ಡೇಟಿಂಗ್ ಆ್ಯಪ್‌ನಲ್ಲಿ ಸ್ನೇಹ, ಖಾಸಗಿ ಫೋಟೋಗಳಿಂದ ಬ್ಲ್ಯಾಕ್‌ಮೇಲ್: ₹6 ಕೋಟಿ ಸುಲಿಗೆ ಮಾಡಿದ ಖತರ್ನಾಕ್‌ ಮಹಿಳೆ

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಟಿಂಡರ್‌ ಸೇರಿದಂತೆ ಡೇಟಿಂಗ್ ಆ್ಯಪ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪುರುಷರನ್ನು ಪರಿಚಯಿಸಿಕೊಂಡು, ಬಳಿಕ ಅವರ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಸುಲಿಗೆ ಜಾಲದ ಬಗ್ಗೆ ಹೈಕೋರ್ಟ್ ವಕೀಲರು ದೂರು ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ದೂರಿನ ಪ್ರಕಾರ, ಮಹಿಳೆಯೊಬ್ಬರು ಡೇಟಿಂಗ್ ಆ್ಯಪ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪುರುಷರನ್ನು ಸಂಪರ್ಕಿಸಿ ಮೊದಲು ಸ್ನೇಹ ಬೆಳೆಸುತ್ತಿದ್ದರು. ಬಳಿಕ ಈ ಸ್ನೇಹ ಆತ್ಮೀಯ ಸಂಬಂಧವಾಗಿ ಬದಲಾಗುತ್ತಿತ್ತು. ಭೇಟಿಯ ಸಂದರ್ಭಗಳಲ್ಲಿ ಪುರುಷರ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳಲಾಗುತ್ತಿತ್ತು ಎಂದು ದೂರುದಾರರು ಹಾಗೂ ತಮ್ಮನ್ನು ಸಂತ್ರಸ್ತರೆಂದು ಹೇಳಿಕೊಂಡಿರುವ ಕೆಲವರು ಆರೋಪಿಸಿದ್ದಾರೆ.

ನಂತರ ಇದೇ ಫೋಟೋಗಳು ಮತ್ತು ವಿಡಿಯೋಗಳನ್ನು ಬಳಸಿಕೊಂಡು ಸಂಬಂಧಪಟ್ಟ ಪುರುಷರಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಡಲಾಗುತ್ತಿತ್ತು ಎನ್ನಲಾಗಿದೆ. ಹಣ ನೀಡಲು ನಿರಾಕರಿಸಿದರೆ ಅತ್ಯಾಚಾರ, ಕೊಲೆ ಯತ್ನ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಲಾಗುತ್ತಿತ್ತು ಎಂಬ ಆರೋಪವೂ ಇದೆ. ಈ ರೀತಿಯಲ್ಲಿ ₹6 ಕೋಟಿಗೂ ಹೆಚ್ಚು ಹಣವನ್ನು ವಸೂಲಿ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಮಹಿಳೆ ನೀಡಿದ ದೂರುಗಳ ಆಧಾರದ ಮೇಲೆ ಐವರು ಜೈಲು ಸೇರಿದ್ದಾರೆ ಎಂಬುದು ದೂರುದಾರರು ಮಾಡಿರುವ ಮತ್ತೊಂದು ಗಂಭೀರ ಆರೋಪ. ಪ್ರಕರಣ ದಾಖಲಿಸುವ ಬೆದರಿಕೆ, ಮತ್ತಷ್ಟು ಕಾನೂನು ಕ್ರಮದ ಭೀತಿ ಹಾಗೂ ಸಾಮಾಜಿಕವಾಗಿ ಮಾನಹಾನಿಯಾಗುವ ಆತಂಕವನ್ನು ಬಳಸಿಕೊಂಡು ಕೆಲವರಿಂದ ಹಣ ಪಡೆಯಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಪ್ರಮುಖ ಸುದ್ದಿ :-   ನಕಲಿ ಹೆಸರಿನಲ್ಲಿ 25 ಮದುವೆ ; ತಮ್ಮ ಅಳಿಯನ ವಿರುದ್ಧವೇ ದೂರು ದಾಖಲಿಸಿದ ಬಿಜೆಪಿ ಶಾಸಕ : ಇಬ್ಬರ ಬಂಧನ

ಇದರ ನಡುವೆ, ಪ್ರಕರಣಕ್ಕೆ ಸಂಬಂಧಿಸಿದವು ಎಂದು ಹೇಳಲಾಗುತ್ತಿರುವ ಕೆಲವು ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಈ ಚಿತ್ರಗಳ ಮೂಲ, ಅವು ಯಾವಾಗ ತೆಗೆದದ್ದು ಮತ್ತು ಅವುಗಳ ನೈಜ ಸಂದರ್ಭವೇನು ಎಂಬುದನ್ನು ಸ್ವತಂತ್ರವಾಗಿ ದೃಢಪಡಿಸಲು ಸಾಧ್ಯವಾಗಿಲ್ಲ.
ಮತ್ತೊಂದು ದೂರಿನ ಪ್ರಕಾರ, ಆರೋಪಿತ ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಹೆಸರುಗಳ ಖಾತೆಗಳನ್ನು ಬಳಸಿಕೊಂಡು ಹೊಸ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸುತ್ತಿದ್ದರು ಎನ್ನಲಾಗಿದೆ. ಈ ಆರೋಪಿತ ಕೃತ್ಯಗಳಿಗೆ ಮಹಿಳೆಗೆ ಮತ್ತಿಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸಹಕರಿಸುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯ ಕೇಳಿಬಂದಿರುವ ಆರೋಪಗಳು ತನಿಖೆಯ ಹಂತದಲ್ಲಿದ್ದು, ಅವುಗಳ ಸತ್ಯಾಸತ್ಯತೆ ಹಾಗೂ ಹಣ ವಸೂಲಿ ನಡೆದಿರುವ ಬಗ್ಗೆ ತನಿಖೆಯ ನಂತರವೇ ಸ್ಪಷ್ಟ ಮಾಹಿತಿ ಹೊರಬರಬೇಕಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement