ಕರ್ನಾಟಕ ವಿಧಾನಸಭೆಗೆ ಆಗಸ್ಟ್ 14 ರಂದು ನೂತನ ಸ್ಪೀಕರ್ ಆಯ್ಕೆ

ಬೆಂಗಳೂರು: ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆ ಆಗಸ್ಟ್ 14ರಂದು ನಡೆಯಲಿದೆ. ಪ್ರಸ್ತುತ ವಿಧಾನಸಭೆಯಲ್ಲಿ ಸ್ಪೀಕರ್ ಹಾಗೂ ಉಪ ಸ್ಪೀಕರ್ ಎರಡೂ ಹುದ್ದೆಗಳು ಖಾಲಿಯಾಗಿದ್ದು, ಸ್ಪೀಕರ್ ಚುನಾವಣೆಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಆಗಸ್ಟ್ 3ರಂದು ಹಿರಿಯ ಕಾಂಗ್ರೆಸ್ ಶಾಸಕ ಟಿ.ಬಿ. ಜಯಚಂದ್ರ ಅವರನ್ನು ಹಂಗಾಮಿ ಸ್ಪೀಕರ್ (ಪ್ರೊ-ಟೆಮ್ ಸ್ಪೀಕರ್) ಆಗಿ ನೇಮಕ ಮಾಡಿದ್ದಾರೆ.
ವಿಧಾನಸಭೆಯ ಕಾರ್ಯವಿಧಾನ ಮತ್ತು ವ್ಯವಹಾರ ನಿರ್ವಹಣಾ ನಿಯಮಗಳ ಉಪನಿಯಮ 7(1)ರ ಅಡಿಯಲ್ಲಿ, ವಿಧಾನಸಭೆಯ ಸ್ಪೀಕರ್ ಚುನಾವಣೆಗೆ 2026ರ ಆಗಸ್ಟ್ 14ರಂದು ರಾಜ್ಯಪಾಲರು ನಿಗದಿಪಡಿಸಿದ್ದಾರೆ ಎಂದು ಕರ್ನಾಟಕ ವಿಧಾನಸಭೆ ತನ್ನ ಬುಲೆಟಿನ್‌ನಲ್ಲಿ ತಿಳಿಸಿದೆ.
ಸ್ಪೀಕರ್ ಆಯ್ಕೆಗೆ ಸಂಬಂಧಿಸಿದಂತೆ, ಆಗಸ್ಟ್ 13ರಂದು ಗುರುವಾರ ಮಧ್ಯಾಹ್ನ 12 ಗಂಟೆಯೊಳಗೆ ಯಾವುದೇ ಸದಸ್ಯರು ಮತ್ತೊಬ್ಬ ಸದಸ್ಯರನ್ನು ಸ್ಪೀಕರ್ ಆಗಿ ಆಯ್ಕೆ ಮಾಡುವಂತೆ ಪ್ರಸ್ತಾಪಿಸುವ ನಿರ್ಣಯದ ಕುರಿತು ಲಿಖಿತ ನೋಟಿಸ್ ಅನ್ನು ವಿಧಾನಸಭೆಯ ಕಾರ್ಯದರ್ಶಿಗೆ ಸಲ್ಲಿಸಬಹುದಾಗಿದೆ. ಈ ನೋಟಿಸ್‌ಗೆ ಮತ್ತೊಬ್ಬ ಸದಸ್ಯರು ಅನುಮೋದನೆ (ಸೆಕೆಂಡ್) ನೀಡಿರಬೇಕು. ಅಲ್ಲದೆ, ಸ್ಪೀಕರ್ ಸ್ಥಾನಕ್ಕೆ ಪ್ರಸ್ತಾಪಿಸಲ್ಪಟ್ಟಿರುವ ಸದಸ್ಯರು ತಾವು ಆಯ್ಕೆಯಾದಲ್ಲಿ ಸ್ಪೀಕರ್ ಆಗಿ ಸೇವೆ ಸಲ್ಲಿಸಲು ಸಿದ್ಧರಿರುವುದಾಗಿ ತಿಳಿಸುವ ಹೇಳಿಕೆಯನ್ನೂ ನೋಟಿಸ್‌ನೊಂದಿಗೆ ಸಲ್ಲಿಸಬೇಕು.
ಈ ನೋಟಿಸ್ ಅನ್ನು ಪ್ರಸ್ತಾಪಿತ ಅಭ್ಯರ್ಥಿ, ಪ್ರಸ್ತಾಪಕರು ಅಥವಾ ಅನುಮೋದನೆ ನೀಡುವ ಸದಸ್ಯರು ಖುದ್ದಾಗಿ ಕಾರ್ಯದರ್ಶಿಗೆ ಸಲ್ಲಿಸಬೇಕು ಎಂದು ವಿಧಾನಸಭೆಯ ಬುಲೆಟಿನ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

ಪ್ರಮುಖ ಸುದ್ದಿ :-   ಹೋಟೆಲ್‌, ರೆಸ್ಟೋರೆಂಟ್‌ಗಳು, ಧಾಬಾಗಳಿಗೆ ಖಡಕ್‌ ಸೂಚನೆ ; ಆಹಾರ ಸುರಕ್ಷತೆಗೆ ಸರ್ಕಾರದಿಂದ 12 ಅಂಶಗಳ ಮಾರ್ಗಸೂಚಿ

ವಿಧಾನಸಭೆಯ ಸ್ಪೀಕರ್ ಸ್ಥಾನವು ಜೂನ್ 3ರಂದು ಯು.ಟಿ. ಖಾದರ್ ಅವರು ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಬಳಿಕ ತೆರವಾಗಿತ್ತು. ನಂತರ ಉಪ ಸ್ಪೀಕರ್ ರುದ್ರಪ್ಪ ಲಮಾಣಿ ಅವರು ಸ್ಪೀಕರ್ ಹುದ್ದೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.
ಆದರೆ, ಆಗಸ್ಟ್ 3ರಂದು ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ರುದ್ರಪ್ಪ ಲಮಾಣಿ ಅವರೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸಚಿವ ಸಂಪುಟಕ್ಕೆ ಸೇರ್ಪಡೆಯಾದರು. ಇದರಿಂದ ವಿಧಾನಸಭೆಯಲ್ಲಿ ಸ್ಪೀಕರ್ ಹಾಗೂ ಉಪ ಸ್ಪೀಕರ್ ಎರಡೂ ಹುದ್ದೆಗಳು ಖಾಲಿಯಾದಂತಾಯಿತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಹಿರಿಯ ಕಾಂಗ್ರೆಸ್ ಶಾಸಕ ಟಿ.ಬಿ. ಜಯಚಂದ್ರ ಅವರನ್ನು ಆಗಸ್ಟ್ 3ರಂದು ಪ್ರೊ-ಟೆಮ್ ಸ್ಪೀಕರ್ ಆಗಿ ನೇಮಕ ಮಾಡಿದ್ದು, ವಿಧಾನಸಭೆಯಲ್ಲಿ ನೂತನ ಸ್ಪೀಕರ್ ಆಯ್ಕೆಯಾಗುವವರೆಗೆ ಅವರು ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

ಇದರ ನಡುವೆ, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಮತ್ತು ಉಪ ಸ್ಪೀಕರ್ ಹುದ್ದೆಗಳಿಗೆ ಕಾಂಗ್ರೆಸ್ ಹೈಕಮಾಂಡ್ ತನ್ನ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಜಿ.ಎಸ್. ಪಾಟೀಲ್ ಅವರನ್ನು ಸ್ಪೀಕರ್ ಹುದ್ದೆಗೆ ಹಾಗೂ ಎ.ಎಸ್. ಪೊನ್ನಣ್ಣ ಅವರನ್ನು ಉಪ ಸ್ಪೀಕರ್ ಹುದ್ದೆಗೆ ಪಕ್ಷದ ಅಭ್ಯರ್ಥಿಗಳನ್ನಾಗಿ ಅನುಮೋದಿಸಲಾಗಿದೆ. ವಿಪಕ್ಷಗಳ ಅಭ್ಯರ್ಥಿ ಘೋಷಣೆಯಾಗಬೇಕಿದೆ.
ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಹೊಂದಿರುವ ಹಿನ್ನೆಲೆಯಲ್ಲಿ, ಜಿ.ಎಸ್. ಪಾಟೀಲ್ ಸ್ಪೀಕರ್ ಆಗಿ ಮತ್ತು ಎ.ಎಸ್. ಪೊನ್ನಣ್ಣ ಉಪ ಸ್ಪೀಕರ್ ಆಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

ಪ್ರಮುಖ ಸುದ್ದಿ :-   ಅಳ್ನಾವರ : ಶಾಲಾ ವಾಹನ ಗುದ್ದಿ 2 ವರ್ಷದ ಮಗು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement