ಹಾಸನ : ಎರಡು ಕಾಡಾನೆಗಳು ಭೀಕರ ಕಾದಾಟನಡೆಸಿ ಎರಡು ಮರಗಳನ್ನು ನೆಲಕ್ಕುರುಳಿಸಿದ್ದರಿಂದ ಮನೆಯೊಂದು ಜಖಂಗೊಂಡಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಮನೆಯೊಂದರ ಸಮೀಪವೇ ಕೌರಿಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ತಾಲೂಕಿನ ಮಲೆನಾಡು ಭಾಗದ ವಿವಿಧ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಪೈಕಿ 30ರಿಂದ 40ಕ್ಕೂ ಹೆಚ್ಚು ಆನೆಗಳು ಕೌರಿಗ್ರಾಮದ ಸುತ್ತಮುತ್ತ ಸಂಚರಿಸುತ್ತಿವೆ. ಹಿಂಡಿನಿಂದ ಬೇರ್ಪಟ್ಟ ಮದವೇರಿದ ಎರಡು ಕಾಡಾನೆಗಳು ಕೌರಿಗ್ರಾಮದ ವಾಸದ ಮನೆಗಳ ಸಮೀಪವೇ ಬೆಳಗಿನ ಜಾವ ಕಾದಾಟಕ್ಕಿಳಿದಿವೆ. ಪರಸ್ಪರ ಕಾದಾಡಿಕೊಂಡ ಈ ಆನೆಗಳು ಎದುರಿಗೆ ಸಿಕ್ಕ ಗಿಡ-ಮರಗಳನ್ನು ಉರುಳಿಸಿವೆ.
ಆನೆಗಳ ಕಾದಾಟದ ವೇಳೆ ಉರುಳಿದ ಮರಗಳು ಗ್ರಾಮದ ಮನೆಯೊಂದರ ಮೇಲೆ ಬಿದ್ದ ಪರಿಣಾಮ ಮನೆ ಜಖಂಗೊಂಡಿದೆ. ಮನೆಯ ಹೆಂಚುಗಳು, ಮರದ ವಸ್ತುಗಳು ಹಾಗೂ ಮನೆಗೆ ಹೊಂದಿಕೊಂಡಿದ್ದ ಶೆಡ್ ಕೂಡ ಹಾನಿಗೊಳಗಾಗಿದೆ. ಎರಡು ಕಾಡಾನೆಗಳು ಮನೆಯ ಸಮೀಪವೇ ಕಾದಾಡುತ್ತಿರುವ ದೃಶ್ಯವನ್ನು ಕಣ್ಣಾರೆ ಕಂಡ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಗ್ರಾಮದ ಪುಟ್ಟಮ್ಮ ಎಂಬುವವರ ಮನೆಯ ಬಳಿ ಹದಿಮೂರು ಕಾಡಾನೆಗಳು ಬೀಡುಬಿಟ್ಟಿವೆ ಎನ್ನಲಾಗಿದೆ. ಬೆಳಿಗ್ಗೆಯಿಂದಲೂ ಮದಗಜಗಳು ಕಾದಾಟ ಕಾದಾಟ ನಡೆಸುತ್ತಿದ್ದು, ಮರಗಳು ಮನೆಯ ಮೇಲೆ ಬಿದ್ದಿದ್ದು, ಮನೆಗೆ ಹಾನಿಯಾಗಿದೆ. ಪುಟ್ಟಮ್ಮ ಅವರ ಕುಟುಂಬವನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ ಎಂದು ಹೇಳಲಾಗಿದೆ. ಗ್ರಾಮಸ್ಥರಿಗೆ ಮನೆಯಿಂದ ಹೊರ ಹೋಗುವ ಮುಂಚೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಗ್ರಾಮಸ್ಥರು ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ