿದ್ದು, ಪರಿಸ್ಥಿತಿಜನ್ಯ ಸಾಕ್ಷ್ಯಗಳು ಹಾಗೂ ‘ಕೊನೆಯದಾಗಿ ಬಾಲಕಿಯೊಂದಿಗೆ ಕಂಡುಬಂದ ವ್ಯಕ್ತಿ’ (Last Seen Together) ಎಂಬ ಸಿದ್ಧಾಂತದ ಆಧಾರದ ಮೇಲೆ ಆರೋಪಿಯನ್ನು ನ್ಯಾಯಾಲಯ ದೋಷಿ ಎಂದು ಪರಗಣಿಸಿದೆ.
ಮೇ 1, 2026ರಂದು ನಡೆದ ಈ ಭೀಕರ ಘಟನೆಯಲ್ಲಿ, ತಾಯಿಯ ಮನೆಗೆ ಬಂದಿದ್ದ ಬಾಲಕಿಯನ್ನು ಭೀಮರಾವ್ ಕಾಂಬ್ಳೆ ಸಮೀಪದ ಜಾನುವಾರು ಕೊಟ್ಟಿಗೆಗೆ ಕರೆದೊಯ್ದು ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿತ್ತು. ಬಾಲಕಿ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದು, ಬಳಿಕ ಆಕೆಯ ಮೃತದೇಹ ಕೊಟ್ಟಿಗೆಯೊಳಗೆ ಪತ್ತೆಯಾಗಿತ್ತು.
ಈ ಘಟನೆ ನಸ್ರಾಪುರ ಸೇರಿದಂತೆ ಪುಣೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರೆ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು.
ಪ್ರಕರಣದ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಲಾಗಿತ್ತು. ಘಟನೆ ನಡೆದ ದಿನವೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕೇವಲ 16 ದಿನಗಳಲ್ಲಿ 1,200 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದರು. ಮೇ 28ರಂದು ನ್ಯಾಯಾಲಯ ಆರೋಪಗಳನ್ನು ರೂಪಿಸಿದ್ದು, ಜೂನ್ 20ರಂದು ಅಂತಿಮ ವಾದಗಳು ಪೂರ್ಣಗೊಂಡಿದ್ದವು. ಜೂನ್ 25ರಂದು ತೀರ್ಪು ಪ್ರಕಟಿಸಿದ ನ್ಯಾಯಾಲಯ, ಆರೋಪಿಯನ್ನು ದೋಷಿ ಎಂದು ಘೋಷಿಸಿತು.
ತನ್ನ ಆದೇಶದಲ್ಲಿ ನ್ಯಾಯಾಲಯ, ‘ಲಾಸ್ಟ್ ಸೀನ್ ಟುಗೆದರ್’ ಸಿದ್ಧಾಂತ ಮತ್ತು ಬಲವಾದ ಪರಿಸ್ಥಿತಿಜನ್ಯ ಸಾಕ್ಷ್ಯಗಳ ಮೂಲಕ ಆರೋಪಿಯ ಪಾತ್ರವನ್ನು ಅಭಿಯೋಜಕರು ಯಶಸ್ವಿಯಾಗಿ ಸಾಬೀತುಪಡಿಸಿದ್ದಾರೆ ಎಂದು ತಿಳಿಸಿದೆ.
ಪ್ರಕರಣವನ್ನು “ಅಪರೂಪದಲ್ಲೇ ಅಪರೂಪದ (Rarest of Rare)ಪ್ರಕರಣ” ಎಂದು ಪರಿಗಣಿಸಿದ ಹೆಚ್ಚುವರಿ ನ್ಯಾಯಾಧೀಶ ಎಸ್.ಆರ್. ಸಾಲುಂಖೆ, ಆರೋಪಿಯ ವಯಸ್ಸಿನ ಆಧಾರದ ಮೇಲೆ ಶಿಕ್ಷೆಯಲ್ಲಿ ವಿನಾಯಿತಿ ನೀಡುವಂತೆ ಮಾಡಿದ ಮನವಿಯನ್ನು ತಿರಸ್ಕರಿಸಿದರು. ಆರೋಪಿಯ ಹಿಂಸಾತ್ಮಕ ಹಿನ್ನೆಲೆ ಮತ್ತು ಕ್ರೌರ್ಯವು ನ್ಯಾಯಾಂಗ ಹಾಗೂ ಸಮಾಜದ ಮನಸ್ಸನ್ನೇ ಬೆಚ್ಚಿಬೀಳಿಸಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ಆರೋಪಿ ಸಮಾಜಕ್ಕೆ ಇನ್ನೂ ಅಪಾಯಕಾರಿಯಾಗಿದ್ದಾನೆ. ಪಶ್ಚಾತ್ತಾಪ ಅಥವಾ ಸುಧಾರಣೆಯ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಆತ ಸುಧಾರಣೆಯ ಎಲ್ಲ ಅವಕಾಶಗಳನ್ನು ಮೀರಿದ್ದಾನೆ” ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ಆರೋಪಿಯ ಪರ ವಕೀಲ ಹಿಮ್ಮತ್ ರಾವ್ ಸೂರ್ಯವಂಶಿ, ‘ಲಾಸ್ಟ್ ಸೀನ್ ಟುಗೆದರ್’ ಸಿದ್ಧಾಂತವನ್ನು ಖಚಿತವಾಗಿ ಸಾಬೀತುಪಡಿಸುವಂತಹ ನಿರ್ಣಾಯಕ ಸಾಕ್ಷ್ಯಗಳಿಲ್ಲ ಎಂದು ವಾದಿಸಿದರು. ಆರೋಪಿಯ ವಯಸ್ಸು, ಕುಟುಂಬ ಹಾಗೂ ಗ್ರಾಮಸ್ಥರಿಂದ ಸಾಮಾಜಿಕವಾಗಿ ದೂರವಾಗಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಮರಣದಂಡನೆ ಬದಲಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಇನ್ನೊಂದೆಡೆ, ಸರ್ಕಾರಿ ಪರ ವಕೀಲ ಅಜಯ ಮಿಸಾರ್, ಅಪರಾಧದ ಭೀಕರತೆ ಹಾಗೂ ಸಂತ್ರಸ್ತೆಯ ಅಲ್ಪ ವಯಸ್ಸನ್ನು ಉಲ್ಲೇಖಿಸಿ ಗರಿಷ್ಠ ಶಿಕ್ಷೆ ವಿಧಿಸುವಂತೆ ನ್ಯಾಯಾಲಯವನ್ನು ಕೋರಿದರು.


ನಿಮ್ಮ ಕಾಮೆಂಟ್ ಬರೆಯಿರಿ