ನವದೆಹಲಿ: ಪ್ರಯಾಣಿಕರ ಸುರಕ್ಷತೆ, ದುರುಪಯೋಗ ಹಾಗೂ ವಿದ್ಯುತ್ ವಾಹನಗಳ (ಇವಿ) ಬ್ಯಾಟರಿ ನಿರ್ವಹಣಾ ವ್ಯವಸ್ಥೆಗಳಿಗೆ (Battery Management System–BMS) ಅನಧಿಕೃತ ಪ್ರವೇಶದ ಬಗ್ಗೆ ವ್ಯಕ್ತವಾಗಿರುವ ಗಂಭೀರ ಆತಂಕದ ಹಿನ್ನೆಲೆಯಲ್ಲಿ, ಇ-ರಿಕ್ಷಾ ಹಾಗೂ ಇತರ ವಿದ್ಯುತ್ ವಾಹನಗಳ ಬ್ಯಾಟರಿಗಳನ್ನು ದೂರದಿಂದಲೇ (ರಿಮೋಟ್ ಮೂಲಕ) ಸ್ಥಗಿತಗೊಳಿಸುವ ಸಾಮರ್ಥ್ಯ ಹೊಂದಿರುವುದಾಗಿ ಆರೋಪಿಸಲಾದ ಏಳು ಮೊಬೈಲ್ ಅಪ್ಲಿಕೇಶನ್ಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಶುಕ್ರವಾರ ಗೂಗಲ್ ಮತ್ತು ಆಪಲ್ಗೆ ಸೂಚನೆ ನೀಡಿದೆ.
ಮೂಲಗಳ ಪ್ರಕಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಗೂಗಲ್ ಹಾಗೂ ಆಪಲ್ಗೆ ನೋಟಿಸ್ ಜಾರಿಗೊಳಿಸಿ, ತಮ್ಮ-ತಮ್ಮ ಆಪ್ ಸ್ಟೋರ್ಗಳಿಂದ ಗುರುತಿಸಲಾದ ಈ ಅಪ್ಲಿಕೇಶನ್ಗಳನ್ನು ತಕ್ಷಣ ತೆಗೆದುಹಾಕುವಂತೆ ಸೂಚಿಸಿದೆ ಎಂದು ವರದಿಯಾಗಿದೆ.
ಈ ಅಪ್ಲಿಕೇಶನ್ಗಳನ್ನು ದುರುಪಯೋಗಪಡಿಸಿಕೊಂಡು ಇ-ರಿಕ್ಷಾ ಸೇರಿದಂತೆ ವಿವಿಧ ವಿದ್ಯುತ್ ವಾಹನಗಳ ಬ್ಯಾಟರಿಗಳನ್ನು ದೂರದಿಂದಲೇ ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂಬ ಆತಂಕ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಇಂತಹ ದುರುಪಯೋಗದಿಂದ ವಾಹನಗಳ ಸಂಚಾರ ಅಸ್ತವ್ಯಸ್ತವಾಗುವುದರ ಜೊತೆಗೆ ಪ್ರಯಾಣಿಕರ ಸುರಕ್ಷತೆಯ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.
ಸರ್ಕಾರ ಗುರುತಿಸಿರುವ ಅಪ್ಲಿಕೇಶನ್ಗಳಲ್ಲಿ BAT-BMS, SMART BMS ಹಾಗೂ LOSSIGY ಪ್ರಮುಖವಾಗಿವೆ. ಈ ಆಪ್ಗಳ ಮೂಲಕ ಬ್ಯಾಟರಿ ನಿರ್ವಹಣಾ ವ್ಯವಸ್ಥೆಗಳಲ್ಲಿ ಅನಧಿಕೃತ ಹಸ್ತಕ್ಷೇಪ ನಡೆಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದು, ಆದ್ದರಿಂದಲೇ ಅವುಗಳನ್ನು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆಪ್ ಸ್ಟೋರ್ನಿಂದ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ.
ದೆಹಲಿಯಲ್ಲಿ ಇ-ರಿಕ್ಷಾ ಬ್ಯಾಟರಿ ‘ಪ್ರ್ಯಾಂಕ್’ ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೊಗಳು ವೈರಲ್ ಆಗಿದ್ದವು. ಅವುಗಳಲ್ಲಿ ಕೆಲವರು ಕೆಲವು ಸ್ಮಾರ್ಟ್ಫೋನ್ ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಚಲಿಸುತ್ತಿದ್ದ ಇ-ರಿಕ್ಷಾಗಳ ಬ್ಯಾಟರಿಗಳನ್ನು ದೂರದಿಂದಲೇ ಸ್ವಿಚ್ ಆಫ್ ಮಾಡುತ್ತಿರುವುದು ಕಂಡುಬಂದಿತ್ತು.
ಇದರಿಂದ ವಾಹನಗಳು ಏಕಾಏಕಿ ವಿದ್ಯುತ್ ಕಳೆದುಕೊಂಡು ರಸ್ತೆಯ ಮಧ್ಯದಲ್ಲೇ ನಿಂತುಹೋಗುತ್ತಿದ್ದವು. ಈ ಘಟನೆಗಳು ಪ್ರಯಾಣಿಕರ ಸುರಕ್ಷತೆ ಕುರಿತು ಗಂಭೀರ ಆತಂಕಕ್ಕೆ ಕಾರಣವಾಗಿದ್ದವು.
ವಾಸ್ತವವಾಗಿ, ಈ ಅಪ್ಲಿಕೇಶನ್ಗಳನ್ನು ಬಳಕೆದಾರರು ಹಾಗೂ ತಾಂತ್ರಿಕ ಸಿಬ್ಬಂದಿ ಬ್ಯಾಟರಿಯ ಆರೋಗ್ಯ ಪರಿಶೀಲಿಸುವುದು, ಚಾರ್ಜಿಂಗ್ ಸ್ಥಿತಿಯನ್ನು ಗಮನಿಸುವುದು ಹಾಗೂ ಬ್ಯಾಟರಿ ಸೆಟ್ಟಿಂಗ್ಗಳನ್ನು ನಿರ್ವಹಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿತ್ತು.
ಆದರೆ ತನಿಖಾಧಿಕಾರಿಗಳ ಶಂಕೆಯಂತೆ, ಕೆಲವರು ಕೆಲವು ಬ್ಯಾಟರಿ ನಿರ್ವಹಣಾ ವ್ಯವಸ್ಥೆಗಳಲ್ಲಿದ್ದ ಭದ್ರತಾ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಸೂಕ್ತ ದೃಢೀಕರಣ (Authentication) ಇಲ್ಲದೆ ಬ್ಲೂಟೂತ್ ಮೂಲಕ ಬ್ಯಾಟರಿಗೆ ಸಂಪರ್ಕ ಸಾಧಿಸಿ, ‘Discharge Off’ ಎಂಬುದನ್ನು ಸಕ್ರಿಯಗೊಳಿಸುವ ಮೂಲಕ ವಾಹನದ ವಿದ್ಯುತ್ ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸುತ್ತಿದ್ದರು.
ಈ ಘಟನೆಗಳಿಂದ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ಚಾಲಕರು ಹಾಗೂ ಪ್ರಯಾಣಿಕರು ರಸ್ತೆಯಲ್ಲೇ ಸಿಲುಕಿ ಪರದಾಡುವಂತಾಗಿತ್ತು. ಅಲ್ಲದೆ, ದೈನಂದಿನ ಆದಾಯವನ್ನೇ ಅವಲಂಬಿಸಿರುವ ಇ-ರಿಕ್ಷಾ ಚಾಲಕರ ಜೀವನೋಪಾಯಕ್ಕೂ ತೀವ್ರ ಹೊಡೆತ ಬಿದ್ದಿದೆ. ಹಲವು ಸಂದರ್ಭಗಳಲ್ಲಿ ಬ್ಯಾಟರಿ ದೂರದಿಂದಲೇ ಸ್ಥಗಿತಗೊಂಡ ಕಾರಣ, ಚಾಲಕರು ತಮ್ಮ ವಾಹನಗಳನ್ನು ತಳ್ಳಿಕೊಂಡೇ ಸೇವಾ ಕೇಂದ್ರಗಳಿಗೆ ಕೊಂಡೊಯ್ಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ವೈರಲ್ ವಿಡಿಯೊಗಳ ಬಳಿಕ ದೆಹಲಿ ಸರ್ಕಾರ ಪ್ರಕರಣದ ಕುರಿತು ತನಿಖೆ ಆರಂಭಿಸಿದೆ. ಸಾರಿಗೆ ಸಚಿವ ಪಂಕಜ ಸಿಂಗ್ ಗುರುವಾರ ಮಾತನಾಡಿ, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದು, ಇಂತಹ ತಂತ್ರಜ್ಞಾನದ ದುರುಪಯೋಗ ಕಾನೂನುಬಾಹಿರವಾಗಿರುವುದರಿಂದ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಜೊತೆಗೆ, ಇತರ ಬ್ಯಾಟರಿ ನಿರ್ವಹಣಾ ಅಪ್ಲಿಕೇಶನ್ಗಳು ಹಾಗೂ ವ್ಯವಸ್ಥೆಗಳಲ್ಲಿಯೂ ಇದೇ ರೀತಿಯ ಭದ್ರತಾ ದೌರ್ಬಲ್ಯಗಳಿವೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಭವಿಷ್ಯದಲ್ಲಿ ಇಂತಹ ಅನಧಿಕೃತ ಪ್ರವೇಶವನ್ನು ತಡೆಯಲು ವಿದ್ಯುತ್ ವಾಹನಗಳ ಬ್ಯಾಟರಿ ನಿರ್ವಹಣಾ ವ್ಯವಸ್ಥೆಗಳಿಗೆ ಇನ್ನಷ್ಟು ಕಠಿಣ ಸೈಬರ್ ಭದ್ರತಾ ಮಾನದಂಡಗಳನ್ನು ಜಾರಿಗೊಳಿಸುವ ಅಗತ್ಯವಿದೆಯೇ ಎಂಬುದನ್ನೂ ಸರ್ಕಾರ ಮೌಲ್ಯಮಾಪನ ಮಾಡುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ