ಪಾಟ್ನಾ: ಬಿಹಾರದ ಮುಜಫ್ಫರ್ಪುರ ಜಿಲ್ಲೆಯ ಸಾಕ್ರಾ ಬ್ಲಾಕ್ನ ತಥಿಯಾ ಸಿಹೋ ಗ್ರಾಮದಲ್ಲಿ ನಡೆದ ಅಪರೂಪದ ಘಟನೆ ಒಂದು ಬಡ ಕುಟುಂಬವನ್ನು ಕ್ಷಣಾರ್ಧದಲ್ಲಿ ಕೋಟ್ಯಾಧಿಪತಿಗಳನ್ನಾಗಿ ಮಾಡಿ, ನಂತರ ಕೆಲವೇ ನಿಮಿಷಗಳಲ್ಲಿ ಮತ್ತೆ ಮೊದಲಿನ ಸ್ಥಿತಿಗೇ ತಳ್ಳಿದ ಘಟನೆ ವರದಿಯಾಗಿದೆ.
82 ವರ್ಷದ ಕಾಮೇಶ್ವರ ಮಿಶ್ರಾ ಅವರು , ಗ್ರಾಮದಲ್ಲಿ ‘ಘುಮಕ್ಕಡ್’ ಎಂಬ ಹೆಸರಿನಿಂದ ಪರಿಚಿತರಾಗಿದ್ದು, ತಮ್ಮ ವೃದ್ಧಾಪ್ಯ ವೇತನ ಹಾಗೂ ತಮ್ಮ ಪುತ್ರ ವಿಶೇಷ ಚೇತನ (ದಿವ್ಯಾಂಗ) ಪುತ್ರನ ಅಂಗವೈಕಲ್ಯ ಪಿಂಚಣಿಯನ್ನು ಪಡೆಯಲು ಸಮೀಪದ ಬ್ಯಾಂಕ್ಗೆ ತೆರಳಿದ್ದರು.
ಕಾಮೇಶ್ವರ ಮಿಶ್ರಾ ತಮ್ಮ ವೃದ್ಧಾಪ್ಯ ಪಿಂಚಣಿಯಿಂದ ₹1,100 ಹಣವನ್ನು ವಿಥ್ ಡ್ರಾ ಮಾಡಿದರು. ಅವರ ಪುತ್ರ ಕೂಡ ತನ್ನ ಅಂಗವೈಕಲ್ಯ ಪಿಂಚಣಿಯನ್ನು ಪಡೆದರು. ನಂತರ ಇಬ್ಬರ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಿದಾಗ, ಕಂಪ್ಯೂಟರ್ ಪರದೆಯ ಮೇಲೆ ಕಾಣಿಸಿಕೊಂಡ ಮೊತ್ತವನ್ನು ನೋಡಿ ತಂದೆ-ಮಗ ಮಾತ್ರವಲ್ಲ, ಅಲ್ಲಿದ್ದ ಕಂಪ್ಯೂಟರ್ ಆಪರೇಟರ್ ಕೂಡ ಬೆಚ್ಚಿಬಿದ್ದರು.
ಇಬ್ಬರ ಖಾತೆಗಳಲ್ಲೂ ತಲಾ ₹759 ಕೋಟಿ (ಒಟ್ಟು ಸುಮಾರು ₹1,500 ಕೋಟಿ) ಹಣ ಜಮೆಯಾಗಿರುವಂತೆ ತೋರಿಸುತ್ತಿತ್ತು. ಪರದೆಯಲ್ಲಿದ್ದ ಅಂಕಿಗಳನ್ನು ಎಣಿಸಲು ತಂದೆ-ಮಗ ಹಾಗೂ ಅಲ್ಲಿದ್ದ ಸಿಬ್ಬಂದಿಗೆ ನಾಲ್ಕು ರಿಂದ ಐದು ನಿಮಿಷಗಳ ಸಮಯವೇ ಬೇಕಾಯಿತು ಎನ್ನಲಾಗಿದೆ.
ಅಷ್ಟೊಂದು ದೊಡ್ಡ ಮೊತ್ತ ಖಾತೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ, ಕಂಪ್ಯೂಟರ್ ಆಪರೇಟರ್ ಆ ಹಣದಿಂದ ಸ್ವಲ್ಪ ಹಣ ತೆಗೆಯಲು ಹಲವು ಬಾರಿ ಪ್ರಯತ್ನಿಸಿದರು. ಆದರೆ ಪ್ರತಿಯೊಂದು ಪ್ರಯತ್ನದಲ್ಲಿಯೂ “ತಾಂತ್ರಿಕ ದೋಷ” (Technical Error) ಎಂಬ ಸಂದೇಶ ಬಂದಿತೇ ಹೊರತು ಹಣ ಬರಲಿಲ್ಲ.
ಸುಮಾರು 10 ನಿಮಿಷಗಳ ಬಳಿಕ ಖಾತೆಯನ್ನು ಮತ್ತೊಮ್ಮೆ ಪರಿಶೀಲಿಸಿದಾಗ, ಕೆಲವೇ ಕ್ಷಣಗಳ ಹಿಂದೆ ಕಾಣಿಸಿಕೊಂಡಿದ್ದ ₹1,500 ಕೋಟಿ ಸಂಪೂರ್ಣವಾಗಿ ಮಾಯವಾಗಿತ್ತು. ಕಾಮೇಶ್ವರ್ ಮಿಶ್ರಾ ಹಾಗೂ ಅವರ ಪುತ್ರನ ಖಾತೆಗಳಲ್ಲಿ ಬ್ಯಾಲೆನ್ಸ್ ಶೂನ್ಯವಾಗಿರುವುದು ಕಂಡುಬಂದಿತು.
ಬ್ಯಾಂಕ್ ಅಧಿಕಾರಿಗಳ ಸ್ಪಷ್ಟನೆ
ನ್ಯೂಸ್ ಪಾಯಿಂಟ್ ವರದಿಯ ಪ್ರಕಾರ, ಖಾತೆಯಲ್ಲಿ ಕಾಣಿಸಿಕೊಂಡಿದ್ದ ಹಣವನ್ನು ವಾಸ್ತವವಾಗಿ ವಿಥ್ ಡ್ರಾ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದ ಆ ಮೊತ್ತ ಇವರ ಖಾತೆಗಳಲ್ಲಿ ತಾತ್ಕಾಲಿಕವಾಗಿ ಪ್ರದರ್ಶಿತವಾಗಿರಬಹುದು ಎಂದು ಶಂಕಿಸಲಾಗಿದ್ದು, ಬ್ಯಾಂಕಿನ ನಿಯಮಾನುಸಾರ ಪ್ರಕರಣದ ತನಿಖೆ ನಡೆಯುತ್ತಿದೆ. ಈವರೆಗೆ ಅಧಿಕಾರಿಗಳಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.
ಇಂತಹ ಘಟನೆ ಇದೇ ಮೊದಲಲ್ಲ
ಇದು ಮೊದಲ ಬಾರಿಗೆ ನಡೆದ ಘಟನೆ ಅಲ್ಲ. ಈ ಹಿಂದೆ ಕೂಡ ಬ್ಯಾಂಕುಗಳ ತಾಂತ್ರಿಕ ಅಥವಾ ವ್ಯವಸ್ಥೆಯ ದೋಷಗಳಿಂದ ಕೆಲವರ ಖಾತೆಗಳಿಗೆ ಭಾರೀ ಮೊತ್ತದ ಹಣ ಜಮೆಯಾಗಿರುವ ಹಲವು ಪ್ರಕರಣಗಳು ವರದಿಯಾಗಿದ್ದವು. ನಂತರ ಆ ಮೊತ್ತಗಳನ್ನು ಹಿಂಪಡೆಯಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ