ಹಾಸನ: ಸಕಲೇಶಪುರ ತಾಲ್ಲೂಕಿನ ಯಡಕುಮರಿ ಮತ್ತು ಶಿರಿವಾಗಿಲು ರೈಲು ನಿಲ್ದಾಣಗಳ ನಡುವಿನ ರೈಲ್ವೆ ಹಳಿಯ ಮೇಲೆ ಶನಿವಾರ ರಾತ್ರಿ 8:45ರ ಸುಮಾರಿಗೆ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಆ ಮಾರ್ಗದ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಘಟನೆ ಕುರಿತು ಮಾಹಿತಿ ನೀಡಿರುವ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ, “ಭೂಕುಸಿತ ಸಂಭವಿಸಿದ ತಕ್ಷಣವೇ ಪರಿಹಾರ ಸಾಮಗ್ರಿಗಳನ್ನು ಸ್ಥಳಕ್ಕೆ ಕಳುಹಿಸಿ ದುರಸ್ತಿ ಮತ್ತು ತೆರವು ಕಾರ್ಯ ಆರಂಭಿಸಲಾಗಿದೆ. ಆದರೆ, ಅದೇ ಪ್ರದೇಶದಲ್ಲಿ ಪದೇಪದೆ ಭೂಕುಸಿತ ಉಂಟಾಗುತ್ತಿರುವುದರಿಂದ ಮಣ್ಣು ತೆರವುಗೊಳಿಸುವ ಕಾರ್ಯ ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ” ಎಂದು ತಿಳಿಸಿದ್ದಾರೆ.
ಈ ಅನಿರೀಕ್ಷಿತ ಅಡಚಣೆಯಿಂದ ಹಳಿಗಳ ಮೇಲೆ ಸಿಲುಕಿರುವ ಹಾಗೂ ತೊಂದರೆಗೊಳಗಾಗಿರುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಸನ, ಸುಬ್ರಹ್ಮಣ್ಯ ರಸ್ತೆ, ಶಿರಿವಾಗೀಲು ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ರೈಲ್ವೆ ಇಲಾಖೆಯು ಊಟ ಹಾಗೂ ಉಪಹಾರದ (ಕ್ಯಾಟರಿಂಗ್) ವ್ಯವಸ್ಥೆಯನ್ನು ಕಲ್ಪಿಸಿದೆ.
ರೈಲುಗಳ ಸಂಚಾರ ವ್ಯತ್ಯಯ ಹಾಗೂ ಮಾರ್ಗ ಬದಲಾವಣೆ ವಿವರ:
ಭೂ ಕುಸಿತ ಉಂಟಾಗಿ ರೈಲು ಹಳಿಗಳ ಮೇಲೆ ಮಣ್ಣು ಬಿದ್ದಿರುವುದರಿಂದ ಹಲವಾರು ರೈಲೆಗಳ ಸಂಚಾರಕ್ಕೆ ತೊಂದರೆಯುಂಟಾಗಿದೆ. ಹೆಚ್ಚಿನ ರೈಲುಗಳನ್ನು ಮಾರ್ಗ ಮಧ್ಯೆಯೇ ಅಲ್ಲಲ್ಲಿ ತಡೆ ಹಿಡಿಯಲಾಗಿದೆ.
ಮಂಗಳೂರು ಕೇಂದ್ರ–ವಿಜಯಪುರ ಎಕ್ಸ್ಪ್ರೆಸ್ (17378): ಮಂಗಳೂರಿನಿಂದ ಹೊರಟ ಈ ರೈಲನ್ನು ರಾತ್ರಿ 7:58ಕ್ಕೆ ಶಿರಿವಾಗೀಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ.
ಮುರುಡೇಶ್ವರ–ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ (16586): ಮುರುಡೇಶ್ವರದಿಂದ ಹೊರಟ ರೈಲನ್ನು ರಾತ್ರಿ 8:50ಕ್ಕೆ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲಿ ನಿಲ್ಲಿಸಲಾಯಿತು.
ಕೋಝಿಕ್ಕೋಡ್–ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (16512): ಕೋಝಿಕ್ಕೋಡ್ನಿಂದ ಹೊರಟ ರೈಲು ರಾತ್ರಿ 9:56ಕ್ಕೆ ನೇರಳಕಟ್ಟೆ ನಿಲ್ದಾಣದಲ್ಲಿ ನಿಂತಿತು.
ಕಾರವಾರ–ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (16596): ಈ ರೈಲನ್ನು ಮಂಗಳೂರು–ಶೋರಾಪುರ–ಪಾಲಕ್ಕಾಡ್–ಈರೋಡ್–ಜೋಲಾರ್ಪೇಟೆ ಮಾರ್ಗವಾಗಿ ಬೆಂಗಳೂರಿನತ್ತ ತಿರುಗಿಸಿ ಸಂಚರಿಸುವಂತೆ ಮಾಡಲಾಗಿದೆ.
ಕೆಎಸ್ಆರ್ ಬೆಂಗಳೂರು–ಕಾರವಾರ ಎಕ್ಸ್ಪ್ರೆಸ್ (16595): ಈ ರೈಲನ್ನು ಮುನ್ನೆಚ್ಚರಿಕೆ ಕ್ರಮವಾಗಿ ಹಾಸನ ರೈಲು ನಿಲ್ದಾಣದಲ್ಲೇ ನಿಲುಗಡೆ ಮಾಡಲಾಗಿದೆ.
ಭಾನುವಾರದ ರೈಲುಗಳು ರದ್ದು:
ಮಾರ್ಗದಲ್ಲಿ ಮುಂದುವರಿದಿರುವ ಭೂಕುಸಿತದ ಕಾರಣದಿಂದಾಗಿ, ಭಾನುವಾರ (ಆಗಸ್ಟ್ 2) ಸಂಚರಿಸಬೇಕಿದ್ದ ಮಂಗಳೂರು ಜಂಕ್ಷನ್–ಯಶವಂತಪುರ ಎಕ್ಸ್ಪ್ರೆಸ್ (16540) ಹಾಗೂ ಯಶವಂತಪುರ–ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ (16575) ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ