ವಿಜಯ ಸರ್ಕಾರ ಉರುಳಿಸಲು ಡಿಎಂಕೆ ಸಂಚು ? ಟಿವಿಕೆಯಿಂದ ಶಾಸಕರಿಗೆ ₹35 ಕೋಟಿ ಆಮಿಷದ ಆರೋಪ ; ಮೂವರ ಬಂಧನ

ಚೆನ್ನೈ: ವಿಜಯ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಎರಡು ತಿಂಗಳು ಕೂಡ ಪೂರ್ಣಗೊಳ್ಳುವ ಮುನ್ನವೇ ರಾಜ್ಯ ರಾಜಕೀಯದಲ್ಲಿ ಕುದುರೆ ವ್ಯಾಪಾರ (ಹಾರ್ಸ್ ಟ್ರೇಡಿಂಗ್) ಆರೋಪದ ವಿವಾದ ಭುಗಿಲೆದ್ದಿದೆ. ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಶಾಸಕರನ್ನು ಸೆಳೆಯಲು ಪ್ರತಿಪಕ್ಷ ಡಿಎಂಕೆ ನಾಯಕರಿಗೆ ಸಂಬಂಧಿಸಿದ ವ್ಯಕ್ತಿಗಳು ₹10 ಕೋಟಿಯಿಂದ ₹50 ಕೋಟಿವರೆಗೆ ಆಮಿಷ ಒಡ್ಡಿದ್ದಾರೆ ಎಂದು ಟಿವಿಕೆ ಗಂಭೀರ ಆರೋಪ ಮಾಡಿದೆ.
ಈ ಆರೋಪಗಳ ಹಿನ್ನೆಲೆಯಲ್ಲಿ ಬುಧವಾರ ಮೂವರನ್ನು ಪೊಲೀಸರು ಬಂಧಿಸಿದ್ದು, ಆಡಳಿತಾರೂಢ ಟಿವಿಕೆ ಹಾಗೂ ಪ್ರತಿಪಕ್ಷ ಡಿಎಂಕೆ ನಡುವೆ ತೀವ್ರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಡಿಎಂಕೆ ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ.
₹35 ಕೋಟಿ ಆಮಿಷದ ಆರೋಪ
ಈ ವಿವಾದಕ್ಕೆ ಚಾಲನೆ ನೀಡಿದ್ದು ಟಿವಿಕೆ ಶಾಸಕ ಎನ್. ಇಳಯರಾಜಾ ಅವರ ದೂರು. ಪ್ರಸ್ತಾವಿತ ವಿಧಾನಸಭೆ ನಿರ್ಣಯದ ಮತದಾನದ ವೇಳೆ ತಮ್ಮ ನಿಲುವು ಬದಲಾಯಿಸುವಂತೆ ಮಾಡಲು ₹35 ಕೋಟಿ ನೀಡುವುದಾಗಿ ಆಮಿಷ ಒಡ್ಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ದೂರಿನ ಪ್ರಕಾರ, ತಿರುನಾವುಕ್ಕರಸು ಎಂಬಾತ ತನ್ನನ್ನು ‘ಇಂಡಿಯನ್ ಪಾಲಿಟಿಕಲ್ ಡೆಮಾಕ್ರಟಿಕ್ ಸ್ಟ್ರಾಟಜೀಸ್’ ಎಂಬ ರಾಜಕೀಯ ಸಂಸ್ಥೆಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡು ಸಂಪರ್ಕಿಸಿದ್ದಾನೆ. ಬಳಿಕ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ತರಲಾಗುವುದು ಎಂದು ಹೇಳಿ ಮತದಾನದ ವೇಳೆ ನಿರ್ದಿಷ್ಟ ರೀತಿಯಲ್ಲಿ ನಡೆದುಕೊಳ್ಳುವಂತೆ ಒತ್ತಾಯಿಸಿ ಹಣದ ಆಮಿಷವನ್ನೂ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಇಳಯರಾಜಾ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದು, ಬಳಿಕ ತಮ್ಮ ಹಾಗೂ ತಮ್ಮ ಕುಟುಂಬದವರಿಗೆ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಿರುನಾವುಕ್ಕರಸು, ನರೇಶ ಹಾಗೂ ತ್ಯಾಗರಾಜನ್ ಎಂಬ ಮೂವರನ್ನು ಬಂಧಿಸಿದ್ದಾರೆ.

ಡಿಎಂಕೆ ವಿರುದ್ಧ ಟಿವಿಕೆ ಗಂಭೀರ ಆರೋಪ
ಟಿವಿಕೆ ಸಚಿವ ನಿರ್ಮಲಕುಮಾರ ಅವರು, ಡಿಎಂಕೆಯ ಹಿರಿಯ ನಾಯಕರು ಆಡಳಿತಾರೂಢ ಪಕ್ಷದ ಶಾಸಕರನ್ನು ಸೆಳೆಯಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ ನಂತರ ಪ್ರಕರಣ ಮತ್ತಷ್ಟು ತೀವ್ರಗೊಂಡಿತು.
“ಕಳೆದ 40 ದಿನಗಳಿಂದ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹಾಗೂ ಉದಯನಿಧಿ ಸ್ಟಾಲಿನ್ ಅವರ ಅನುಮತಿಯೊಂದಿಗೆ ಸಚಿವ ಸೆಂಥಿಲ್ ಬಾಲಾಜಿ ನಮ್ಮ ಹಲವು ಶಾಸಕರನ್ನು ಸಂಪರ್ಕಿಸಿದ್ದಾರೆ. ₹10 ಕೋಟಿಯಿಂದ ₹50 ಕೋಟಿವರೆಗೆ ಹಣದ ಆಮಿಷ ನೀಡಲಾಗಿದೆ. ಸಂಪರ್ಕಿಸದ ಒಬ್ಬ ಶಾಸಕರೂ ಇಲ್ಲ,” ಎಂದು ನಿರ್ಮಲಕುಮಾರ ಆರೋಪಿಸಿದ್ದಾರೆ. “ಸ್ಟಾಲಿನ್, ಉದಯನಿಧಿ ಸ್ಟಾಲಿನ್ ಮತ್ತು ಸೆಂಥಿಲ್ ಬಾಲಾಜಿ ಇಂತಹ ಕೆಳಮಟ್ಟದ ರಾಜಕೀಯವನ್ನು ತಕ್ಷಣ ನಿಲ್ಲಿಸಬೇಕು,” ಎಂದು ಅವರು ಆಗ್ರಹಿಸಿದರು.
ಇದೇ ವೇಳೆ, ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ತರಲಾಗುವುದು ಎಂದು ಹೇಳಿ, ಅದರ ವೇಳೆ ನಿರ್ದಿಷ್ಟ ರೀತಿಯಲ್ಲಿ ಮತ ಚಲಾಯಿಸುವಂತೆ ಇಳಯರಾಜಾಗೆ ₹35 ಕೋಟಿ ನೀಡುವುದಾಗಿ ಆರೋಪಿಗಳು ಹೇಳಿದ್ದರು ಎಂಬ ಆರೋಪದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿತ ಸಂಪರ್ಕಗಳ ಬಗ್ಗೆ ಸಮಗ್ರ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸೈಬರ್ ವಂಚನೆ ಹೆಚ್ಚುವ ಆತಂಕ : ವಾಟ್ಸ್ಆಪ್ ಹೊಸ 'ಯೂಸರ್‌ನೇಮ್' ಸೇವೆಗೆ ಸರ್ಕಾರದ ತಾತ್ಕಾಲಿಕ ತಡೆ ; ಸ್ಪಷ್ಟನೆಗೆ ಮೆಟಾಕ್ಕೆ ನೋಟಿಸ್‌

ಡಿಎಂಕೆಯಿಂದ ಪ್ರತಿದಾಳಿ
ಟಿವಿಕೆ ಆರೋಪಗಳನ್ನು ಡಿಎಂಕೆ ಸಂಪೂರ್ಣವಾಗಿ ನಿರಾಕರಿಸಿದ್ದು, ವಿಜಯ ನೇತೃತ್ವದ ಸರ್ಕಾರವೇ ತಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದೆ ಎಂದು ಪ್ರತಿಯಾಗಿ ಆರೋಪಿಸಿದೆ.
ಈ ಸಂಬಂಧ ತಮಿಳುನಾಡು ರಾಜ್ಯಪಾಲ ಹಾಗೂ ಭ್ರಷ್ಟಾಚಾರ ನಿಗ್ರಹ ಮತ್ತು ಜಾಗೃತಿ ನಿರ್ದೇಶನಾಲಯಕ್ಕೆ (ಡಿವಿಎಸಿ) ದೂರು ಸಲ್ಲಿಸಿರುವ ಡಿಎಂಕೆ, ಇಬ್ಬರು ಡಿಎಂಕೆ ಶಾಸಕರಿಗೆ ರಾಜೀನಾಮೆ ನೀಡುವಂತೆ ಆಮಿಷ ಒಡ್ಡಲಾಗಿದೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದೆ.
ಇದೇ ವೇಳೆ, ಇತ್ತೀಚೆಗೆ ಡಿಎಂಕೆಯಿಂದ ದೂರವಾಗಿ ಟಿವಿಕೆಗೆ ಬೆಂಬಲ ಘೋಷಿಸಿರುವ ಎಂಡಿಎಂಕೆ ನಾಯಕ ವೈಕೊ ಅವರ ಹೇಳಿಕೆಗಳನ್ನು ಉಲ್ಲೇಖಿಸಿರುವ ಡಿಎಂಕೆ, ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಮ್ಮತಿಸುವ ಶಾಸಕರಿಗೆ ವಿಜಯ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಆರೋಪಿಸಿದೆ.
ಆಡಳಿತ ಪಕ್ಷದ ವಿರುದ್ಧ ಅಪರಾಧ ಸಂಚು, ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಮಾಡಿರುವ ಡಿಎಂಕೆ, ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿದೆ.

ಮೈತ್ರಿ ಪಕ್ಷಗಳ ಸಭೆ ನಡೆಸಿದ ವಿಜಯ
ರಾಜಕೀಯ ಬೆಳವಣಿಗೆಗಳ ನಡುವೆಯೇ ಮುಖ್ಯಮಂತ್ರಿ ವಿಜಯ ಬುಧವಾರ ಚೆನ್ನೈನಲ್ಲಿ ಮೈತ್ರಿ ಪಕ್ಷಗಳ ಸಭೆ ನಡೆಸಿದರು. ಸಭೆಯಲ್ಲಿ ಕಾಂಗ್ರೆಸ್, ವಿದುತಲೈ ಚಿರುಥೈಗಲ್ ಕಚ್ಚಿ (ವಿಸಿಕೆ), ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಹಾಗೂ ಎಂಡಿಎಂಕೆ ಪ್ರತಿನಿಧಿಗಳು ಭಾಗವಹಿಸಿದರು. ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿರುವ ಸಿಪಿಐ ಮತ್ತು ಸಿಪಿಐ(ಎಂ) ನಾಯಕರು ಸಹ ಸಭೆಯಲ್ಲಿ ಉಪಸ್ಥಿತರಿದ್ದರು.
ಸರ್ಕಾರದ ಸ್ಥಿರತೆಯನ್ನು ಕಾಪಾಡುವುದು ಹಾಗೂ ಐದು ವರ್ಷಗಳ ಪೂರ್ಣ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಪ್ರಮುಖ ಸುದ್ದಿ :-   ವಿಡಿಯೋ | ಪಿಒಕೆ ಪಾಕಿಸ್ತಾನದ ಭಾಗವಲ್ಲ ; ಪಿಒಕೆಯಲ್ಲಿ ಪಾಕ್ ವಿರುದ್ಧ ಭುಗಿಲೆದ್ದ ಆಕ್ರೋಶ ; ಭಾರತದತ್ತ ಮುಖ ಮಾಡ್ತೀವಿ ಎಂದು ಎಚ್ಚರಿಕೆ !

ಸಂಖ್ಯಾಬಲದ ಚಿತ್ರಣ
ಏಪ್ರಿಲ್ 23ರಂದು ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಸರ್ಕಾರ ರಚಿಸಲು ಅಗತ್ಯವಿದ್ದ 118 ಸ್ಥಾನಗಳ ಸರಳ ಬಹುಮತಕ್ಕೆ ಅದಕ್ಕೆ 10 ಸ್ಥಾನಗಳು ಕಡಿಮೆಯಾಗಿತ್ತು.
ಕಾಂಗ್ರೆಸ್ 5 ಸ್ಥಾನಗಳನ್ನು, ವಿಸಿಕೆ ಮತ್ತು ಐಯುಎಂಎಲ್ ತಲಾ 2 ಸ್ಥಾನಗಳನ್ನು ಗೆದ್ದಿದ್ದು, ಈ ಪಕ್ಷಗಳು ಟಿವಿಕೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿ, ಸರ್ಕಾರದಲ್ಲಿ ಸೇರಿಕೊಂಡವು. ತಲಾ 2 ಶಾಸಕರನ್ನು ಹೊಂದಿರುವ ಸಿಪಿಐ ಹಾಗೂ ಸಿಪಿಐ(ಎಂ) ಸರ್ಕಾರಕ್ಕೆ ಯಾವುದೇ ಷರತ್ತುಗಳಿಲ್ಲದೆ ಹೊರಗಿನಿಂದ ಬೆಂಬಲ ನೀಡಿವೆ. ಇತ್ತೀಚೆಗೆ ಟಿವಿಕೆಗೆ ಬೆಂಬಲ ಘೋಷಿಸಿರುವ ಎಂಡಿಎಂಕೆಗೂ 2 ಶಾಸಕರಿದ್ದು, ಆಡಳಿತಾರೂಢ ಮೈತ್ರಿಕೂಟದ ಬಲವನ್ನು ಹೆಚ್ಚಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement