ಕಾರವಾರ : ವೀಸಾ ಅವಧಿ ಮುಕ್ತಾಯಗೊಂಡಿದ್ದರೂ ಭಾರತದಲ್ಲೇ ಉಳಿದುಕೊಂಡಿದ್ದ ಇಸ್ರೇಲ್ ಪ್ರಜೆಯೊಬ್ಬರನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಇಸ್ರೇಲ್ ಮೂಲದ ಮಾರ್ಚಾವಿ ಅಸ್ಸಾಪ್ ಎಂಬಾತನನ್ನು ಹೊನ್ನಾವರ ತಾಲೂಕಿನ ಹಳದಿಪುರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಇವರ ಭಾರತ ಪ್ರವಾಸದ ವೀಸಾ ಅವಧಿ 2025ರ ಏಪ್ರಿಲ್ನಲ್ಲೇ ಮುಕ್ತಾಯಗೊಂಡಿದ್ದರೂ ಅವರು ಭಾರತದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶಿ ಪ್ರಜೆಯ ವೀಸಾ ನಿಯಮ ಉಲ್ಲಂಘನೆಯ ಕುರಿತು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಗೋಕರ್ಣದಿಂದ ಮುರುಡೇಶ್ವರದತ್ತ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೇಳೆ ಹಳದಿಪುರ ಪ್ರದೇಶದಲ್ಲಿ ಹೊನ್ನಾವರ ಪೊಲೀಸರ ಗಮನಕ್ಕೆ ಬಂದ ಅಸ್ಸಾಪ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಅವರನ್ನು ಬೆಂಗಳೂರಿನ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (FRRO)ಗೆ ಹಸ್ತಾಂತರಿಸಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.


ನಿಮ್ಮ ಕಾಮೆಂಟ್ ಬರೆಯಿರಿ