ಭೀಕರ ಭೂಕುಸಿತ: ಮಣ್ಣಿನಡಿ ಹೂತುಹೋದ ಕ್ಯಾಬ್‌, 13 ಮಂದಿ ದುರ್ಮರಣ

ಚಂಬಾ: ಹಿಮಾಚಲ ಪ್ರದೇಶದ ಲಾಹೌಲ್–ಸ್ಪಿತಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಟಾಟಾ ಸುಮೋ ವಾಹನವು ಬಂಡೆಗಳು ಹಾಗೂ ಮಣ್ಣಿನಡಿ ಸಿಲುಕಿ 13 ಮಂದಿ ಮೃತಪಟ್ಟ ದುರ್ಘಟನೆ ನಡೆದಿದೆ.
ಟಾಟಾ ಸುಮೋ ವಾಹನವು ಕುಲ್ಲುವಿನಿಂದ ಪಾಂಗಿ ಕಡೆಗೆ ತೆರಳುತ್ತಿದ್ದ ವೇಳೆ ಏಕಾಏಕಿ ಬೆಟ್ಟದಿಂದ ಬೃಹತ್ ಬಂಡೆಗಳು ಉರುಳಿ ಬಿದ್ದು, ವಾಹನ ಸಂಪೂರ್ಣವಾಗಿ ಅದರಡಿ ಹೂತುಹೋಗಿದೆ. ಘಟನೆಯ ದೃಶ್ಯಗಳಲ್ಲಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರ ಮೇಲೆ ಬೃಹತ್ ಪ್ರಮಾಣದ ಮಣ್ಣು ಮತ್ತು ಬಂಡೆಗಳು ಬಿದ್ದಿರುವುದು ಕಂಡುಬಂದಿದೆ. ವಾಹನ ಚಾಲಕನನ್ನು ಬೀರ್ ಸಿಂಗ್ ಎಂದು ಗುರುತಿಸಲಾಗಿದೆ.
ಈ ದುರ್ಘಟನೆಯು ಲಾಹೌಲ್–ಸ್ಪಿತಿ ಜಿಲ್ಲೆಯ ಉದಯಪುರ–ಕಿಲ್ಲಾರ್ ಮಾರ್ಗದ ಕಾಹು-ದು ನಾಲಾ ಸಮೀಪ ನಡೆದಿದೆ. ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆಯೇ ಟಿಂಡಿ ಪೊಲೀಸರು, ಸ್ಥಳೀಯ ಆಡಳಿತ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಶೋಧ ಮತ್ತು ರಕ್ಷಣಾ ಕಾರ್ಯ ಆರಂಭಿಸಿದವು.

ರಕ್ಷಣಾ ಕಾರ್ಯಾಚರಣೆಯ ವೇಳೆ ಒಬ್ಬರು ಗಾಯಾಳುಗಳನ್ನು ರಕ್ಷಿಸಲಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದಕ್ಕೂ ಮುನ್ನ ಗುರುವಾರ ಮತ್ತೊಂದು ಭೂಕುಸಿತ ಸಂಭವಿಸಿದ್ದ ಹಿನ್ನೆಲೆಯಲ್ಲಿ ಉದಯಪುರ–ಕಿಲ್ಲಾರ್ ರಸ್ತೆ ಬಂದ್ ಮಾಡಲಾಗಿತ್ತು. ಇದರಿಂದ ಈ ವಾಹನದ ಪ್ರಯಾಣಿಕರು ಟಿಂಡಿಯಲ್ಲಿ ತಂಗಿದ್ದರು. ಬಳಿಕ ರಸ್ತೆ ಸಂಚಾರಕ್ಕೆ ಪುನಃಆರಂಭಗೊಂಡ ನಂತರ ಶುಕ್ರವಾರ ಪಾಂಗಿ ಕಡೆಗೆ ಪ್ರಯಾಣ ಆರಂಭಿಸಿದ್ದರು. ಆದರೆ ಮಾರ್ಗಮಧ್ಯೆ ಏಕಾಏಕಿ ಬೆಟ್ಟದ ದೊಡ್ಡ ಭಾಗ ಕುಸಿದು ವಾಹನದ ಮೇಲೆ ಬಿದ್ದ ಪರಿಣಾಮ ಈ ಭೀಕರ ದುರಂತ ಸಂಭವಿಸಿದೆ.

ಪ್ರಮುಖ ಸುದ್ದಿ :-   'ಪ್ರಬಲ ಎಲ್ ನಿನೋ' ನಡುವೆಯೂ ಭಾರತದ ಶೇ.95 ಭಾಗ ಮೋಡಗಳಿಂದ ಆವೃತ : ಮಳೆಗಾಲದ ಹಿಂದಿನ ವೈಜ್ಞಾನಿಕ ರಹಸ್ಯವೇನು?

ಸದ್ಯ ಸ್ಥಳದಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಪರಿಸ್ಥಿತಿಯನ್ನು ಜಿಲ್ಲಾಡಳಿತ ಮತ್ತು ಪೊಲೀಸರು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ನಡುವೆ ಲಾಹೌಲ್-ಸ್ಪಿತಿಯಲ್ಲಿ ಈ ಘಟನೆ ಸಂಭವಿಸಿದೆ. ಸ್ಟೇಟ್ ಎಮರ್ಜೆನ್ಸಿ ಆಪರೇಷನ್ ಸೆಂಟರ್ (SEOC) ಪ್ರಕಾರ, ರಾಜ್ಯದಾದ್ಯಂತ 130 ಕ್ಕೂ ಹೆಚ್ಚು ರಸ್ತೆಗಳು ಮುಚ್ಚಲ್ಪಟ್ಟಿವೆ. ಮಂಡಿಯಲ್ಲಿ ಗರಿಷ್ಠ 50 ರಸ್ತೆಗಳು ಹಾನಿಗೊಳಗಾಗಿದ್ದು, ಸಿರ್ಮೌರ್‌ನಲ್ಲಿ 23, ಶಿಮ್ಲಾದಲ್ಲಿ 20, ಚಂಬಾದಲ್ಲಿ 18, ಕುಲುವಿನಲ್ಲಿ 12, ಕಾಂಗ್ರಾದಲ್ಲಿ 6, ಲಾಹೌಲ್ ಮತ್ತು ಸ್ಪಿತಿಯಲ್ಲಿ ಐದು ಮತ್ತು ಬಿಲಾಸ್‌ಪುರ ಮತ್ತು ಉನಾ ಜಿಲ್ಲೆಗಳಲ್ಲಿ ತಲಾ ಒಂದು ರಸ್ತೆಗಳು ಹಾನಿಗೊಳಗಾಗಿವೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement