ನವದೆಹಲಿ: ದ್ವೇಷ ಮತ್ತು ಹಿಂಸೆ ಶಿಕ್ಷಣದ ವಿಷಯಗಳಲ್ಲ ಮತ್ತು ಶಾಲಾ ಪಠ್ಯಪುಸ್ತಕಗಳು ಅವುಗಳ ಮೇಲೆ ಕೇಂದ್ರೀಕರಿಸಬಾರದು ಎಂದು ದೇಶದ ಉನ್ನತ ಶಿಕ್ಷಣ ಸಂಸ್ಥೆ ಎನ್ಸಿಇಆರ್ಟಿ (NCERT)ಯ ಮುಖ್ಯಸ್ಥರು ಹೇಳಿದ್ದಾರೆ.
ಶಾಲಾ ಪಠ್ಯಪುಸ್ತಕಗಳಲ್ಲಿ ಗಲಭೆಗಳ (Riots) ಬಗ್ಗೆ ಪಾಠ ಮಾಡುವುದರಿಂದ ಹಿಂಸಾತ್ಮಕ ವ್ಯಕ್ತಿತ್ವಗಳ ನಿರ್ಮಾಣ ಆಗಬಹುದು ಎಂದು ಎನ್ಸಿಇಆರ್ಟಿ ನಿರ್ದೇಶಕ ದಿನೇಶ ಪ್ರಸಾದ ಸಕ್ಲಾನಿ (Dinesh Prasad Saklani) ಹೇಳಿದ್ದಾರೆ. ಪಠ್ಯದಲ್ಲಿ ಗುಜರಾತ್ ಗಲಭೆ ಘಟನೆಗಳು ಮತ್ತು ಬಾಬರಿ ಮಸೀದಿ ಧ್ವಂಸ ಘಟನೆಯನ್ನು ತೆಗೆದುಹಾಕಿರುವ ವಿಚಾರದ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. ಶಿಕ್ಷಣದಲ್ಲಿ ಕೇಸರೀಕರಣ ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ.
ಪಿಟಿಐ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಪ್ರತಿ ವರ್ಷ ನಡೆಸುವ ಪರಿಷ್ಕರಣೆ ಭಾಗವಾಗಿ ಪಠ್ಯಪುಸ್ತಕಗಳಲ್ಲಿ ಬದಲಾವಣೆ ಮಾಡಲಾಗಿದೆ. ಇದು ವಿವಾದ ಎಬ್ಬಿಸುವಂತಹ ವಿಷಯವಲ್ಲ’ ಎಂದು ಹೇಳಿದ್ದಾರೆ.
ಬಾಬರಿ ಮಸೀದಿ ಧ್ವಂಸ ಅಥವಾ ಅದರ ಹಿನ್ನೆಲೆಯಲ್ಲಿ ಕೋಮು ಹಿಂಸಾಚಾರದ ಉಲ್ಲೇಖಗಳನ್ನು ಏಕೆ ತೆಗೆದುಹಾಕಲಾಗಿದೆ ಎಂದು ಕೇಳಿದಾಗ ಶಾಲಾ ಪಠ್ಯಪುಸ್ತಕಗಳಲ್ಲಿ ಗಲಭೆಗಳ ಬಗ್ಗೆ ಏಕೆ ಕಲಿಸಬೇಕು? ನಾವು ಸಕಾರಾತ್ಮಕ ನಾಗರಿಕರನ್ನು ಸೃಷ್ಟಿಸಲು ಬಯಸುತ್ತೇವೆಯೇ ಹೊರತು ಹಿಂಸಾತ್ಮಕ ಮತ್ತು ಖಿನ್ನತೆಗೆ ಒಳಗಾದ ವ್ಯಕ್ತಿಗಳನ್ನಲ್ಲ” ಎಂದು ಅವರು ಉತ್ತರಿಸಿದ್ದಾರೆ.
12ನೇ ತರಗತಿಯ ಹೊಸ ರಾಜ್ಯಶಾಸ್ತ್ರ ಪಠ್ಯಪುಸ್ತಕವು ಡಿಸೆಂಬರ್ 6, 1992 ರಂದು ಕೆಡವಲಾದ ಅಯೋಧ್ಯೆಯ ಬಾಬರಿ ಮಸೀದಿಯನ್ನು “ಮೂರು-ಗುಮ್ಮಟಗಳ ರಚನೆ” ಎಂದು ವಿವರಿಸುತ್ತದೆ ಮತ್ತು ರಾಮ ಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟ ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ಕೇಂದ್ರೀಕರಿಸುತ್ತದೆ.
ರಾಮಮಂದಿರ, ಬಾಬರಿ ಮಸೀದಿ ಅಥವಾ ರಾಮಜನ್ಮಭೂಮಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೆ, ಅದನ್ನು ನಮ್ಮ ಪಠ್ಯಪುಸ್ತಕಗಳಲ್ಲಿ ಸೇರಿಸಬಾರದೇ..? ಅದರಲ್ಲಿ ಸಮಸ್ಯೆ ಏನಿದೆ? ನಾವು ಹೊಸ ನವೀಕರಣದ ವೇಳೆ ಸೇರಿಸಿದ್ದೇವೆ. ನಾವು ಹೊಸ ಸಂಸತ್ತನ್ನು ನಿರ್ಮಿಸಿದ್ದರೆ ಅದನ್ನು ನಮ್ಮ ವಿದ್ಯಾರ್ಥಿಗಳು ತಿಳಿದುಕೊಳ್ಳುವುದು ಬೇಡವೇ..? ಪುರಾತನ ಕಾಲದ ಬೆಳವಣಿಗೆಗಳು ಮತ್ತು ಇತ್ತೀಚಿನ ಬೆಳವಣಿಗೆಗಳನ್ನು ಸೇರಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಕೇಸರಿಕರಣದ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಕ್ಲಾನಿ, “ಏನಾದರೂ ಅಪ್ರಸ್ತುತವಾಗಿದ್ದರೆ, ಅದನ್ನು ಬದಲಾಯಿಸಬೇಕಾಗುತ್ತದೆ. ಅದನ್ನು ಏಕೆ ಬದಲಾಯಿಸಬಾರದು? ನಾನು ಇಲ್ಲಿ ಯಾವುದೇ ಕೇಸರಿಕರಣವನ್ನು ನೋಡುವುದಿಲ್ಲ. ನಾವು ಇತಿಹಾಸವನ್ನು ಕಲಿಸುವುದು ವಿದ್ಯಾರ್ಥಿಗಳು ವಾಸ್ತವಗಳ ಬಗ್ಗೆ ತಿಳಿಯಲಿ ಎಂದು. ಅದನ್ನು ಯುದ್ಧಭೂಮಿಯನ್ನಾಗಿ ಮಾಡುವುದಕ್ಕಾಗಿ ಅಲ್ಲ” ಎಂದು ಹೇಳಿದರು.
ಎನ್ಸಿಇಆರ್ಟಿ ಮುಖ್ಯಸ್ಥರು ಭಾರತೀಯ ಜ್ಞಾನ ವ್ಯವಸ್ಥೆಯ ಬಗ್ಗೆ ಬೋಧನೆ ಹೇಗೆ ಕೇಸರಿಕರಣವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. “ನಾವು ಮೆಹ್ರೌಲಿಯಲ್ಲಿ ಕಬ್ಬಿಣದ ಕಂಬದ ಬಗ್ಗೆ ಹೇಳುತ್ತಿದ್ದರೆ ಮತ್ತು ಭಾರತೀಯರು ಯಾವುದೇ ಲೋಹಶಾಸ್ತ್ರದ ವಿಜ್ಞಾನಿಗಳಿಗಿಂತ ಹೆಚ್ಚು ಮುಂದಿದ್ದರೆಂದು ಹೇಳಿದರೆ ಅದು ತಪ್ಪಾಗುತ್ತದೆಯೇ? ಅದು ಕೇಸರಿಕರಣವಾಗುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
61 ವರ್ಷದ ಎನ್ಸಿಇಆರ್ಟಿ ನಿರ್ದೇಶಕರಾದ ದಿನೇಶ ಪ್ರಸಾದ ಸಕ್ಲಾನಿ ಅವರು 2022 ರಲ್ಲಿ ಎನ್ಸಿಇಆರ್ಟಿಯ ಅಧಿಕಾರ ವಹಿಸಿಕೊಳ್ಳುವ ಮೊದಲು ಹೇಮಾವತಿ ನಂದನ್ ಬಹುಗುಣ ಗರ್ವಾಲ್ ವಿಶ್ವವಿದ್ಯಾಲಯದಲ್ಲಿ ಪ್ರಾಚೀನ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದರು.
ಪಠ್ಯಪುಸ್ತಕಗಳನ್ನು ನವೀಕರಿಸುವುದು ಜಾಗತಿಕ ಅಭ್ಯಾಸ ಮತ್ತು ಶಿಕ್ಷಣದ ಹಿತದೃಷ್ಟಿಯ ಕಾರಣಕ್ಕೆ ಎಂದು ಅವರು ಹೇಳಿದರು. “ಯಾವುದೇ ಬದಲಾವಣೆಯನ್ನು ವಿಷಯ ಮತ್ತು ಶಿಕ್ಷಣ ತಜ್ಞರು ನಿರ್ಧರಿಸುತ್ತಾರೆ. ನಾನು ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಮೇಲಿನಿಂದ ಯಾವುದೇ ಹೇರಿಕೆ ಇಲ್ಲ” ಎಂದು ಅವರು ಹೇಳಿದರು.
ಇದು 2014 ರಿಂದ ಎನ್ಸಿಇಆರ್ಟಿ (NCERT) ಪಠ್ಯಪುಸ್ತಕಗಳ ನಾಲ್ಕನೇ ಸುತ್ತಿನ ಪರಿಷ್ಕರಣೆಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ